ನ್ಯಾಮತಿ: ತಾಲೂಕಿನಾದ್ಯಂತ ಸರಣಿ ಜಾನುವಾರುಗಳನ್ನು ಕಳ್ಳತನ ಮಾಡಿ ವಿವಿಧ ಜಿಲ್ಲೆಗಳ ವಾರದ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದ ಭಾರಿ ಜಾಲವೊಂದನ್ನು ನ್ಯಾಮತಿ ಪೊಲೀಸರು ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ 2 ಸರಕು ಸಾಗಣೆ ವಾಹನಗಳು, ನಗದು ಹಾಗೂ ಒಂದು ಆಕಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಮತಿ ಪೊಲೀಸ್ ಠಾಣೆಯ ಪಿಐ ಎಚ್.ಎಂ. ಸಿದ್ದೇಗೌಡ ತಿಳಿಸಿದ್ದಾರೆ.
ಎರಡು ತಂಡಗಳಾಗಿ ಕಳ್ಳತನ:
ಬಂಧಿತ ಆರೋಪಿಗಳು ಕದ್ದ ಜಾನುವಾರುಗಳನ್ನು ಸಾಗಿಸಲು ಎರಡು ಪ್ರತ್ಯೇಕ ತಂಡಗಳನ್ನು ಮಾಡಿಕೊಂಡಿದ್ದರು. ಅಶೋಕ ಲೈಲ್ಯಾಂಡ್ ಮತ್ತು ಟಾಟಾ ಇಂಟ್ರಾ ಗೂಡ್ಸ್ ವಾಹನಗಳನ್ನು ಬಳಸಿಕೊಂಡು, ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಡೆಯುವ ವಾರದ ಜಾನುವಾರು ಸಂತೆಗಳಲ್ಲಿ ಕದ್ದ ಹಸುಗಳನ್ನು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳ ವಿವರ:
ಬಂಧಿತರನ್ನು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಚಾಲಕ ಮುರುಳಿ (21), ಮಲ್ಲೇಶ್ ಎಂ. (27), ಗಣೇಶ್ ಕೆ. (27), ಆದರ್ಶ ಜಿ.ಎ. (23), ಹರೀಶ್ (39), ಬೇಗೂರು ಗ್ರಾಮದ ಫಕಿರೇಶ್ (22) ಮತ್ತು ಕೆಂಚಿಗೊಂಡನಕೊಪ್ಪ ಗ್ರಾಮದ ಶಶಿಕುಮಾರ್ (29) ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಕೆಲವರು ದಿನಗೂಲಿ, ವ್ಯವಸಾಯ ಹಾಗೂ ಜಾನುವಾರು ವ್ಯಾಪಾರ ಮಾಡುವ ಸೋಗಿನಲ್ಲಿ ಈ ದಂಧೆ ನಡೆಸುತ್ತಿದ್ದರು.
ಹೆಚ್ಚಿನ ಕಳ್ಳತನ ಪತ್ತೆ:
ನ್ಯಾಮತಿ ಟೌನ್ ಹಾಗೂ ಆರುಂಡಿ ಗ್ರಾಮದಲ್ಲಿ ನಡೆದಿದ್ದ ಸರಣಿ ಜಾನುವಾರು ಕಳ್ಳತನದ ದೂರಿನನ್ವಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಾಥಮಿಕ ವಿಚಾರಣೆಯಲ್ಲಿ ಈ ತಂಡವು ಶಿಕಾರಿಪುರ ಗ್ರಾಮಾಂತರ ವ್ಯಾಪ್ತಿಯ ಮುದ್ದನಹಳ್ಳಿ ಗ್ರಾಮದಲ್ಲೂ 2 ಆಕಳು ಹಾಗೂ 1 ಎಮ್ಮೆಯನ್ನು ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ.
ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ಅವರ ಮಾರ್ಗದರ್ಶನದಲ್ಲಿ, ನ್ಯಾಮತಿ ಪಿಐ ಸಿದ್ದೇಗೌಡ ಎಚ್.ಎಂ, ಪಿಎಸ್ಐಗಳಾದ ಹೊಳೆಬಸಪ್ಪ ಹೋಳಿ, ಶೋಭರಾಣಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಚುರುಕಿನ ಕಾರ್ಯಾಚರಣೆ ನಡೆಸಿದ ಇಡೀ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಎಚ್.ಟಿ. ಅವರು ಶ್ಲಾಘಿಸಿದ್ದಾರೆ.
- cattle lifters arrested Karnataka
- cow theft case Nyamati
- Davanagere crime news
- H M Siddegowda PI
- Nyamati cattle theft
- Nyamati police station
- Shikaripura livestock thieves
- ಜಾನುವಾರು ಸಂತೆ ದಂಧೆ
- ದಾವಣಗೆರೆ ಕ್ರೈಮ್ ನ್ಯೂಸ್
- ನ್ಯಾಮತಿ ಜಾನುವಾರು ಕಳ್ಳತನ
- ನ್ಯಾಮತಿ ಪೊಲೀಸ್ ಕಾರ್ಯಾಚರಣೆ
- ಶಿಕಾರಿಪುರ ಕಳ್ಳರ ಬಂಧನ
- ಸಿದ್ದೇಗೌಡ ಪಿಐ
- ಹಸುಗಳ ಕಳ್ಳತನ ಪ್ರಕರಣ





Leave a comment