ಭೋಪಾಲ್: ಹೆಂಡತಿಯನ್ನು ಕಳೆದುಕೊಂಡು ನಾಲ್ಕೂ ಮಕ್ಕಳನ್ನು ಸಣ್ಣ ವಯಸ್ಸಿನಿಂದ ತಾನೊಬ್ಬನೇ ಸಾಕಿ ದೊಡ್ಡವನ್ನಾಗಿ ಮಾಡಿದ ತಂದೆಗೆ, ಕಡೆಗಾಲದಲ್ಲಿ ಸಿಕ್ಕಿದ್ದು ನಿರ್ಲಕ್ಷ್ಯ ಮತ್ತು ಒಂಟಿತನ.
ಮಧ್ಯಪ್ರದೇಶದ ಇಂದುರ್ನ ಸೈಕಲ್ ಟೈರ್-ಟ್ಯೂಬ್ ವ್ಯಾಪಾರಿ ಘನಶ್ಯಾಮ್ (70) ಆಗಸ್ಟ್ 4ರಂದು ನಿಧನರಾಗಿದ್ದು, ಅವರ ಅಂತಿಮ ದರ್ಶನಕ್ಕೂ ಮಕ್ಕಳು ಬಾರದಿರುವ ಘಟನೆ ಇಡೀ ಸಮಾಜದ ಮನ ಕಲಕಿದೆ.
ಬಸ್ ಸ್ಟ್ಯಾಂಡ್ನಲ್ಲಿ ಪಾರ್ಶ್ವವಾಯು ಪೀಡಿತನಾಗಿ ಪತ್ತೆಯಾಗಿದ್ದ ತಂದೆ
ಘನಶ್ಯಾಮ್ ಅವರ ಹೆಂಡತಿ ತೀರಿಕೊಂಡಾಗ ಕಿರಿಯ ಮಗಳಿಗೆ ಕೇವಲ ಎರಡು ವರ್ಷ. ಕಷ್ಟಪಟ್ಟು ಇಂದುರ್ನಲ್ಲಿ ಸಣ್ಣ ಮನೆ ನಿರ್ಮಿಸಿ, ಸೈಕಲ್ ಟೈರ್ ಅಂಗಡಿ ನಡೆಸಿ ನಾಲ್ಕೂ ಮಕ್ಕಳನ್ನು ಸಾಕಿದ್ದರು. ಆದರೆ, ವಯಸ್ಸಾದ ಮೇಲೆ ಮನೆಯನ್ನು ಮಾರಿ ಬಂದ ಹಣವನ್ನು ಮಕ್ಕಳೆಲ್ಲ ಹಂಚಿಕೊಂಡ ನಂತರ ತಂದೆಯನ್ನು ಅನಾಥವಾಗಿ ಬಿಟ್ಟಿದ್ದರು. ನಾಲ್ಕು ವರ್ಷಗಳ ಹಿಂದೆ ಭೋಪಾಲ್ನ ಐಎಸ್ಬಿಟಿ ಬಸ್ ಸ್ಟ್ಯಾಂಡ್ನಲ್ಲಿ ಅರ್ಧ ಮೈ ಪಾರ್ಶ್ವವಾಯು ಪೀಡಿತರಾಗಿ, ನಡೆಯಲಾಗದೆ ಬಿದ್ದಿದ್ದ ಘನಶ್ಯಾಮ್ ಅವರನ್ನು ಸಾಮಾಜಿಕ ಕಾರ್ಯಕರ್ತರು ‘ಅಪ್ನಾ ಘರ್’ ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಶವಸಂಸ್ಕಾರಕ್ಕೂ ಬಾರದ ಮಕ್ಕಳು – ಡೆತ್ ಸರ್ಟಿಫಿಕೇಟ್ ಮಾತ್ರ ಬೇಕಂತೆ!
ಆಗಸ್ಟ್ 4ರಂದು ಘನಶ್ಯಾಮ್ ವೃದ್ಧಾಶ್ರಮದಲ್ಲೇ ಕೊನೆಯುಸಿರೆಳೆದರು. ವೃದ್ಧಾಶ್ರಮದ ಸಂಚಾಲಕಿ ಮಾಧುರಿ ಮಿಶ್ರಾ ಅವರು ಕುಟುಂಬಸ್ಥರಿಗೆ ಕರೆ ಮಾಡಿ ಭೋಪಾಲ್ಗೆ ಬರುವಂತೆ ವಿನಂತಿಸಿದರೂ, ಮಕ್ಕಳು ನೆಪ ಹೇಳಿ ಬರಲು ನಿರಾಕರಿಸಿದರು. “ಸಂಸ್ಕಾರ ನೀವೇ ಮಾಡಿ, ಡೆತ್ ಸರ್ಟಿಫಿಕೇಟ್ (ಮರಣ ಪ್ರಮಾಣಪತ್ರ) ಕಳುಹಿಸಿ” ಎಂದು ಮಕ್ಕಳು ಉದ್ಧಟತನದ ಉತ್ತರ ನೀಡಿದ್ದಾರೆ.
ಮಗಳು “ಆಸ್ತಿಯಲ್ಲಿ ನನಗೆ ಪಾಲು ಸಿಕ್ಕಿಲ್ಲ, ನಾನೇಕೆ ಬರಲಿ” ಎಂದರೆ, ಗಂಡು ಮಕ್ಕಳು “ಅವರು ನಮಗಾಗಿ ಏನು ಮಾಡಿದ್ದಾರೆ?” ಎಂದು ಮರುಪ್ರಶ್ನೆ ಮಾಡಿದ್ದಾರೆ. ಕೊನೆಗೆ ಪೊಲೀಸರ ನೆರವಿನಿಂದ ವೃದ್ಧಾಶ್ರಮದ ಆಡಳಿತ ಮಂಡಳಿಯೇ ಘನಶ್ಯಾಮ್ ಅವರ ಅಂತಿಮ ಸಂಸ್ಕಾರ ನೆರವೇರಿಸಿದೆ.
ಇದೀಗ ಮರಣ ಪ್ರಮಾಣಪತ್ರಕ್ಕಾಗಿ ಮಕ್ಕಳು ಒತ್ತಾಯಿಸುತ್ತಿದ್ದು, “ಬದುಕಿದ್ದಾಗ ನೋಡಿಕೊಳ್ಳದ, ಸತ್ತಾಗ ಬಾರದ ಮಕ್ಕಳಿಗೆ ನಾನು ಮರಣ ಪ್ರಮಾಣಪತ್ರವನ್ನು ನೀಡಬಾರದೆಂದು ತೀರ್ಮಾನಿಸಿದ್ದೇನೆ” ಎಂದು ಮಾಧುರಿ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.





Leave a comment