ದಾವಣಗೆರೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ ಆಡಳಿತವು ಕಳಂಕರಹಿತವಾದದ್ದು. ಪ್ರಧಾನಿ ಆದ ಬಳಿಕ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿದ್ದಾರೆ. ಈ ಮೂಲಕ ವಿಶ್ವಮಟ್ಟದಲ್ಲಿ ಭಾರತದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರು ಬಣ್ಣಿಸಿದರು.
ನರೇಂದ್ರ ಮೋದಿ ಅವರ 76ನೇ ವರ್ಷದ ಜನ್ಮದಿನ ಹಾಗೂ 25 ವರ್ಷಗಳ ಸುದೀರ್ಘವಾದ ಆಡಳಿತ ನೀಡಿದ ಕಾರಣಕ್ಕೆ ನಗರದ ದೇವರಾಜ ಅರಸು ಬಡಾವಣೆಯ ಅಂಧ ಹೆಣ್ಣು ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು 13 ವರ್ಷಗಳವರೆಗೆ ಹಾಗೂ ಪ್ರಧಾನಮಂತ್ರಿಯಾಗಿ 12 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿರುವ ನರೇಂದ್ರ ಮೋದಿ ಅವರ ಆಡಳಿತದಲ್ಲಿ ವೈಯಕ್ತಿಕ ಭ್ರಷ್ಟಾಚಾರದ ಆರೋಪಗಳಿಗೆ ಅವಕಾಶ ನೀಡದೇ ಸಮರ್ಥ ಆಡಳಿತ ನೀಡಿದ ನಾಯಕತ್ವ ದೇಶ ಕಂಡಿದೆ ಎಂದು ತಿಳಿಸಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ದೇಶದ ರಸ್ತೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗಿದೆ. “ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎಂಬ
ಪ್ರಧಾನಿಯವರ ಭ್ರಷ್ಟಾಚಾರ ವಿರೋಧಿ ನಿಲುವಿನ ಆಡಳಿತಕ್ಕೆ ವಿಶ್ವವೇ ತಲೆಬಾಗಿದೆ. ಅಭಿವೃದ್ಧಿ ಪಥದಲ್ಲಿ ದೇಶ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರ ನಾಯಕತ್ವ ಮುಂದುವರಿಯಬೇಕು. ಮುಂದಿನ ಅವಧಿಯಲ್ಲಿಯೂ ನರೇಂದ್ರ
ಮೋದಿ ಅವರೇ ಪ್ರಧಾನಮಂತ್ರಿಯಾಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.
ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ರಾಜನಹಳ್ಳಿ ಶಿವಕುಮಾರ್ ಅವರು ಮಾತನಾಡಿ ಇಂದು ವಿಶ್ವಮಟ್ಟದಲ್ಲಿ ವಿಶ್ವಗುರುವಾಗಲು ಮೋದಿ ಅವರ ನಾಯಕತ್ವವೇ ಕಾರಣ. ಕಷ್ಟದ ಪರಿಸ್ಥಿತಿಯಿಂದ ಭಾರತವನ್ನು ಉತ್ತುಂಗಕ್ಕೆ ಏರಿಸಿದ ಮಹಾನ್ ನಾಯಕ ಮತ್ತು ಸಮರ್ಥ ಆಡಳಿತಗಾರ. ಕೇಂದ್ರದಲ್ಲಿ ಯುಪಿಎ ನೇತೃತ್ವದ ಹತ್ತು ವರ್ಷಗಳ ಭ್ರಷ್ಟಾಚಾರ ಆಡಳಿತಕ್ಕೆ ಜನರು ಬೇಸತ್ತು ಹೋಗಿದ್ದರು. ದೇಶಾದ್ಯಂತ ಹೋರಾಟಗಳು ನಡೆದವು. ಮೋದಿ ಅವರು ಪ್ರಧಾನಿ ಆದ ಬಳಿಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ದೇಶ ಆರ್ಥಿಕ ಪಥದಲ್ಲಿ ಮುನ್ನಡೆಯುವಂತೆ ಮಾಡಿದ್ದಾರೆ. ಇದು ದೇಶದ ಹೆಮ್ಮೆ ಎಂದು ತಿಳಿಸಿದರು.
ಭಾರತ ದೇಶ ಅತ್ಯಂತ ಪ್ರಬಲ ರಾಷ್ಟ್ರವನ್ನಾಗಿ ಹಾಗೂ ಜಗತ್ತಿನ 4ನೇ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವಲ್ಲಿ ಮೋದಿ ಅವರ ನಾಯಕತ್ವವೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಸುಮಾರು 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್’, ‘ಸಬ್ ಕಾ ಪ್ರಯಾಸ್’ ಮಂತ್ರದೊಂದಿಗೆ ‘ಏಕ್ ಭಾರತ್, ಶ್ರೇಷ್ಠ ಭಾರತ್’ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಹಗಲಿರುಳು ಶ್ರಮಿಸಿದ್ದು, ‘ಆತ್ಮನಿರ್ಭರ ಭಾರತ’ ಹಾಗೂ 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣ ಮಾಡುವ ಅವರ ಸಂಕಲ್ಪವನ್ನು ಈಡೇರಿಸಲು ದೇಶದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್,ಗೋಪಾಲರಾವ್ ಮಾನೆ, ಗಾಯತ್ರಿ ಖಂಡೋಜಿ ರಾವ್, ಬಿ. ರಮೇಶ್ ನಾಯಕ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಗುರು ಸೋಗಿ, ಟಿಂಕರ್ ಮಂಜಣ್ಣ, ಭಾಗೇಶ್ ಪಿಸಾಳೆ, ಮಹೇಂದ್ರ ಹೆಬ್ಬಾಳ, ಕಿಶೋರ್, ರಾಜಕುಮಾರ್ ಶಿವಳ್ಳಿ, ನಂದನಕುಮಾರ್ ಅಣಬೇರು, ಅಂಜನೇಪ್ಪ, ಆನೆಕೊಂಡ ಪುಟ್ಟಣ್ಣ, ನಿಂಗರಾಜ್, ಎಸ್. ಬಾಬು, ರವಿಕುಮಾರ್, ಯರಗುಂಟೆ ಮಂಜು, ದೇವರಾಜ್, ಗೋವಿಂದರಾಜು, ಮಾಲತೇಶ, ದುರುಗೇಶ್, ಹನುಮಂತ, ಯರಿಸ್ವಾಮಿ, ಶಿವಾನಂದ, ಶಿವಕುಮಾರ್ ದೇವರಡ್ಡಿ, ರಾಜು, .ಶಂಕರ್, ಮಂಜುಳಾ ಇಟಗಿ ಮತ್ತಿತರರು ಹಾಜರಿದ್ದರು.





Leave a comment