ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕಳೆದ 13 ವರ್ಷಗಳಿಂದ ಬಗೆಬಗೆಯ, ಬಣ್ಣಬಣ್ಣದ ಘೋಷಣೆಗಳೆಂಬ ‘ಚಾಕ್ಲೇಟ್’ಗಳನ್ನು ನೀಡುತ್ತಾ ಜನರನ್ನು ಮೂರ್ಖರಾಗಿಸುತ್ತಿದ್ದಾರೆ ಎಂದು ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಲೇವಡಿ ಮಾಡಿದ್ದಾರೆ.
ಗುಜರಾತ್ ಮಾಡೆಲ್, ಅಚ್ಚೇದಿನ್, ವಿಶ್ವಗುರು, ಮೇಕ್ ಇನ್ ಇಂಡಿಯಾ, ಖೇಲೋ ಇಂಡಿಯಾ, ಅಮೃತ್ ಕಾಲ್, ವಿಕಸಿತ್ ಭಾರತ್, ಸ್ಟಾರ್ಟ್ ಅಪ್ ಇಂಡಿಯಾ ಸ್ಕಿಲ್ ಇಂಡಿಯಾ, ಆತ್ಮ ನಿರ್ಭರ ಭಾರತ್, ಬೇಟಿ ಬಚಾವೋ, ಬೇಟಿ ಪಡಾವೋ, ಖೇಲೋ ಇಂಡಿಯಾ, 20 ಲಕ್ಷ ಕೋಟಿ ಪ್ಯಾಕೇಜ್ ಹೀಗೆ, ಮೋದಿಯವರು ಭಾರತೀಯರಿಗೆ ಕೊಟ್ಟಿರುವ ಘೋಷಣೆಗಳೆಂಬ ಚಾಕ್ಲೇಟ್ ಹಲವಾರು! ಪ್ರತಿ ಚುನಾವಣೆಗೊಂದು ಘೋಷಣೆ, ಪ್ರತಿ ವರ್ಷಕ್ಕೊಂದು ಘೋಷಣೆ, ಪ್ರತಿ ವೈಫಲ್ಯಕ್ಕೊಂದು ಘೋಷಣೆ, ಇವುಗಳು ವಾಸ್ತವವಾಗಿದ್ದು ಮಾತ್ರ ಸೊನ್ನೆ. ಭಾರತೀಯರಿಗೆ ಹುಸಿ ಸಂತೋಷವನ್ನು ನೀಡುವ ಈ ಚಾಕ್ಲೇಟ್ ಗಳು ಈಗ ಸಲಹೆಗಳೆಂಬ ಹೊಸ ರೂಪಕ್ಕೆ ತಿರುಗಿವೆ ಎಂದು ಲೇವಡಿ ಮಾಡಿದ್ದಾರೆ.
ಮಕ್ಕಳು ಅಳುವಾಗ ಚಾಕ್ಲೇಟ್ ನೀಡಿ ಸಮಾಧಾನಿಸುವಂತೆ, ದೇಶದ ಜನತೆ ಸಂಕಷ್ಟದಲ್ಲಿರುವಾಗ ಹೊಸ ಹೊಸ ಘೋಷಣೆಗಳನ್ನು ನೀಡಿ ದಾರಿ ತಪ್ಪಿಸಲಾಗುತ್ತಿದೆ. ಗುಜರಾತ್ ಮಾಡೆಲ್, ಅಚ್ಚೇ ದಿನ್, ವಿಶ್ವಗುರು, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಹಾಗೂ ವಿಕಸಿತ್ ಭಾರತ್ ಸೇರಿದಂತೆ ಹತ್ತಾರು ಯೋಜನೆಗಳು ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ವಾಸ್ತವದಲ್ಲಿ ಇವುಗಳ ಸಾಧನೆ ಶೂನ್ಯ ಎಂದು ಅವರು ಟೀಕಿಸಿದ್ದಾರೆ.
ಇಷ್ಟು ದಿನ ಸಿಹಿ ಚಾಕ್ಲೇಟ್ ನೀಡುತ್ತಿದ್ದ ಪ್ರಧಾನಿ, ಈಗ ಬೆಲೆ ಏರಿಕೆಯನ್ನು ಮರೆಮಾಚಲು ಅಡುಗೆ ಎಣ್ಣೆ ಬಳಸಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂಬಂತಹ ಕಹಿ ಸಲಹೆಗಳ (ಕಹಿ ಚಾಕ್ಲೇಟ್) ರೂಪಕ್ಕೆ ಇಳಿದಿದ್ದಾರೆ. ಇದು ದೇಶದ ಪರಿಸ್ಥಿತಿ ಕೈಮೀರಿ ಹೋಗಿರುವುದಕ್ಕೆ ಸಾಕ್ಷಿ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.





Leave a comment