ಬೆಂಗಳೂರು: ಮಹಿಳೆಯರಿಗೆ ರಾಜಕೀಯದ ಅರಿವು, ನಾಯಕತ್ವ ಹಾಗೂ ಸ್ವಾಭಿಮಾನದ ಸ್ವಾವಲಂಬಿ ಬದುಕಿಗಾಗಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ. ಮಹಿಳಾ ಸಬಲೀಕರಣ, ಸಶಕ್ತಿಕರಣ ಇಲ್ಲದೆ ಒಂದು ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವು. ನಮ್ಮ ಮಹಿಳೆಯರು ಜಾಗೃತಿಗೊಳ್ಳಬೇಕು. ನಮಗೆ ಸನಾತನಿಗಳ ಭಾರತ ಬೇಕೋ, ಘನತೆ-ಗೌರವ ಸ್ವಾಭಿಮಾನದ ಹಕ್ಕು ನೀಡಿದ ಸಂವಿಧಾನದ ಭಾರತ ಬೇಕೋ ಎಂಬುದನ್ನ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆರ್.ಎಸ್.ಎಸ್ ಹಾಗೂ ಬಿಜೆಪಿ ಪಕ್ಷದ ಸನಾತನ ಭಾರತದ ವಿರುದ್ಧ ಪ್ರತಿಯೊಬ್ಬ ಮಹಿಳೆಯರು ಹೋರಾಡಬೇಕಿದೆ ಎಂದು ಕರೆ ನೀಡಿದರು.
ಎಲ್ಲಾ ಪಕ್ಷದಲ್ಲೂ ಪುರುಷಪ್ರಧಾನ ವ್ಯವಸ್ಥೆ ಇದ್ದೇ ಇದೆ. ಅದನ್ನು ಹೋಗಲಾಡಿಸಲು ಮಹಿಳೆಯರು ಅರಿವು ಮೂಡಿಸಿಕೊಳ್ಳಬೇಕು. ಸಂವಿಧಾನದ ರಕ್ಷಣೆ ಮಾಡದೆ ಇದ್ದರೆ ಮಹಿಳೆಯರು ಮತ್ತೆ ಅಡುಗೆ ಮನೆಯಲ್ಲೇ ಇರಬೇಕಾಗುತ್ತದೆ, ಇನ್ನೊಬ್ಬರ ಗುಲಾಮಗಿರಿಯಿಂದ ಮಹಿಳೆಯರು ಹೊರಬರಬೇಕು. ಅದಕ್ಕಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಪುಣೆಯಲ್ಲಿ ಮಾತಾಡಿರುವ ಪ್ರತಿಯೊಂದು ಮಾತುಗಳನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಪ್ರಾಮಾಣಿಕವಾಗಿ ಮಹಿಳೆಯರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡಿದೆ. ಐದು ಮಹಿಳಾ ಅಧ್ಯಕ್ಷರನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಬಿಜೆಪಿ ಹಾಗೂ ಆರ್.ಎಸ್.ಎಸ್ ಅಲ್ಲಿ ಒಬ್ಬೇ ಒಬ್ಬ ಮಹಿಳಾ ಅಧ್ಯಕ್ಷರನ್ನಾಗಿ ಮಾಡಿರುವ ಉದಾಹರಣೆ ಇದೆಯೇ? ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಮಾಡುವವರನ್ನ ಸ್ವಾಗತಿಸುವ ಸಂಸ್ಕೃತಿ ಬಿಜೆಪಿಯಲ್ಲಿದೆ. ಅದಕ್ಕೆ ಉನ್ನಾವೋ, ಬಿಲ್ಕಿಸ್ ಬಾನು ಪ್ರಕರಣವೇ ಸಾಕ್ಷಿ ಎಂದು ತಿಳಿಸಿದರು.
