Home ದಾವಣಗೆರೆ ಜಗ್ಗೇಶ್‌ಗೆ ನಟಿ ವಿಜಯಲಕ್ಷ್ಮಿ ಚಪ್ಪಲಿಯಲ್ಲಿ ಹೊಡೆದಿದ್ದು ನಿಜವೇ? ‘ರಂಗಣ್ಣ’ ಸೆಟ್‌ನ ಕರಾಳ ರಹಸ್ಯ ಬಿಚ್ಚಿಟ್ಟ ನಟಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಸಿನಿಮಾ

ಜಗ್ಗೇಶ್‌ಗೆ ನಟಿ ವಿಜಯಲಕ್ಷ್ಮಿ ಚಪ್ಪಲಿಯಲ್ಲಿ ಹೊಡೆದಿದ್ದು ನಿಜವೇ? ‘ರಂಗಣ್ಣ’ ಸೆಟ್‌ನ ಕರಾಳ ರಹಸ್ಯ ಬಿಚ್ಚಿಟ್ಟ ನಟಿ!

Share
ವಿಜಯಲಕ್ಷ್ಮಿ
Share

ಬೆಂಗಳೂರು: ಬಣ್ಣದ ಲೋಕದಲ್ಲಿ ಒಮ್ಮೆ ವದಂತಿಗಳು (ರೂಮರ್) ಹಬ್ಬಿದರೆ, ಅದು ಒಬ್ಬ ಕಲಾವಿದೆಯ ಇಡೀ ಭವಿಷ್ಯವನ್ನೇ ಹೇಗೆ ಕಸಿದುಕೊಳ್ಳಬಹುದು ಎಂಬುದಕ್ಕೆ ನಟಿ ವಿಜಯಲಕ್ಷ್ಮಿ ಅವರ ಬದುಕಿನಲ್ಲಿ ನಡೆದ ‘ಚಪ್ಪಲಿ ಪೆಟ್ಟಿನ’ ವಿವಾದವೇ ದೊಡ್ಡ ಉದಾಹರಣೆ.

ಕೇವಲ 17-18 ವರ್ಷದ ಎಳೆಯ ವಯಸ್ಸಿನಲ್ಲೇ ಸ್ಟಾರ್ ನಟಿಯಾಗಿ ಬೆಳೆಯುತ್ತಿದ್ದ ವಿಜಯಲಕ್ಷ್ಮಿ ಅವರಿಗೆ ‘ನವರಸ ನಾಯಕ’ ಜಗ್ಗೇಶ್ ಅವರಿಗೆ ಚಪ್ಪಲಿಯಲ್ಲಿ ಹೊಡೆದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಅಷ್ಟಕ್ಕೂ ಅಂದು ‘ರಂಗಣ್ಣ’ ಸಿನಿಮಾದ ಸೆಟ್‌ನಲ್ಲಿ ನಿಜಕ್ಕೂ ಆಗಿದ್ದೇನು ಎಂಬುದನ್ನು ವಿಜಯಲಕ್ಷ್ಮಿ ಅವರು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಖುಷಿಯಾಗಿಯೇ ಇತ್ತು ರಂಗಣ್ಣ ಶೂಟಿಂಗ್!

