ಬೆಂಗಳೂರು: ಪಾನ್ ಮಸಾಲಾ, ಗುಟ್ಕಾ ಅಥವಾ ಅಡಿಕೆಯಲ್ಲಿ ಕಿಂಚಿತ್ ಅಮಲು ಪದಾರ್ಥ (ಮಾದಕ ದ್ರವ್ಯ) ಬೆರೆಸಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ‘ನಶಾ ಮುಕ್ತ ಭಾರತ ಅಭಿಯಾನ’ದ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಯುವ ಪೀಳಿಗೆಯ ರಕ್ಷಣೆ ನಮ್ಮ ಕರ್ತವ್ಯ:
ಕೆಲವು ತಯಾರಕರು ಗ್ರಾಹಕರಿಗೆ ಮಾದಕ ವ್ಯಸನದ ಕಿಕ್ ನೀಡಲು ಗುಟ್ಕಾ ಮತ್ತು ಪಾನ್ ಮಸಾಲಾಗಳಲ್ಲಿ ಅಮಲು ಪದಾರ್ಥಗಳನ್ನು ಬೆರಕೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. “ಇದು ನಿಜವೇ ಆಗಿದ್ದರೆ ಮತ್ತು ಇದನ್ನು ತಕ್ಷಣವೇ ನಿಲ್ಲಿಸದಿದ್ದರೆ, ರಾಜ್ಯಾದ್ಯಂತ ಇಂತಹ ಉತ್ಪನ್ನಗಳನ್ನು ಸಂಪೂರ್ಣ ನಿಷೇಧಿಸಲು ಸರ್ಕಾರ ಹಿಂಜರಿಯುವುದಿಲ್ಲ. ‘ಮಾದಕದ್ರವ್ಯ ಮುಕ್ತ ಕರ್ನಾಟಕ’ ನಿರ್ಮಿಸುವುದು ನಮ್ಮ ಪ್ರಮುಖ ಗುರಿಯಾಗಿದ್ದು, ಯುವ ಪೀಳಿಗೆ ಈ ಜಾಲಕ್ಕೆ ಸಿಲುಕದಂತೆ ತಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ” ಎಂದು ಸಿಎಂ ತಿಳಿಸಿದರು.
ದೇಶದ ವೈದ್ಯಕೀಯ ರಾಜಧಾನಿ ಕರ್ನಾಟಕ:
ರಾಜ್ಯದ ಆರೋಗ್ಯ ರಂಗದ ಮೂಲಸೌಕರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, “ಕರ್ನಾಟಕದಲ್ಲಿ ಪ್ರಸ್ತುತ 70 ವೈದ್ಯಕೀಯ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯದಲ್ಲೂ ಇಷ್ಟೊಂದು ಸಂಖ್ಯೆಯ ಮೆಡಿಕಲ್ ಕಾಲೇಜುಗಳಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕವು ದೇಶದ ‘ವೈದ್ಯಕೀಯ ರಾಜಧಾನಿ’ಯಾಗಿ ಹೊರಹೊಮ್ಮಿದೆ” ಎಂದರು. ಇದೇ ವೇಳೆ ವಿಶ್ವವಿದ್ಯಾಲಯವನ್ನು ದೂರದೃಷ್ಟಿಯಿಂದ ಆರಂಭಿಸಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಅರ್ಪಿಸಿದ ಅವರು, ಶೀಘ್ರದಲ್ಲೇ ಈ ಬೃಹತ್ ವಿವಿಯು ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಕ್ಯಾಂಪಸ್ಗೆ ಸ್ಥಳಾಂತರಗೊಳ್ಳಲಿದೆ ಎಂದು ಪ್ರಕಟಿಸಿದರು.





Leave a comment