ಬೆಂಗಳೂರು: “ಈ ದೇಶದಲ್ಲಿ ಯಾವ ಯಾವ ಜನಪರ ಕಾರ್ಯಕ್ರಮ ಇದ್ದಾವೋ ಅದೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆ. 100 ದಿನ ತುಂಬಿದಕ್ಕೆ ಅನೇಕ ಹೊಸ ಕಾರ್ಯಕ್ರಮ ನೀಡಲಾಗಿದೆ. ಎಲ್ಲಾ ವರ್ಗಕ್ಕೂ ಕಾರ್ಯಕ್ರಮ ನೀಡುತ್ತಿದ್ದೇವೆ. ಈ ದೇಶದ ಅಲ್ಪ ಸಂಖ್ಯಾತರನ್ನು ವೈರಿಗಳ ತರ ನೋಡಲಾಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತ ಇಲಾಖೆಯನ್ನು ಮುಚ್ಚಿಬಿಡಲಿ. ದೇಶದಿಂದ ಹೊರಗೆ ಹೋಗಿ ಎಂದು ಹೇಳಲು ಆಗುತ್ತದೆಯೇ? ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಶೇ 13 ರಷ್ಟು ಅವರ ಜನಸಂಖ್ಯೆಯಿದೆ. ಯಾರೋ ಒಬ್ಬ ಪಂಕ್ಚರ್ ಹಾಕುವವರು ಎಂದು ಹೇಳಿದ. ಅವನ ಪಕ್ಷದವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ಮಂತ್ರಿ ಮಾಡಲಿಲ್ಲ. ಆತ ಪಂಕ್ಚರ್ ಹಾಕದಿದ್ದರೆ ಅವನ ಗಾಡಿ ಓಡುತ್ತದೆಯೇ?” ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಜನರಿಗೆ ಅನುಕೂಲ ಮಾಡಲು ಹೊರಟರೆ ಬಂಡೆಯನ್ನು ತಬ್ಬುತ್ತಿದ್ದಾರೆ. ಒಂದು ದಿನವೂ ಬಂಡೆ ನೋಡಿರಲಿಲ್ಲ. ನಾವು ಮೂಲೆಯಲ್ಲಿ ಮಾಡಲು ಹೊರಟಿದ್ದೆವು. ಡಬಲ್ ಎಂಜಿನ್ ಸರ್ಕಾರ ಇದ್ದಾಗ ಗುರುತಾಗುವಂತಹ ಒಂದೇ ಒಂದು ಕಾರ್ಯಕ್ರಮ ಮಾಡಿದ್ದಾರೆಯೇ? ಗುರುತಾಗಿ ಒಂದೇ ಒಂದು ಕಲ್ಲು ನೆಟ್ಟಿದ್ದಾರೆಯೇ? ಯಾವ ಕಾರ್ಯಕ್ರಮವೂ ಮಾಡಲಿಲ್ಲ. ಆತ ಮೊನ್ನೆ ಸಿಕ್ಕಿದಾಗ ಪರಿಹಾರ ಹೇಳಿ ಎಂದು ಕೇಳಿದೆ. ಸಾರ್ವಜನಿಕ ಸಾರಿಗೆಯಲ್ಲಿ ಓಡಾಟ ಮಾಡಿ ಎಂದ. ಆಗ ನಾನು ಅವನಿಗೆ, ಪತ್ನಿ ಜೊತೆ ಬಸ್ ನಲ್ಲಿ ಓಡಾಡಿ ಎಂದು ಸಲಹೆ ನೀಡಿದೆ. ಆತ ದೆಹಲಿಗೆ ಬಸ್ ನಲ್ಲಿ ಹೋಗಲಿ” ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದಲ್ಲಿ ಹಳಬರು ಹೊಸಬರು ಎನ್ನುವ ಭೇದವಿಲ್ಲ. ಜಗದೀಶ್ ಶೆಟ್ಟರ್ ಅವರು ಸೋತರೂ ಎಂಎಲ್ ಸಿ ಮಾಡಲಾಯಿತು. ಸವದಿ ಅವರನ್ನು ಮಂತ್ರಿ ಮಾಡಲಾಯಿತು. ಎಷ್ಟೋ ಜನ ದಳದಲ್ಲಿ ಇದ್ದವರಿಗೂ ಅವಕಾಶ ನೀಡಿದ್ದೇವೆ. ಇದರಿಂದ ನಮ್ಮ ಪಕ್ಷದವರಿಗೆ ತೊಂದರೆಯಾಗಿದೆ. ಏಕೆಂದರೆ ನಮ್ಮನ್ನು ನಂಬಿದವರಿಗೆ, ದುಡಿಯುವವರಿಗೆ ಅವಕಾಶ ನೀಡಬೇಕು” ಎಂದರು.
“ಬಿಜೆಪಿಗೆ ನಮ್ಮ 13 ಮಂದಿಯನ್ನು ಕರೆದುಕೊಂಡು ಹೋದರು. ಅದರಲ್ಲಿ 3-4 ಜನ ಮಾತ್ರ ಚಲಾವಣೆಯಲ್ಲಿ ಇದ್ದಾರೆ. ಅಲ್ಲಿ ಬದುಕಲು ಆಗುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆಯವರು ಬಂದು ಬದುಕಬಹುದು” ಎಂದರು.





Leave a comment