‘ನಾಗಮಂಡಲ’ ಮತ್ತು ‘ಜೋಡಿಹಕ್ಕಿ’ ಚಿತ್ರಗಳ ಯಶಸ್ಸಿನ ನಂತರ ವಿಜಯಲಕ್ಷ್ಮಿ ಅವರಿಗೆ ಸಾ.ರಾ. ಗೋವಿಂದು ನಿರ್ಮಾಣದ ‘ರಂಗಣ್ಣ’ ಚಿತ್ರದಲ್ಲಿ ಜಗ್ಗೇಶ್ ಎದುರು ನಟಿಸುವ ಅವಕಾಶ ಸಿಕ್ಕಿತು. “ಜಗ್ಗೇಶ್ ಸರ್ ಎಂದರೆ ನನಗೆ ಅಪಾರ ಗೌರವ. ಅವರು ಸೆಟ್‌ನಲ್ಲಿ ನಮ್ಮನ್ನು ಸದಾ ನಗಿಸುತ್ತಿದ್ದರು. ಆರಂಭದಲ್ಲಿ ನನ್ನ ಬಳಿ ದೊಡ್ಡ ಮೇಕಪ್ ಕಿಟ್ ಇರಲಿಲ್ಲ. ಆಗ ಸ್ವತಃ ಜಗ್ಗೇಶ್ ಅವರೇ ನನಗೆ ಮೇಕಪ್ ಕಿಟ್, ಲಿಪ್‌ಸ್ಟಿಕ್ ಕೊಡಿಸಿ ಕಾಳಜಿ ಮಾಡಿದ್ದರು. ನಾವಿಬ್ಬರೂ ಬಹಳ ಖುಷಿಯಿಂದಲೇ ಶೂಟಿಂಗ್ ಮುಗಿಸಿದ್ದೆವು” ಎಂದು ವಿಜಯಲಕ್ಷ್ಮಿ ನೆನಪಿಸಿಕೊಂಡಿದ್ದಾರೆ.

ಮರುದಿನವೇ ಶುರುವಾಯ್ತು ಕರಾಳ ವದಂತಿ!

ಯಾವುದೇ ಮನಸ್ತಾಪವಿಲ್ಲದೆ ಶೂಟಿಂಗ್ ಮುಗಿಸಿ ಮನೆಗೆ ಬಂದಿದ್ದ ವಿಜಯಲಕ್ಷ್ಮಿ ಅವರಿಗೆ ಮಾರನೇ ದಿನ ದೊಡ್ಡ ಆಘಾತ ಕಾದಿತ್ತು. “ನೀವು ಜಗ್ಗೇಶ್ ಅವರಿಗೆ ಚಪ್ಪಲಿಯಲ್ಲಿ ಹೊಡೆದುಬಿಟ್ಟಿರಾ?” ಎಂಬ ಪ್ರಶ್ನೆಗಳ ಸುರಿಮಳೆ ಶುರುವಾಯಿತು. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಇಡೀ ಗಾಂಧಿನಗರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. “ಖಂಡಿತ ಇಲ್ಲ, ನನಗೂ ಮತ್ತು ಜಗ್ಗೇಶ್ ಸರ್‌ಗೂ ಪರ್ಸನಲ್ ಆಗಿ ಯಾವುದೇ ಜಗಳವಾಗಿರಲಿಲ್ಲ. ಜಗ್ಗೇಶ್ ಅವರಿಗೂ ಫೋನ್ ಮಾಡಿ ವಿಚಾರಿಸಿದಾಗ, ಹೌದಮ್ಮ ನನಗೂ ಆ ಸುದ್ದಿ ಬಂದಿದೆ ಎಂದಿದ್ದರು” ಎಂದು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನಿಗಳ ಬೆದರಿಕೆ, ಕೈತಪ್ಪಿದ ಸಿನಿಮಾಗಳು ಮತ್ತು ಡಿಪ್ರೆಶನ್!

ಸುದ್ದಿ ಹಬ್ಬಿದ್ದೇ ತಡ, ಜಗ್ಗೇಶ್ ಅಭಿಮಾನಿ ಸಂಘಗಳಿಂದ ವಿಜಯಲಕ್ಷ್ಮಿ ಅವರಿಗೆ ಪ್ರಾಣ ಬೆದರಿಕೆ ಕರೆಗಳು ಬರಲಾರಂಭಿಸಿದವು. ಈ ಸುಳ್ಳು ವದಂತಿಯ ಪರಿಣಾಮ ಅವರು ಅಡ್ವಾನ್ಸ್ ಪಡೆದಿದ್ದ ಎಷ್ಟೋ ಸಿನಿಮಾಗಳನ್ನು ನಿರ್ಮಾಪಕರು ವಾಪಸ್ ಕಿತ್ತುಕೊಂಡರು. ತಮಗೇನು ನಡೆಯುತ್ತಿದೆ ಎಂದೇ ತಿಳಿಯದ ವಿಜಯಲಕ್ಷ್ಮಿ ಅವರು ತೀವ್ರವಾದ ಖಿನ್ನತೆಗೆ (Depression) ಜಾರಿದರು. ವಿವಾದ ಫಿಲಂ ಚೇಂಬರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಳಿಗೂ ಹೋಯಿತು. ಆದರೆ ಅಂದು ಸ್ಮಾರ್ಟ್‌ಫೋನ್ ಅಥವಾ ವಿಡಿಯೋ ಪ್ರೂಫ್‌ಗಳು ಇಲ್ಲದ ಕಾರಣ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ವಿಜಯಲಕ್ಷ್ಮಿ ಪರದಾಡಬೇಕಾಯಿತು.

