ಹೈದರಾಬಾದ್: ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ACB) ಇತಿಹಾಸದಲ್ಲೇ ಅತ್ಯಂತ ದೊಡ್ಡ ಬೇಟೆ ಆಡಿದ್ದು, ಪೊಲೀಸ್ ಕಂಪ್ಯೂಟರ್ ಸರ್ವಿಸಸ್ (PCS) ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DSP) ಸಂಕೀರೆಡ್ಡಿ ಭೀಮ್ ರೆಡ್ಡಿ ಅವರನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಬಂಧಿಸಿದೆ.
ಹೈದರಾಬಾದ್ನ ಇಬ್ರಾಹಿಂಬಾಗ್ನಲ್ಲಿರುವ ಅವರ ಐಷಾರಾಮಿ ವಿಲ್ಲಾ ಸೇರಿದಂತೆ ತೆಲಂಗಾಣ ಮತ್ತು ಕರ್ನಾಟಕದ ಒಟ್ಟು 16 ಕಡೆಗಳಲ್ಲಿ ಏಕಕಾಲಕ್ಕೆ ನಡೆಸಿದ ದಾಳಿ ಮುಕ್ತಾಯಗೊಂಡ ಬೆನ್ನಲ್ಲೇ ಅಧಿಕಾರಿಗಳು ಈ ಬಂಧನ ಪ್ರಕ್ರಿಯೆ ನಡೆಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?: ಇತ್ತೀಚೆಗೆ ಭೀಮ್ ರೆಡ್ಡಿ ಅವರು ತಮ್ಮ ಪತ್ನಿ ಜೊತೆ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಈ ಪ್ರವಾಸಕ್ಕೆ ಹೋಗುವ ಮುನ್ನ ಅವರು ತಮ್ಮ ಎಲ್ಲಾ ಬೇನಾಮಿ ಆಸ್ತಿಗಳು, ಹೂಡಿಕೆಗಳು ಮತ್ತು ಸಾಲಗಳ ವಿವರಗಳನ್ನು ಸ್ವತಃ ಕೈಬರಹದಲ್ಲಿ ಡೈರಿಯೊಂದರಲ್ಲಿ ಬರೆದಿಟ್ಟಿದ್ದರು.
ಅಷ್ಟೇ ಅಲ್ಲದೆ, ಈ ಡೈರಿಯ ಪುಟಗಳನ್ನು ಸ್ಕ್ಯಾನ್ ಮಾಡಿ ತಮ್ಮ ಇಬ್ಬರು ಮಕ್ಕಳಿಗೆ ವಾಟ್ಸಾಪ್ (WhatsApp) ಮೂಲಕ ಕಳುಹಿಸಿದ್ದರು. ಈ ಡಿಜಿಟಲ್ ಸಾಕ್ಷ್ಯವನ್ನು ಪತ್ತೆ ಹಚ್ಚಿದ ಎಸಿಬಿ ಅಧಿಕಾರಿಗಳು, ಡೈರಿಯಲ್ಲಿದ್ದ ಲಿಸ್ಟ್ ಹಿಡಿದು ದಾಳಿ ನಡೆಸಿದಾಗ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕರಾಳ ಸಾಮ್ರಾಜ್ಯ ಬಯಲಾಗಿದೆ.
ಸಿಕ್ಕ ಭಾರಿ ಆಸ್ತಿಗಳು ಇವು:
ಹೈದರಾಬಾದ್ನ ಗಚ್ಛಿಬೌಲಿ, ಮಾಣಿಕೊಂಡ, ತೆಲ್ಲಾಪುರದಲ್ಲಿ ಐಷಾರಾಮಿ ವಿಲ್ಲಾ, ವಾಣಿಜ್ಯ ಸಂಕೀರ್ಣಗಳು ಮತ್ತು ಫ್ಲಾಟ್ಗಳು.
ಕರ್ನಾಟಕದಲ್ಲಿ 44 ಎಕರೆ (ಬೆಂಗಳೂರಿನ ದೇವನಹಳ್ಳಿಯಲ್ಲಿ 1 ಎಕರೆ ಸೇರಿ) ಹಾಗೂ ತೆಲಂಗಾಣದಲ್ಲಿ 10 ಎಕರೆಗೂ ಹೆಚ್ಚು ಕೃಷಿ ಭೂಮಿ.
₹75 ಲಕ್ಷ ಮೌಲ್ಯದ ರಾಕ್ ಸ್ಯಾಂಡ್ ಮಿನರಲ್ಸ್ ಕಂಪನಿಯಲ್ಲಿ ಹೂಡಿಕೆ.
ದಾಳಿ ವೇಳೆ ಸಿಕ್ಕ 2 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಆಭರಣಗಳು, ₹43.60 ಲಕ್ಷ ನಗದು ಮತ್ತು ₹19.91 ಲಕ್ಷ ಬ್ಯಾಂಕ್ ಬ್ಯಾಲೆನ್ಸ್.
ಭ್ರಷ್ಟ ಅಧಿಕಾರಿಯನ್ನು ಸದ್ಯ ಎಸಿಬಿ ಕೋರ್ಟ್ಗೆ ಹಾಜರುಪಡಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಇದು ಪೊಲೀಸ್ ಇಲಾಖೆಯಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ.





Leave a comment