ಬಿಜ್ನೋರ್/ಗಾಜಿಯಾಬಾದ್:ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಚಾಂದ್ಪುರ ಮಾರುಕಟ್ಟೆಯಲ್ಲಿರುವ ದಿನೇಶ್ ವರ್ಮಾ ಎಂಬುವರಿಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಕಳ್ಳತನವೊಂದು ನಡೆದಿದೆ. ಮದುವೆ ಮನೆಗೆ ಗಿಫ್ಟ್ (ಭಾಟ್) ನೀಡಲು ಆಭರಣ ಖರೀದಿ ಮಾಡುವ ನೆಪದಲ್ಲಿ ಬಂದಿದ್ದ ಗ್ಯಾಂಗ್, ಅಂಗಡಿಯವರ ಕಣ್ಣು ತಪ್ಪಿಸಿ ಬಾಯಿಯೊಳಗೆ ಚಿನ್ನಾಭರಣಗಳನ್ನು ಬಚ್ಚಿಟ್ಟು ₹8 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಲೇಡಿ ಕಳ್ಳಿಯರ ಪ್ಲಾನ್:
ಸೆಪ್ಟೆಂಬರ್ 12 ರಂದು ಐವರು ಮಹಿಳೆಯರು ಹಾಗೂ ಒಬ್ಬ ಪುರುಷ ಗ್ರಾಹಕರಂತೆ ಜ್ಯುವೆಲ್ಲರಿ ಶೋರೂಂಗೆ ಬಂದಿದ್ದರು. ಅಂಗಡಿಯ ಮಾಲೀಕ ದಿನೇಶ್ ವರ್ಮಾ ಅವರ ಬಳಿ ಸಾಲು ಸಾಲು ಆಭರಣಗಳನ್ನು ತೋರಿಸುವಂತೆ ಹೇಳಿ, ಮಾತುಗಳಲ್ಲಿ ನಿರತರನ್ನಾಗಿ ಮಾಡಿದ್ದಾರೆ. ಆಭರಣ ಪರಿಶೀಲಿಸುವಂತೆ ನಟಿಸುತ್ತಾ, ಇಬ್ಬರು ಮಹಿಳೆಯರು ಅತ್ಯಂತ ಚಾಲಾಕಿತನದಿಂದ ಚಿನ್ನದ ಓಲೆಗಳು ಹಾಗೂ ರಿಂಗ್ಗಳನ್ನು ತಮ್ಮ ಬಾಯಿಯೊಳಗೆ ಇಟ್ಟುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆಭರಣಗಳು ಕಡಿಮೆಯಾಗಿರುವುದನ್ನು ಗಮನಿಸಿದ ಮಾಲೀಕರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಈ ಆಘಾತಕಾರಿ ದೃಶ್ಯ ಬೆಳಕಿಗೆ ಬಂದಿದೆ.
ಟೋಲ್ ಪ್ಲಾಜಾ ಫೂಟೇಜ್ ಬೆನ್ನತ್ತಿ ಇಬ್ಬರ ಬಂಧನ:
ದೂರು ದಾಖಲಿಸಿಕೊಂಡ ಬಿಜ್ನೋರ್ ಪೊಲೀಸರು ಚಾಂದ್ಪುರದಿಂದ ಗಾಜಿಯಾಬಾದ್ವರೆಗಿನ ನೂರಾರು ಸಿಸಿಟಿವಿ ಕ್ಯಾಮೆರಾಗಳು ಮತ್ತು ಜೋಯಾ ಟೋಲ್ ಪ್ಲಾಜಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಆರೋಪಿಗಳು ಎರಡು ಕಾರುಗಳಲ್ಲಿ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಕೊನೆಗೆ ಗಾಜಿಯಾಬಾದ್ನಲ್ಲಿ ದಾಳಿ ನಡೆಸಿದ ಪೊಲೀಸರು ಗ್ಯಾಂಗ್ ಲೀಡರ್ ಝಾಹಿದಾ ಅಲಿಯಾಸ್ ಛೋಟಾ ಮತ್ತು ಆಕೆಯ ಸಹಚರ ಆಶಿಯಾ ಎಂಬಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಜೋಡಿ ಚಿನ್ನದ ಓಲೆ, 4 ಜೋಡಿ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳ್ಳತನಕ್ಕೆ ವಿಚಿತ್ರ ಕಾರಣ ಕೊಟ್ಟ ಗ್ಯಾಂಗ್ ಲೀಡರ್:
ವಿಚಾರಣೆ ವೇಳೆ ಗ್ಯಾಂಗ್ ಲೀಡರ್ ಝಾಹಿದಾ, “ನಮ್ಮ ಕುಟುಂಬದ ಮದುವೆಯೊಂದಕ್ಕೆ ಸಂಪ್ರದಾಯದಂತೆ ‘ಭಾಟ್’ (ತಾಯಿಯ ಕಡೆಯಿಂದ ನೀಡುವ ಉಡುಗೊರೆ) ನೀಡಬೇಕಿತ್ತು. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ನಮಗೆ ಅದನ್ನು ಖರೀದಿಸಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ಕಳ್ಳತನ ಮಾಡಿದೆವು” ಎಂದು ಹೇಳಿಕೆ ನೀಡಿದ್ದಾಳೆ.
ಪ್ರಸ್ತುತ ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳಾದ ಖಾತೂನ್, ಆಸ್ಮೀನ್, ರುಕಸಾನಾ, ಛಲಾವಾ, ಭೂರಿಯಾ ಮತ್ತು ಚಾಲಕ ಫರೀದ್ ಖಾನ್ಗಾಗಿ ಬಿಜ್ನೋರ್ ಎಸ್.ಪಿ ಕೆ.ಕೆ ಬಿಷ್ಣೋಯ್ ನೇತೃತ್ವದ ತಂಡ ತೀವ್ರ ಶೋಧ ನಡೆಸುತ್ತಿದ್ದಾರೆ.





Leave a comment