ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 210 ನೇರಪಾವತಿ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಲ್ಪರ್, ಲೋಡರ್ ಹಾಗೂ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ ಅವಲಂಬಿತರಿಗೆ ಅರ್ಜಿ ನಮೂನೆಗಳನ್ನು ಮಹಾನಗರಪಾಲಿಕೆಯಿಂದ ವಿತರಿಸಲಾಗಿದೆ.
ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸಲ್ಲಿಸಲು ಸೆ.11 ರವರೆಗೆ ಕಾಲಾವಕಾಶ ನೀಡಲಾಗಿದೆ. ಮಹಾನಗರಪಾಲಿಕೆಯಲ್ಲಿ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿರಲಿದೆ. ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಹೆಲ್ಪರ್, ಲೋಡರ್ಗಳ ನೇಮಕಾತಿಗೆ ಅರ್ಹತೆ ಹೊಂದಿದ್ದು, ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ಅರ್ಜಿ ನಮೂನೆಗಳನ್ನು ನೇರವಾಗಿ ಅಭ್ಯರ್ಥಿಗಳಿಗೆ ಮಾತ್ರವೇ ವಿತರಿಸಿದ್ದು, ಖುದ್ದಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಆದಾಗ್ಯೂ, ಇಂತಹ ನೇಮಕಾತಿ ಸಂದರ್ಭಗಳಲ್ಲಿ ಬಡ ಕಾರ್ಮಿಕರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ದೋಚುವ ಮಧ್ಯವರ್ತಿಗಳ ಜಾಲ ಸಕ್ರಿಯವಾಗುವ ಸಾಧ್ಯತೆ ಇರುತ್ತದೆ. ಇದನ್ನು ಮನಗಂಡ ಪಾಲಿಕೆ ಆಯುಕ್ತ ಡಾ. ಮಹಾಂತೇಶ್ ಅವರು ಶಿಸ್ತಿನ ಕ್ರಮಕ್ಕೆ ಮುಂದಾಗಿದ್ದಾರೆ. ಅರ್ಜಿ ನಮೂನೆಗಳನ್ನು ಮಧ್ಯವರ್ತಿಗಳ ಕೈಗೆ ಸಿಗದಂತೆ, ನೇರವಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಾತ್ರವೇ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. “ಇದು ನಿಮ್ಮ ಹಕ್ಕು, ಯಾರಿಗೂ ಒಂದು ರೂಪಾಯಿ ಲಂಚ ನೀಡುವ ಅಗತ್ಯವಿಲ್ಲ” ಎಂಬ ಸ್ಪಷ್ಟ ಸಂದೇಶವನ್ನು ಅವರು ನೀಡಿದ್ದಾರೆ.
ಯಾವುದೇ ಮಧ್ಯವರ್ತಿಗಳ ಆಮಿಷ, ಹೆದರಿಕೆಗೆ ಒಳಗಾಗದಂತೆ, ಯಾವುದೇ ಹಂತದಲ್ಲಿಯೂ ಯಾರಿಗೂ ಹಣ ನೀಡಬಾರದು. ಹಾಗೂ ನೇಮಕಾತಿ ಮಾಡಿಸುವುದಾಗಿ ಆಸೆ ತೋರಿಸಿ ಹಣ ಯಾಚಿಸಿದಲ್ಲಿ ದೂರು ನೀಡಬಹುದೆಂದು ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ತಿಳಿಸಿದ್ದಾರೆ.





Leave a comment