ದೇವರಂತೆ ಬಂದು ರಕ್ಷಿಸಿದ ಪಾರ್ವತಮ್ಮ ರಾಜ್‌ಕುಮಾರ್!

ಎಲ್ಲಿ ಹೋದರೂ ವಿಜಯಲಕ್ಷ್ಮಿ ಅವರನ್ನು ಬ್ಯಾನ್ ಮಾಡುವ ಮಾತುಗಳು ಕೇಳಿಬರುತ್ತಿದ್ದಾಗ, ಅವರ ಪಾಲಿಗೆ ದೇವರಂತೆ ಬಂದವರೇ ದೊಡ್ಡಮನೆಯ ಪಾರ್ವತಮ್ಮ ರಾಜ್‌ಕುಮಾರ್. ಖಿನ್ನತೆಯಲ್ಲಿದ್ದ ವಿಜಯಲಕ್ಷ್ಮಿ ಅವರನ್ನು ಆಫೀಸ್‌ಗೆ ಕರೆಸಿಕೊಂಡ ಪಾರ್ವತಮ್ಮ, ಕೇವಲ ಒಂದೇ ಒಂದು ದಿನದಲ್ಲಿ ಇಡೀ ವಿವಾದಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಿದರು.

“ಇದೆಲ್ಲಾ ಪ್ರೊಫೆಷನ್‌ನಲ್ಲಿ ಇದ್ದಿದ್ದೇ, ಮನಸ್ಸಿಗೆ ಹಚ್ಚಿಕೊಳ್ಳಬೇಡ. ನೀನು ಹೊಡೆದಿಲ್ಲ ಎಂದು ನಿನಗೆ ಗೊತ್ತಲ್ಲ? ಧೈರ್ಯವಾಗಿ ಮುಂದೆ ಸಾಗು. ಅಪ್ಪಾಜಿ (ಡಾ. ರಾಜ್‌ಕುಮಾರ್) ಅವರಿಗೂ ಹೀಗೆಲ್ಲಾ ಅಪಪ್ರಚಾರ ಮಾಡಿ ನೋವು ಕೊಟ್ಟಿದ್ದಾರೆ” ಎಂದು ಧೈರ್ಯ ತುಂಬಿದರು.

ಅಷ್ಟೇ ಅಲ್ಲದೆ, ಪಾರ್ವತಮ್ಮ ಅವರು ರಾಘವೇಂದ್ರ ರಾಜ್‌ಕುಮಾರ್ ನಟನೆಯ ‘ಸ್ವಸ್ತಿಕ್’ ಸಿನಿಮಾಗೆ ವಿಜಯಲಕ್ಷ್ಮಿ ಅವರನ್ನು ನಾಯಕಿಯನ್ನಾಗಿ ಮಾಡುವ ಮೂಲಕ ಅವರಲ್ಲಿ ಮತ್ತೆ ಆತ್ಮವಿಶ್ವಾಸ ತುಂಬಿ, ಚಿತ್ರರಂಗದಲ್ಲಿ ಮರುಜೀವ ನೀಡಿದರು.

Share

Leave a comment

Leave a Reply

Your email address will not be published. Required fields are marked *

Related Articles