ದಾವಣಗೆರೆ: ಚನ್ನಗಿರಿಯಲ್ಲಿ ಬಡವರಿಗೆ ವಿತರಿಸಲು ಸರಕಾರ ನೀಡುತ್ತಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಜಾಲದ ಮೇಲೆ ದಾವಣಗೆರೆ ಜಿಲ್ಲೆಯ ಎಎನ್ ಟಿಎಫ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ.
ಚನ್ನಗಿರಿ ಟೌನ್ ಮಾರ್ಗವಾಗಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ, ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಎಎನ್ ಟಿ ಎಫ್ ತಂಡದ ಪೊಲೀಸ್ ನಿರೀಕ್ಷಕರಾದ ಅಣ್ಣಯ್ಯ ಕೆ.ಟಿ. ನೇತೃತ್ವದ ಪೊಲೀಸ್ ಸಿಬ್ಬಂದಿ ಹಾಗೂ ದಾವಣಗೆರೆ ಪಡಿತರ ನಿರೀಕ್ಷಕರ ತಂಡ ಈ ಕಾರ್ಯಾಚರಣೆ ಕೈಗೊಂಡಿದೆ.
ದಾಳಿಯ ವೇಳೆ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 343 ಚೀಲಗಳಲ್ಲಿದ್ದ ಅಂದಾಜು 1,50,000 ರೂ. ಮೌಲ್ಯದ 181 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ಸಾಗಾಣಿಕೆಗೆ ಬಳಸಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಲಾಗಿದೆ.
ಶ್ಲಾಘನೆ: ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ನಿರೀಕ್ಷಕ ಅಣ್ಣಯ್ಯ ಕೆ.ಟಿ., ಪಿ.ಎಸ್.ಐ ಸಾಗರ ಅತ್ತರ ವಾಲಾ ಹಾಗೂ ಸಿಬ್ಬಂದಿಗಳಾದ ಮಂಜುನಾಥ, ಪ್ರಕಾಶ, ಗೋವಿಂದರಾಜ್, ಸಚಿನ್ ಹಾಗೂ ಆಹಾರ ನಿರೀಕ್ಷಕರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ., ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಪ್ರಶಂಸಿಸಿದ್ದಾರೆ.





Leave a comment