SUDDIKSHANA KANNADA NEWS/ DAVANAGERE/ DATE:09-01-2025
ಬೆಂಗಳೂರು: ಅನಿಲ ಸಂಪರ್ಕ ಸೇವೆ ಪಡೆಯುವ ಎಲ್ಲಾ ಬಳಕೆದಾರರು (ಗ್ರಾಹಕರು) ತಮ್ಮ ದಿನನಿತ್ಯ ಬಳಸುವ ಗ್ಯಾಸ್ ಸಂಪರ್ಕದ ಬಗ್ಗೆ ಎಲ್ಲಾ ನಿಯಮ ತಿಳಿದುಕೊಂಡು ನಿಯಮಾನುಸಾರ ಬುಕ್ ಮಾಡಿಕೊಂಡು ಖರೀದಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೇಳಿದೆ.
ಗ್ರಾಹಕರು ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯವರಿಂದ ಮುದ್ರಿತ ರಶೀದಿ ಪಡೆಯಬೇಕು. ಮುದ್ರಿತವಾದ ರಶೀದಿಯಲ್ಲಿರುವ ಮೊತ್ತವನ್ನು ಮಾತ್ರ ಸಿಲಿಂಡರ್ ಡೆಲೆವರಿಯವರಿಗೆ ನೀಡಬೇಕು. ಯಾವುದೇ ಕಾರಣಕ್ಕೂ
ಹೆಚ್ಚಿನ ಮೊತ್ತ (ಟಿಪ್ಸ್) ನೀಡುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ರಶೀದಿಯಲ್ಲಿರುವ ನಂಬರ್ಗೆ ಕರೆ ಮಾಡಿ ತಮ್ಮ ಎಲ್ಲಾ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು. ಸಿಲಿಂಡರ್ನ ಪೈಪ್ ಖರೀದಿಸುವಾಗ ಅದರ ಮೇಲೆ ನಮೂದಿಸಿರುವ ಮೊತ್ತ ಮಾತ್ರ ಕೊಟ್ಟು ಖರೀದಿಸಬೇಕು.
ಗ್ಯಾಸ್ ಏಜೇನ್ಸಿಯವರ ಪ್ರಮುಖ ಕರ್ತವ್ಯಗಳು:
ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಆನ್ಲೈನ್ನಲ್ಲಿ ಬುಕಿಂಗ್ ಮಾಡುವುದು ಮತ್ತು ಆನ್ಲೈನ್ನಲ್ಲಿ ಹಣ ಪಾವತಿ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು. ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಡೆಲಿವರಿ ಮಾಡುವ
ಸಂದರ್ಭದಲ್ಲಿ ಡೆಲಿವರಿ ವಾಹನದ ಮೇಲೆ ಸಿಲಿಂಡರ್ನ ಮೊತ್ತದ ಬಗ್ಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಯವರು ಮೊತ್ತದ ಪಟ್ಟಿಯನ್ನು ಪ್ರದರ್ಶಿಸುವುದು.
ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ತೂಕದ ಯಂತ್ರವನ್ನು ಸತ್ಯಾಪನೆ ಮತ್ತು ಮುದ್ರೆ ಹಾಕಿಸುವುದು ಹಾಗೂ ಸತ್ಯಾಪನೆ ಪ್ರಮಾಣವನ್ನು ನಿಯಮಾನುಸಾರ ಪ್ರದರ್ಶಿಸಿಸುವುದು. ಪ್ರತಿ ಡೆಲಿವರಿ ವಾಹನದಲ್ಲಿ ಸಿಲಿಂಡರ್ ತೂಕ ಮಾಡುವ “ಸ್ಟಿಂಗ್ ಬ್ಯಾಲೆನ್ಸ್”ನ್ನು ಕಡ್ಡಾಯವಾಗಿ ಇಡಬೇಕು.
ಸಿಲೆಂಡರ್ ಡೆಲಿವರಿ ಮಾಡುವಾಗ ಗ್ರಾಹಕರು ಸಿಲಂಡರ್ ತೂಕ ಸರಿಯಾಗಿರುವುದನ್ನು ತೋರಿಸಲು ಕೇಳಿದಾಗ ಕಡ್ಡಾಯವಾಗಿ ಬ್ಯಾಲೆನ್ಸ್ ಮೂಲಕ ತೂಕ ಮಾಡಿ ಸಿಲೆಂಡರ್ ಮೇಲೆ ಬರೆದಿರುವ ನಿವ್ವಳ ತೂಕ (Gross Weight) ಸರಿಯಾಗಿರುವುದನ್ನು ತೂಕ ಮಾಡಿ ಗ್ರಾಹಕರಿಗೆ ದೃಢಪಡಿಸಬೇಕು.
ಗ್ರಾಹಕರಿಂದ ಮುದ್ರಿತ ಬಿಲ್ನಲ್ಲಿ ನಮೂದಾಗಿರುವ ಮೊತ್ತವನ್ನು ಮಾತ್ರ ಸಿಲಿಂಡರ್ ಡೆಲಿವರಿಗಾಗಿ ಪಡೆಯುವುದು, ಮುದ್ರಿತ ಬಿಲ್ಲಿಗಿಂತ ಹೆಚ್ಚಿನ ಮೊತ್ತವನ್ನು ಪಡೆಯುವುದು ಅಥವಾ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುವುದು Legal Metrology PC Rules-2011 ರ 18(2) ರ ಉಲ್ಲಂಘನೆಯಾಗುತ್ತದೆ.
ಗ್ಯಾಸ್ ಡೆಲೆವರಿ ಮಾಡುವ ವಾಹನಗಳನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ಸುರಕ್ಷೆ ಕಾಪಾಡಿಕೊಳ್ಳಬೇಕು. ಯಾವುದೇ ಅನಧೀಕೃತ ವಾಹನಗಳಲ್ಲಿ ಸಿಲಿಂಡರ್ ಸರಬರಾಜು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮೇಲ್ಕಂಡ ಹಾಗೂ ನಿಯಮಾನುಸಾರ ಸಮರ್ಪಕವಾಗಿ ಗ್ರಾಹಕರಿಗೆ ಸೇವೆ ಒದಗಿಸದೆ ಇರುವ ಗ್ಯಾಸ್ ಏಜೇನ್ಸಿಗಳ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.