SUDDIKSHANA KANNADA NEWS/ DAVANAGERE/ DATE:11-01-2025
ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿತ್ರನಟ ಮಂಡ್ಯ ರಮೇಶ್ ಗಿಡಕ್ಕೆ ನೀರು
ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಚಿತ್ರನಟ ಮಂಡ್ಯ ರಮೇಶ್ ಅವರು, ಪ್ರಸ್ತುತ ದಿನಗಳಲ್ಲಿ ಯುವಕರು ಸಂಚಾರ ನಿಮಮವನ್ನು ಉಲ್ಲಂಘಿಸಿ ಸಂಚಾರ ಮಾಡುತ್ತಿರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ.
ಮದ್ಯಪಾನ ಸೇವನೆ ಮಾಡಿ, ಮಾದಕ ವಸ್ತುಗಳನ್ನು ಸೇವನೆ ಮಾಡಿ ವಾಹನ ಚಾಲನೆ ಮಾಡುವುದು, ತ್ರಿಬಲ್ ರೈಡಿಂಗ್ ಹಾಗೂ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರ ಎಂದು ಹೇಳಿದರು.
ಮದ್ಯಪಾನ ಸೇವಿಸಿ ವಾಹನ ಚಲಾಯಿಸುವುದರಿಂದ ಅಪಘಾತಗಳಾಗಿ ನಮ್ಮ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ನಿಮ್ಮನ್ನೆ ನಂಬಿಕೊಂಡಿರುವಂತಹ ನಿಮ್ಮ ಕುಟುಂಬವನ್ನು ಅನಾಥವಾಗುತ್ತದೆ. ಆದ್ದರಿಂದ ಯುವ ಪೀಳಿಗೆ ಓದಿನ ಜೊತೆಗೆ ಕಾನೂನು ನಿಯಮಗಳನ್ನು ತಪ್ಪದೇ ಪಾಲಿಸಿ, ಇನ್ನೊಬ್ಬರಿಗೂ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ, ಸಂಚಾರಿ ನಿಯಮ ಪಾಲಿಸಿ ರಸ್ತೆ ಅಪಘಾತ ತಪ್ಪಿಸಿ ಎಂದು ಜ.1 ರಿಂದ 31ರ ವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಪ್ರತಿಯೊಬ್ಬರು ಸಾಧನೆ ಮಾಡುವ ಕನಸು ಹೊಂದಿರುತ್ತೀರಿ. ನಿಮ್ಮ ಕನಸು ನನಸಾಗಬೇಕಾದರೆ ನೀವು ಮೊದಲು ಆರೋಗ್ಯವಂತರಾಗಿರಬೇಕು. ಆದ್ದರಿಂದ ಸಂಚಾರಿ ನಿಯಮಗಳ್ನು ತಿಳಿದುಕೊಂಡು ರಸ್ತೆಯಲ್ಲಿ ಸಂಚರಿಸುವಾಗ ಅವುಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ನೀವು ಬೇಜವಾಬ್ದಾರಿತನದಿಂದ ಸಂಚಾರಿ ನಿಯಮ ಪಾಲಿಸದೇ ಅಪಘಾತ ಮಾಡಿ ಬೇರೆಯವರ ಪ್ರಾಣ ತೆಗೆದು, ಅವರ ಕುಟುಂಬಕ್ಕೂ ತೊಂದರೆ ನೀಡುತ್ತೀದ್ದೀರಿ. ಆದ್ದರಿಂದ ನೀವು ನಿಮ್ಮ ಜೀವನದ ಹೀರೋ ಆಗವುದರ ಜೊತೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತಾ ಹೀರೋ ಆಗಿರಿ ಎಂದು ಕರೆ ನೀಡಿದರು.
ಕಳೆದ 2024 ರಲ್ಲಿ ಒಟ್ಟು 4 ಲಕ್ಷದ 80 ಸಾವಿರ ಅಪಘಾತಗಳಾಗಿದ್ದು ಅದರಲ್ಲಿ 1 ಲಕ್ಷದ 72 ಸಾವಿರ ಜನ ಸಾವನ್ನಪ್ಪಿದ್ದಾರೆ. ಇದು ಗಂಭೀರವಾದ ವಿಷಯ. ಆಗಾಗಿ ವಾಹನ ಸವಾರರು ಮೊದಲು ರಸ್ತೆ ಸುರಕ್ಷತೆಯ ಬಗ್ಗೆ ತಿಳಿದುಕೊಂಡು ಅದನ್ನು ಶೇಕಡಾ 100 ರಷ್ಟು ಪಾಲನೆ ಮಾಡಿದರೆ ಅಪಘಾತಗಳನ್ನು ಕಡಿಮೆ ಮಾಡುವುದ ಜೊತೆಗೆ ತಮ್ಮಗಳ ಜೀವ ಹಾಗೂ ಬೇರೆಯವರ ಜೀವಗಳನ್ನು ಉಳಿಸಬಹುದಾಗಿದೆ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಪ್ರತಿಜ್ಷಾ ವಿಧಿ ಬೋಧಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಸಂತೋಷ್, ಮಂಜುನಾಥ್, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪೊಲೀಸ್ ನಿರೀಕ್ಷಕರಾದ ಶ್ರೀ ಲಕ್ಷ್ಮಣ್ ನಾಯ್ಕ್, ನಲವಾಗಲು ಮಂಜುನಾಥ, ಮಲ್ಲಮ್ಮ ಚೌಬೆ, ಶಿಲ್ಪಾ, ಸುನೀಲ್ ಕುಮಾರ್, ಡಿಡಿಪಿಯು ಕರಿಸಿದ್ದಪ್ಪ ಮತ್ತು ಹಲವು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.