SUDDIKSHANA KANNADA NEWS/ DAVANAGERE/ DATE:18-02-2024
ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ನವೀಕೃತ ಈಜುಕೊಳದ ಲೋಕಾರ್ಪಣೆ ಫೆ. 20ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ರೀತಿಯ ದೂರು ಬರದಂತೆ ನಿರ್ವಹಿಸಿಕೊಂಡು ಹೋಗುವಂತೆ ಸೂಚಿಸಿದರು.
ನವೀಕೃತ ಈಜುಕೊಳ ಇದಾಗಿದ್ದು, ಸಾರ್ವಜನಿಕರಿಗೆ ಲೋಕಾರ್ಪಣೆಯಾಗುತ್ತಿದೆ. ಬೆಳಿಗ್ಗೆ 6 ಗಂಟೆಯಿಂದ 9ಗಂಟೆಯವರೆಗೆ ಸಾರ್ವಜನಿಕರು, 10 ಗಂಟೆಯಿಂದ 11 ಗಂಟೆಯವರೆಗೆ ಮಹಿಳೆಯರಿಗೆ ಮಾತ್ರ, 12
ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಎಲ್ಲರಿಗೂ ಪ್ರವೇಶ ನೀಡಲಾಗುತ್ತಿದೆ. ಸಂಜೆ ಈಜು ಕಲಿಯುವವರಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ನುರಿತ ಈಜು ತರಬೇತುದಾರರ ನೇಮಕ ಮಾಡಲಾಗಿದೆ.
ಪ್ರತಿ ಗಂಟೆಗೆ 10 ವರ್ಷದೊಳಗಿನ ಮಕ್ಕಳಿಗೆ 40 ರೂಪಾಯಿ, 10 ವರ್ಷ ಮೇಲ್ಪಟ್ಟವರಿಗೆ 60 ರೂಪಾಯಿ ನಿಗದಿಪಡಿಸಲಾಗಿದೆ. ಒಂದು ತಿಂಗಳಿಗೆ ಮಕ್ಕಳಿಗೆ 800 ರೂಪಾಯಿ ಹಾಗೂ ಹಿರಿಯರಿಗೆ 1000 ರೂಪಾಯಿ ನಿಗದಿ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ಈಜುಕೊಳದ ಮೇಲುಸ್ತುವಾರಿ ಮಧು ಎಂಬುವವರು ನೋಡಿಕೊಳ್ಳಲಿದ್ದು, ತರಬೇತುದಾರರ ನೇಮಕ ಮಾಡಲಾಗಿದೆ.
ಇಂದು ಈಜುಕೊಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಗಡಿಗುಡಾಳ್ ಮಂಜುನಾಥ್ ಅವರು, ಸಿದ್ಧತೆ ಪರಿಶೀಲನೆ ನಡೆಸಿದರು. ನಗರದ ಜನರಿಗೋಸ್ಕರ ಈ ಈಜುಕೊಳ ನವೀಕರಣಗೊಳಿಸಲಾಗಿದೆ. ಇದು ಜನರಿಗಾಗಿ ರೂಪಿಸಲಾಗಿದೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಸಾರ್ವಜನಿಕರು ಹಾಗೂ ಮಕ್ಕಳಿಗೆ ಕರೆ ನೀಡಿದರು.
ಈ ಈಜುಕೊಳವು ಉತ್ತಮ ನಿರ್ವಹಣೆ ಆಗಬೇಕು. ಯಾವುದೇ ರೀತಿಯ ದೂರು ಬರಬಾರದು. ಅವಘಡ ಸಂಭವಿಸದಂತೆ ನೋಡಿಕೊಳ್ಳಬೇಕು. ನೀರನ್ನು ಆಗಾಗ್ಗೆ ಬದಲಾಯಿಸಬೇಕು. ಇಲ್ಲಿಗೆ ಬಂದು ಹೋಗುವವರು ಖುಷಿಯಿಂದ ವಾಪಸ್ ಹೋಗಬೇಕು. ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ. ಜನರು ಬೇಸರದಿಂದ ಹೋಗಬಾರದು. ಸಂತೋಷದಿಂದ ನೀರಿನಲ್ಲಿ ಆಟವಾಡಿ ಮಕ್ಕಳು, ಮಹಿಳೆಯರು, ಹಿರಿಯರು ಹೋಗುವಂತ ವಾತಾವರಣ ಕಲ್ಪಿಸುವಂತೆ ಸೂಚನೆ ನೀಡಿದರು.
ಗಡಿಗುಡಾಳ್ ಮಂಜುನಾಥ್ ಮಾತನಾಡಿ ಈಜುಕೊಳ ಎಂಸಿಸಿ ಬಿ ಬ್ಲಾಕ್ ನಲ್ಲಿದ್ದು, ಈ ವಾರ್ಡ್ ನ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು. ಈಜುಕೊಳ ನವೀಕರಣಗೊಳಿಸಬೇಕು. ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ನವೀಕರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದ ಬಳಿಕ ಅವರು ಇದಕ್ಕೆ ಅನುದಾನ ನೀಡಿದ್ದರು. ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದೆವು. ಅವರೂ ಸಹ ಸಹಕಾರ ನೀಡಿದ್ದಾರೆ. ವಾರ್ಡ್ ನವರು ಮಾತ್ರವಲ್ಲ, ಪ್ರತಿಯೊಬ್ಬರೂ ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.