Home ಕ್ರೈಂ ನ್ಯೂಸ್ ‘ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ, ಇಲ್ಲದಿದ್ದರೆ ಕೊಂದು ಬಿಡುತ್ತಾರೆ’: ಸಾವಿಗೂ ಮುನ್ನ ತಂದೆಗೆ ಕರೆ ಮಾಡಿದ್ದ ಗ್ವಾಲಿಯರ್ ಇನ್‌ಫ್ಲುಯೆನ್ಸರ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ, ಇಲ್ಲದಿದ್ದರೆ ಕೊಂದು ಬಿಡುತ್ತಾರೆ’: ಸಾವಿಗೂ ಮುನ್ನ ತಂದೆಗೆ ಕರೆ ಮಾಡಿದ್ದ ಗ್ವಾಲಿಯರ್ ಇನ್‌ಫ್ಲುಯೆನ್ಸರ್!

Share
ತಂದೆ
Share

ಗ್ವಾಲಿಯರ್: ಮದುವೆಯಾಗಿ ಕೇವಲ ಒಂದು ವರ್ಷ ತುಂಬುವಷ್ಟರಲ್ಲೇ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಮೃತರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿದ್ದ 21 ವರ್ಷದ ಪಲಕ್ ರಜಾಕ್ ಎಂದು ಗುರುತಿಸಲಾಗಿದ್ದು, ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪಲಕ್ ಅವರ ಪೋಷಕರು ಇದು ವರದಕ್ಷಿಣೆಗಾಗಿ ನಡೆದ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಾವಿಗೂ ಮುನ್ನ ಬಂದಿತ್ತು ಆತಂಕದ ಕರೆ!

ಮೇ 12 ರಂದು ಗ್ವಾಲಿಯರ್‌ನ ಮೊರಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರೈಯಾಪುರದಲ್ಲಿ ಈ ಘಟನೆ ನಡೆದಿದೆ. ಪಲಕ್ ತಂದೆ ಮೊಹರ್ ಸಿಂಗ್ ಮತ್ತು ಸಹೋದರ ಪ್ರಿನ್ಸ್ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಸಾವಿಗೂ ಕೇವಲ 20 ನಿಮಿಷಗಳ ಮೊದಲು ಪಲಕ್ ತಂದೆಗೆ ಕರೆ ಮಾಡಿ ಅಳುತ್ತಾ ಆತಂಕ ವ್ಯಕ್ತಪಡಿಸಿದ್ದರು. “ಪಪ್ಪಾ, ನನ್ನನ್ನು ಇಲ್ಲಿಂದ ಹೇಗಾದರೂ ಮಾಡಿ ಕರೆದುಕೊಂಡು ಹೋಗಿ. ಇವರು ಕಾರು ಮತ್ತು ಚಿನ್ನದ ಸರಕ್ಕಾಗಿ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮೂರು ದಿನಗಳಿಂದ ನನಗೆ ಸರಿಯಾಗಿ ಊಟವೂ ಕೊಟ್ಟಿಲ್ಲ. ನನ್ನನ್ನು ಇಲ್ಲಿಂದ ಕರೆದೊಯ್ಯದಿದ್ದರೆ ಇವರು ನನ್ನನ್ನು ಕೊಂದು ಹಾಕುತ್ತಾರೆ” ಎಂದು ಪಲಕ್ ಅಳುತ್ತಾ ಬೇಡಿಕೊಂಡಿದ್ದರು ಎನ್ನಲಾಗಿದೆ.

ಮಗಳನ್ನು ಕರೆತರಲು ಸಹೋದರ ಹೊರಡುವಷ್ಟರಲ್ಲೇ, ಪಲಕ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಳಿಯನ ಕಡೆಯವರು ಕರೆ ಮಾಡಿ ತಿಳಿಸಿದ್ದಾರೆ. ಆಸ್ಪತ್ರೆಗೆ ಧಾವಿಸಿದಾಗ ಪಲಕ್ ಶವ ಸ್ಟ್ರೆಚರ್ ಮೇಲೆ ಬಿದ್ದಿರುವುದು ಕಂಡುಬಂದಿದೆ.

ಕಾರು ಮತ್ತು ಚಿನ್ನದ ಸರಕ್ಕೆ ಬೇಡಿಕೆ:

ಪಲಕ್ ರಜಾಕ್ ಅವರಿಗೆ ಏಪ್ರಿಲ್ 14, 2025 ರಂದು ವಾಯುಪಡೆಯಲ್ಲಿ ಔಟ್‌ಸೋರ್ಸ್ ಉದ್ಯೋಗಿಯಾಗಿರುವ ಅಮಿತ್ ರಜಾಕ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಚಿನ್ನ, ಬೆಳ್ಳಿ ಮತ್ತು ಬೈಕ್ ನೀಡಲಾಗಿದ್ದರೂ, ಮದುವೆಯಾದ 3-4 ತಿಂಗಳಿನಿಂದಲೇ ಪತಿ ಅಮಿತ್, ಅತ್ತೆ ಮತ್ತು ಮೈದುನ ಸೇರಿ ಕಾರು ಹಾಗೂ ಚಿನ್ನದ ಸರಕ್ಕಾಗಿ ಪೀಡಿಸುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಪಲಕ್ ಹೆಸರಲ್ಲಿದ್ದ ಫಿಕ್ಸೆಡ್ ಡೆಪಾಸಿಟ್ (FD) ಹಣವನ್ನು ಬಲವಂತವಾಗಿ ಡ್ರಾ ಮಾಡಿಸಿಕೊಂಡಿದ್ದರು ಎಂದು ಕುಟುಂಬದವರು ದೂರಿದ್ದಾರೆ.

ಪೊಲೀಸ್ ತನಿಖೆ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ಪರಿಶೀಲನೆ:

ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನೇಣು ಬಿಗಿದುಕೊಂಡಿರುವುದೇ ಸಾವಿಗೆ ಕಾರಣ ಎಂದು ಬಂದಿದೆಯಾದರೂ, ಪಲಕ್ ದೇಹದ ಕುತ್ತಿಗೆ ಮತ್ತು ಕಾಲುಗಳ ಮೇಲೆ ಗಾಯದ ಗುರುತುಗಳಿರುವುದರಿಂದ ಇದು ವ್ಯವಸ್ಥಿತ ಕೊಲೆ ಎಂದು ಕುಟುಂಬಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಗ್ವಾಲಿಯರ್ ಸಿಎಸ್‌ಪಿ ಅತುಲ್ ಕುಮಾರ್ ಸೋನಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ಸಾವಿಗೂ ಎರಡು ದಿನ ಮುನ್ನ ಪಲಕ್ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅದರಲ್ಲಿ ಅವರು “ಖಿನ್ನತೆ,” “ಉಸಿರುಗಟ್ಟುವಿಕೆ” ಮತ್ತು “ಆತಂಕ”ದಂತಹ ಪದಗಳನ್ನು ಬಳಸಿದ್ದರು ಎನ್ನಲಾಗಿದೆ. ಪೊಲೀಸರು ಸದ್ಯ ವೈದ್ಯಕೀಯ ಮತ್ತು ವಿಧಿವಿಜ್ಞಾನ (FSL) ವರದಿಗಳಿಗಾಗಿ ಕಾಯುತ್ತಿದ್ದು, ಶೀಘ್ರದಲ್ಲೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *