ದಾವಣಗೆರೆ: ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಆಕಸ್ಮಿಕವಾಗಿ ಬಿದ್ದಿದ್ದ ಬಂಗಾರದ ಆಭರಣಗಳಿದ್ದ ಪರ್ಸ್ ಅನ್ನು ಬಸವನಗರ ಪೊಲೀಸರು ತಕ್ಷಣವೇ ಪತ್ತೆ ಹಚ್ಚಿ, ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ದಕ್ಷತೆ ಮೆರೆದಿದ್ದಾರೆ.
ಘಟನೆಯ ವಿವರ: ದಾವಣಗೆರೆ ಮೂಲದ ಸಾರ್ವಜನಿಕರೊಬ್ಬರು ಜಾಲಿನಗರದಿಂದ ಹೊಂಡದ ಸರ್ಕಲ್ ಮುಖಾಂತರ ಬಾರ್ ಲೈನ್ ರಸ್ತೆಯಿಂದ ರೈಲ್ವೇ ನಿಲ್ದಾಣದ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರ ಬಳಿಯಿದ್ದ ಸುಮಾರು 50 ಗ್ರಾಂ ತೂಕದ ಬಂಗಾರದ ಆಭರಣಗಳಿದ್ದ ಪರ್ಸ್ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದಿದೆ. ಪರ್ಸ್ ಕಳೆದುಕೊಂಡಿರುವುದನ್ನು ಅರಿತ ವಾರಸುದಾರರು ತಕ್ಷಣವೇ ಬಸವನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದರು.
ಸಿಸಿಟಿವಿ ತಲಾಷ್ ಹಾಗೂ ತನಿಖೆ:
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಬಸವನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀ ಫಕೃದ್ದೀನ್ ಅಲಿ ಹಾಗೂ ಶ್ರೀ ಸುರೇಶ ಟಿ ಅವರು ವಿವಿಧ ಸ್ಥಳಗಳ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ವೇಳೆ ಶಿವಾಜಿ ಸರ್ಕಲ್ನ ಮೂಲೆಯಲ್ಲಿ ಪರ್ಸ್ ಬಿದ್ದಿರುವುದು ಖಚಿತವಾಗಿದೆ.
ಅಂಗಡಿ ಮಾಲೀಕನ ಪ್ರಾಮಾಣಿಕತೆ:
ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಶಿವಾಜಿ ಸರ್ಕಲ್ ಬಳಿಯ ಅಂಗಡಿಯವರನ್ನು ವಿಚಾರಿಸಿದಾಗ, ಅಲ್ಲೇ ಇದ್ದ ಬೀಡಾ ಅಂಗಡಿಯ ಮಾಲೀಕರೊಬ್ಬರು ಪರ್ಸ್ ಅನ್ನು ಸುರಕ್ಷಿತವಾಗಿ ಇಟ್ಟಿರುವುದು ಬೆಳಕಿಗೆ ಬಂದಿದೆ. ವಾರಸುದಾರರು ಯಾರಾದರೂ ಹುಡುಕಿಕೊಂಡು ಬಂದರೆ ನೀಡುವ ಸದುದ್ದೇಶದಿಂದ ಅವರು ಅದನ್ನು ಎತ್ತಿಟ್ಟಿದ್ದರು.
ಆಭರಣ ಹಸ್ತಾಂತರ:
ಬೀಡಾ ಅಂಗಡಿ ಮಾಲೀಕನಿಂದ ಪರ್ಸ್ ಪಡೆದ ಬಸವನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ (PI) ಆದ ಶ್ರೀ ನಂಜುಂಡಸ್ವಾಮಿ ಅವರು, 50 ಗ್ರಾಂ ಬಂಗಾರದ ಆಭರಣಗಳಿದ್ದ ಪರ್ಸ್ ಅನ್ನು ಅದರ ನಿಜವಾದ ವಾರಸುದಾರರಿಗೆ ಸುಪರ್ದಿಗೆ ಒಪ್ಪಿಸಿದ್ದಾರೆ. ಪೊಲೀಸರ ಶೀಘ್ರ ಕಾರ್ಯಾಚರಣೆ ಹಾಗೂ ಸಾರ್ವಜನಿಕರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.





Leave a comment