ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಬಿ. ಪಿ. ಹರೀಶ್ ಅವರ ಮೇಲೆ ಮೊಟ್ಟೆ ತೂರಲಾದ ಘಟನೆಯನ್ನು ಪ್ರಸ್ತಾಪಿಸಿ, ಮಲ್ಲಿಕಾರ್ಜುನ್ ಅವರು ಏಕವಚನದಲ್ಲೇ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರೂ ಆದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದೇವೆ. ಅವ್ನು ಹೇಳ್ದಂಗೆ ಯಾರೂ ಕೇಳಲ್ಲ ಎಂದು ಕೆಂಡಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಬೆಂಗಳೂರಿನಲ್ಲಿ ತತ್ತಿ (ಮೊಟ್ಟೆ)ಯಲ್ಲಿ ಹೊಡೆಸಿಕೊಂಡಿದ್ದಾನೆ ಅಲ್ವ. ಅವ್ನಿಗೆ ಯಾಕೆ ಬೇಕಾಗಿತ್ತು?” ಎಂದು ವ್ಯಂಗ್ಯವಾಡಿದರು.
ಮುಂದುವರಿದು ಮಾತನಾಡಿದ ಅವರು, “ಹರಿಹರದಲ್ಲಿ ಯಾವುದೇ ಕೆಲಸಗಳು ಆಗಬೇಕಾದರೆ ಒಳ್ಳೆಯ ಕೆಲಸ ಮಾಡಲು ಹೇಳಿ. ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದೇವೆ, ನಮ್ಮದು ಕಾಂಗ್ರೆಸ್ ಸರ್ಕಾರ. ಅವ್ನು ಹೇಳಿದಂತೆ ಯಾರೂ ಕೇಳಲ್ಲ,” ಎಂದು ಕಡಾಖಂಡಿತವಾಗಿ ಹೇಳಿದರು. ಶಾಸಕರು ಅನಗತ್ಯ ರಾಜಕೀಯ ಆರೋಪಗಳನ್ನು ಮಾಡುವ ಬದಲು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಗಮನಹರಿಸಲಿ ಎಂದು ಸಚಿವರು ಸಲಹೆ ನೀಡಿದರು.





Leave a comment