ಹಾವೇರಿ: ಪ್ರೀತಿಸಿದ ಹುಡುಗಿಯ ವಿರಹ ತಾಳಲಾರದೆ ಯುವಕನೊಬ್ಬ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುಃಖದ ಘಟನೆ ಹಾವೇರಿ ನಗರದ ದೇವದಾರ್ ಏರಿಯಾದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು 24 ವರ್ಷದ ಮಂಜುನಾಥ್ ಅಗಡಿ ಎಂದು ಗುರುತಿಸಲಾಗಿದೆ. ಮಂಜುನಾಥ್ ಕಳೆದ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ತೀವ್ರವಾಗಿ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ದೇವಸ್ಥಾನವೊಂದರಲ್ಲಿ ರಹಸ್ಯವಾಗಿ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪ್ರೇಮ ಪ್ರಕರಣ:
ಆದರೆ ಈ ಮದುವೆಗೆ ಯುವತಿಯ ಪೋಷಕರು ಮತ್ತು ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯುವತಿ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಇತ್ತೀಚೆಗೆ ಠಾಣೆಗೆ ಇತ್ತಂಡಗಳನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆಯ ವೇಳೆ ಯುವತಿಯನ್ನು ಆಕೆಯ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತ್ನಿ ತನ್ನಿಂದ ದೂರವಾದದ್ದನ್ನು ಮತ್ತು ಕುಟುಂಬಸ್ಥರ ಕಡೆಯಿಂದ ಬಂದ ವಿರೋಧವನ್ನು ತಡೆಯಲಾಗದೆ ಮಂಜುನಾಥ್ ತೀವ್ರ ಮನನೊಂದಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಕೊನೆಯ ಸಂದೇಶ:
ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುನಾಥ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, “ಮುಂದಿನ ಜನ್ಮ ಅಂತಾ ಇದ್ದರೆ ನಾನು ನಿನ್ನವನಾಗಿ ಹುಟ್ಟಿಬರುವೆ” ಎಂದು ಭಾವನಾತ್ಮಕವಾಗಿ ಪೋಸ್ಟ್ ಬರೆದುಕೊಂಡಿದ್ದರು. ತದನಂತರ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರಲ್ಲಿ ಕಣ್ಣೀರು ತರಿಸಿದೆ. ಘಟನೆ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





Leave a comment