ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ನಮ್ಮ ರೈತರ ಹಿತರಕ್ಷಣೆ ಹಾಗೂ ಪ್ರತಿಯೊಂದು ಎಕರೆ ಕೃಷಿ ಭೂಮಿಗೆ ಸಮರ್ಪಕವಾಗಿ ನೀರು ತಲುಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.
ಇಂದು ಗೃಹ ಕಚೇರಿಯಲ್ಲಿ ಭದ್ರಾ ಇಂಜಿನಿಯರ್ ಅವರೊಂದಿಗೆ ಸಭೆ ನಡೆಸಿದರು. ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಹಂಚಿಕೆ, ನಾಲೆಗಳ ನಿರ್ವಹಣೆ ಹಾಗೂ ಕೊನೆಯ ಭಾಗದ (ಟೇಲ್ ಎಂಡ್) ವರೆಗೂ ನೀರು ತಲುಪಿ ಎಲ್ಲಾ ಕೆರೆಗಳು ತುಂಬುವ ವ್ಯವಸ್ಥೆಯಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೊನೆಯ ಭಾಗದ ರೈತರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿದ ಅವರು ಪ್ರಸ್ತುತ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಯಲು ಬಿಡಲಾಗಿದ್ದರೂ, ವಿವಿಧ ಜೋನ್ಗಳು ಹಾಗೂ ನಾಲೆಗಳ ನಿರ್ವಹಣೆಯ ಕೊರತೆಯಿಂದಾಗಿ ಹರಿಹರ, ಸೂಳೆಕೆರೆ ಸೇರಿದಂತೆ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುವಲ್ಲಿ ವ್ಯತ್ಯಾಸವಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಪ್ರಥಮ ಆದ್ಯತೆಯಾಗಿ ನೀರು ನೇರವಾಗಿ ಕೊನೆಯ ಭಾಗದ (ಟೇಲ್ ಎಂಡ್) ರೈತರ ಜಮೀನುಗಳಿಗೆ ತಲುಪುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನೀರು ಸಂಪೂರ್ಣವಾಗಿ ಕೊನೆಯ ಹಂತದವರೆಗೆ ತಲುಪಿದ ನಂತರವಷ್ಟೇ ಇತರ ಗೇಟ್ಗಳನ್ನು ತೆರೆಯುವಂತೆ ಹಾಗೂ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೊತೆಗೆ ನಮ್ಮ ವ್ಯಾಪ್ತಿಯ ಪ್ರಮುಖ ಕೆರೆಗಳನ್ನು ಶೀಘ್ರವಾಗಿ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.





Leave a comment