ನವದೆಹಲಿ: ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ಪಪ್ಪು ಯಾದವ್ ಅವರ ಮೇಲೆ ದೆಹಲಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯ ವೇಳೆ ವ್ಯಕ್ತಿಯೊಬ್ಬ ಶೂ ಎಸೆದು, ಕತ್ತಿಯಿಂದ ದಾಳಿ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ಘಟನೆಯು ಸುದ್ಧಿಗೋಷ್ಠಿಯಲ್ಲಿದ್ದ ಬೆಂಬಲಿತರು ಹಾಗೂ ಆರೋಪಿಯ ನಡುವೆ ತೀವ್ರ ಘರ್ಷಣೆಗೆ ಕಾರಣವಾಯಿತು.
ಉತ್ತರ ಪ್ರದೇಶದ ಬುಲಂದ್ಶಹರ್ ನಿವಾಸಿ ಸುಮಿತ್ ಎಂಬಾತ ಈ ದಾಳಿ ನಡೆಸಿದ ಆರೋಪಿಯಾಗಿದ್ದು, ಆತನನ್ನು ಪಪ್ಪು ಯಾದವ್ ಬೆಂಬಲಿಗರು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಮಮಂದಿರ ದೇಣಿಗೆ ಕುರಿತ ಹೇಳಿಕೆಗೆ ಆಕ್ರೋಶ:
ರಾಮಮಂದಿರದ ದೇಣಿಗೆ ಕಳವು ಕುರಿತಾಗಿ ಪಪ್ಪು ಯಾದವ್ ನೀಡಿದ್ದ ಹೇಳಿಕೆ ಹಾಗೂ ಸಂಸತ್ತಿನ ಆವರಣದಲ್ಲಿ ಪ್ರದರ್ಶಿಸಿದ್ದ ನಾಟಕೀಯ ಪ್ರತಿಭಟನೆಯಿಂದಾಗಿ (Skit) ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ಬಂಧಿತ ಸುಮಿತ್ ಪೊಲೀಸರಿಗೆ ತಿಳಿಸಿದ್ದಾನೆ.
ಕೊಲೆಗೆ ಸಂಚು ರೂಪಿಸಲಾಗಿದೆ – ಪಪ್ಪು ಯಾದವ್ ಆರೋಪ:
ಘಟನೆ ಕುರಿತು ಪ್ರತಿಕ್ರಿಯಿಸಿದ ಪಪ್ಪು ಯಾದವ್, “ಆರೋಪಿಯು ನನ್ನನ್ನು ಕತ್ತಿಯಿಂದ ಕಡಿಯಲು ಬಂದಿದ್ದ, ನನ್ನನ್ನು ಕೊಲ್ಲಲು ದೊಡ್ಡ ಸಂಚು ನಡೆಯುತ್ತಿದೆ. ಪ್ರತಿದಿನ ಕೆಲವು ಧಾರ್ಮಿಕ ಮುಖಂಡರು ನನ್ನನ್ನು ಕೊಲ್ಲುವಂತೆ ಕರೆ ನೀಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ದಾಳಿಯ ವೇಳೆ ಸಂಸದರನ್ನು ರಕ್ಷಿಸಲು ಹೋದ ಅವರ ಮಾಧ್ಯಮ ಸಂಚಾಲಕ ಹಾಗೂ ಬೆಂಬಲಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಮಧ್ಯೆ, ಸಂಸದರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಬೆದರಿಕೆ ಕರೆಗಳಿದ್ದರೂ ದೆಹಲಿ ಪೊಲೀಸರು ಸೂಕ್ತ ಭದ್ರತೆ ಒದಗಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹಾಗೂ ಪಪ್ಪು ಯಾದವ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





Leave a comment