ನಮ್ಮ ಮಹಾನ್ ನಾಯಕರಾದ ಮಹಾತ್ಮಾ ಗಾಂಧಿಯವರು ಹಾಗೂ ಬಾಬಾ ಸಾಹೇಬರ ಆಶಯದಂತೆ ಮಹಿಳೆಯರ ಘನತೆಯುತ ಬದುಕಿಗೆ ಕಾಂಗ್ರೆಸ್ ಪಕ್ಷ ಕಟಿಬದ್ಧವಾಗಿದೆ. ಮಹಿಳೆಯರ ಅಭಿವೃದ್ದಿಯ ಮಾನದಂಡವೇ ದೇಶದ ಅಭಿವೃದ್ಧಿಯ ಅಳತೆಗೋಲು ಎಂದು ಬಾಬಾ ಸಾಹೇಬರು ನಿಲುವಾಗಿತ್ತು, ಅದರಂತೆಯೇ ಮಹಾತ್ಮಾ ಗಾಂಧಿ ಅವರು ಕೂಡ ಕಟ್ಟಕಡೆಯ ಮನುಷ್ಯನಿಗೆ ಗೌರವ ನೀಡುವ, ವಿಧವೆಯರ ಕಣ್ಣೀರು ವರೆಸುವ, ಮಹಿಳೆಯರಿಗೆ ಸಮಪಾಲು ಸಮಬಾಳು ನೀಡುವ ಸಮಾಜ ನಿರ್ಮಾಣ ಮಾಡಬೇಕೆಂದು ನಮ್ಮ ಮಹನೀಯರ ಆಶಯ ಎಂದರು.
ದೇಶದಲ್ಲಿ ಬಾಬಾ ಸಾಹೇಬರು ಹಿಂದೂ ಕೊಡ್ ಬಿಲ್ ಜಾರಿ ಮಾಡಲು ನೆಹರೂ ಅವರ ಬೆಂಬಲ ಇದ್ದರೂ ಕೂಡ ಜಾರಿಯಾಗಲಿಲ್ಲ. ಆದರೆ ಅದರ ಅಂಶಗಳನ್ನು ನಿಧಾನಕ್ಕೆ ಜಾರಿ ಮಾಡಲು ಕಾಂಗ್ರೆಸ್ ಪಕ್ಷ ಶ್ರಮವಹಿಸಿದೆ ಎಂಬುದನ್ನು ಮರೆಯಬಾರದು. ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಹೋಹನ್ ಸಿಂಗ್ ಅವರ ನೇತೃತ್ವದಲ್ಲಿ ಮಹಿಳೆಯರಿಗೆ ಆಸ್ತಿಯ ಹಕ್ಕು, ಸ್ವಾವಲಂಬನೆಯ ಬದುಕಿಗಾಗಿ ಹಲವು ಕಾನೂನುಗಳನ್ನು ಜಾರಿಗೆ ತಂದರು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತರುವ ಮೂಲಕ ರಾಜಕೀಯ ಅವಕಾಶ ಕಲ್ಪಿಸಿದ್ದೇವೆ. ಮಹಿಳಾ ಕಾಂಗ್ರೆಸ್ ನ ಸದಸ್ಯರುಗಳು ಸಂವಿಧಾನ, ನಮ್ಮ ಪೂರ್ವಜರ ಇತಿಹಾಸ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಓದಬೇಕು ಆಗ ಮಾತ್ರ ಬಿಜೆಪಿ ಹಾಗೂ ಮನುವಾದಿಗಳಿಗೆ ನೀವು ಉತ್ತರ ಕೊಡಬಹುದು. ನಮ್ಮ ಹೋರಾಟ ಕೇವಲ ಅಧಿಕಾರಕ್ಕಾಗಿ ಮಾತ್ರ ಸೀಮಿತವಾಗದೆ ಸಂವಿಧಾನ ಉಳಿಸುವ, ಪ್ರಜಾಪ್ರಭುತ್ವ ಬಲಪಡಿಸಲು ಒಂದಾಗಬೇಕಿದೆ ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ಮಂಜುನಾಥ್ ಭಂಡಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೌಮ್ಯರೆಡ್ಡಿ ಸೇರಿದಂತೆ ಅನೇಕ ಮಹಿಳಾ ಮುಖಂಡರು ಭಾಗವಹಿಸಿದ್ದರು.





Leave a comment