ದಾವಣಗೆರೆ: ನಗರದ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ಈ ವರ್ಷವೂ ಅತ್ಯಂತ ವಿಶಿಷ್ಟ ಹಾಗೂ ಪರಿಸರ ಸ್ನೇಹಿ ರೀತಿಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ 13 ವರ್ಷಗಳ ಸುದೀರ್ಘ ಪರಿಪಾಠದಂತೆ, ಈ ಬಾರಿಯೂ ಶಾಲೆಯ ರಂಗಮಂದಿರದಲ್ಲಿ 14 ಅಡಿ ಎತ್ತರದ ಬೃಹತ್ ಪೇಪರ್ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಸಂಸ್ಥೆಯ ನಿರ್ದೇಶಕರಾದ ಡಾ. ಜಯಂತ್, ಚಿತ್ರಕಲಾ ಶಿಕ್ಷಕರಾದ ಸ್ವಾತಿ ಜಿ., ನಟರಾಜ ಶೃಂಗಾರ, ಹೀನಾ ಕೌಸರ್, ಮುಜಸ್ಸಿಂ, ಲಕ್ಷ್ಮಿ, ಸ್ನೇಹಾ ಹಾಗೂ ಆಸಕ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತಂಡವು ಹಬ್ಬದ ಒಂದು ವಾರಕ್ಕೂ ಮುಂಚಿತವಾಗಿ ಈ ವಿಗ್ರಹ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ ಹಬ್ಬದ ಹಿಂದಿನ ದಿನ ಪೂರ್ಣಗೊಳಿಸಿದೆ.
ನಿರ್ಮಾಣಕ್ಕೆ ಬಳಕೆಯಾದ ಸಾಮಗ್ರಿಗಳು:
ಈ ಪರಿಸರ ಸ್ನೇಹಿ ಗಣಪತಿಯ ತಯಾರಿಕೆಗೆ 30 ಕೆ.ಜಿ. ನ್ಯೂಸ್ ಪೇಪರ್, 10 ಕೆ.ಜಿ. ಮರಗೆಣಸಿನ ಪುಡಿಯ ಅಂಟು ಹಾಗೂ ಬಣ್ಣಕ್ಕಾಗಿ ಇದ್ದಲಿನ ಪುಡಿಯನ್ನು ಬಳಸಲಾಗಿದೆ. ಇಷ್ಟೊಂದು ಬೃಹತ್ ಆಕಾರದಲ್ಲಿದ್ದರೂ ವಿಗ್ರಹದ ಒಟ್ಟು ತೂಕ ಕೇವಲ 40 ಕಿಲೋ ಮಾತ್ರ. ಇದನ್ನು ಕೇವಲ ನಾಲ್ಕು ಮಕ್ಕಳು ಸುಲಭವಾಗಿ ಎತ್ತಬಹುದಾದಷ್ಟು ಹಗುರವಾಗಿದೆ ಎಂಬುದು ವಿಶೇಷ.
ಸಂಭ್ರಮದ ಮೆರವಣಿಗೆ ಹಾಗೂ ಪೂಜೆ:
ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿದ್ದ ವಿದ್ಯಾರ್ಥಿಗಳು ಅಂಬೇಡ್ಕರ್ ಸರ್ಕಲ್ನಿಂದ ಅಲಂಕೃತ ರಥದಲ್ಲಿದ್ದ ಗಣೇಶನನ್ನು ಎಳೆತಂದರು. ಮೆರವಣಿಗೆಯಲ್ಲಿ ಲಕ್ಷ್ಮಿ, ಸರಸ್ವತಿ, ಶ್ರೀರಾಮನ ವೇಷಧಾರಿಗಳು, ನಂದಿಕೋಲು, ಪಟಕುಣಿತ ಹಾಗೂ ಡೊಳ್ಳು ಕುಣಿತದಂತಹ ಜಾನಪದ ಕಲಾತಂಡಗಳು ಸಾರ್ವಜನಿಕರ ಗಮನ ಸೆಳೆದವು.
ಶಾಲೆಯ ಮಂಟಪದಲ್ಲಿ ವಿರಾಜಮಾನನಾಗಿರುವ ಈ ಗಣಪತಿಗೆ ಪ್ರತಿದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾವೈಕ್ಯತೆಯಿಂದ ಪೂಜೆ ನೆರವೇರಿಸುತ್ತಿದ್ದಾರೆ. ಈ ಹಗುರವಾದ ಪರಿಸರ ಸ್ನೇಹಿ ಗಣಪತಿಯನ್ನು ಸೆಪ್ಟೆಂಬರ್ 25 ರಂದು ವಿಸರ್ಜಿಸಲಾಗುತ್ತಿದ್ದು, ಸಾರ್ವಜನಿಕರು ಬಂದು ವೀಕ್ಷಿಸುವಂತೆ ಡಾ. ಜಯಂತ್ ಮನವಿ ಮಾಡಿದ್ದಾರೆ.






Leave a comment