ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವಿರತವಾಗಿ ಶ್ರಮಿಸಿದ, ಹಗಲು ರಾತ್ರಿಯೂ ಸಕ್ರೀಯವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನೂ ಮೀರಿಸಿದಂತೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿರುವ ಮುಖ್ಯ ಚುನಾವಣಾಧಿಕಾರಿ ಮನೊಜ್ ಕುಮಾರ್ ಅಗರವಾಲ್ ಹಾಗೂ ಎಸ್.ಐ.ಆರ್ ಪ್ರಕ್ರಿಯೆಯ ವಿಶೇಷ ವೀಕ್ಷಕ ಸುಬ್ರತಾ ಗುಪ್ತಾ ಇಬ್ಬರು ಐಎಎಸ್ ಅಧಿಕಾರಿಗಳಿಗೆ ಬಂಗಾಳದ ಬಿಜೆಪಿ ಸರ್ಕಾರ ಭಾರಿ ಬಹುಮಾನವನ್ನೇ ನೀಡಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಪಕ್ಷದ ಪರವಾಗಿ ತೀರ್ಪು ನೀಡುವ ನ್ಯಾಯಾಧೀಶರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗುತ್ತದೆ, ಕೆಲವರು ರಾಜ್ಯಸಭೆಯ ಸದಸ್ಯರಾಗಿಯೂ ಆಯ್ಕೆಯಾಗುತ್ತಾರೆ ಎಂದೂ ಬರೆದಿದ್ದಾರೆ.
ತನಿಖಾ ಸಂಸ್ಥೆಗಳ ಅಧಿಕಾರಿಗಳು ನಿವೃತ್ತಿಯ ನಂತರ ರಾಜಕೀಯ ರಕ್ಷಣೆಗೆ ಬಿಜೆಪಿ ಪಕ್ಷವನ್ನೇ ಆಶ್ರಯಿಸುತ್ತಾರೆ. ಚುನಾವಣಾ ಅಧಿಕಾರಿಗಳಂತೂ ಸರ್ಕಾರದ ದರ್ಬಾರಿನಲ್ಲಿ ಗೌರವದ ಆಸನ ಸಿಗುತ್ತದೆ…!!! ಬಿಜೆಪಿಯ ಚುನಾವಣಾ ಮಾಸ್ಟರ್ ಸ್ಟ್ರೋಕ್ ಗಳಿವೂ… ಎಂದು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ದೇಶದ ಚುನಾವಣಾ ಇತಿಹಾಸದಲ್ಲೇ ಇಂತಹ ಕೀಳುಮಟ್ಟದ ಲಜ್ಜೆಗೇಡಿತನ ರಾಜಕೀಯ ಹಿಂದೆಂದೂ ನಡೆದಿರಲು ಸಾಧ್ಯವೇ ಇಲ್ಲ. ಕೇಂದ್ರ ಚುನಾವಣಾ ಆಯೋಗ ಪ್ರಜಾಪ್ರಭುತ್ವದ ಕಾವಲುಗಾರನಂತಿತ್ತು, ಈಗ ಬಿಜೆಪಿ ಪಕ್ಷದ ಕಾವಲು ನಾಯಿಯಂತಾಗಿದೆ. ಮತದಾರರ ತೀರ್ಪನ್ನು ಕಾಪಾಡಬೇಕಾದವರು, ಅಧಿಕಾರದ ಓಡ್ಡೋಲಗದಲ್ಲಿ ಉಡುಗೊರೆ ಸ್ವೀಕರಿಸುವ ದುಸ್ಥಿತಿಗೆ ಬಂದರೆ ಪ್ರಜಾಪ್ರಭುತ್ವದ ಪಾವಿತ್ರ್ಯತೆ ಉಳಿಯಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ದೇಶದ ಚುನಾವಣಾ ವ್ಯವಸ್ಥೆ ಅತ್ಯಂತ ಅಪಾಯಕಾರಿ ಹಂತಕ್ಕೆ ಬಂದು ತಲುಪಿದೆ. ಚುನಾವಣಾ ಆಯೋಗದ ಮೇಲೆ ಜನರ ನಂಬಿಕೆ ವಿಸ್ವಾಸ ಸಂಪೂರ್ಣ ಕಳಚಿದೆ. ಇದು ದೇಶದ ಭವಿಷ್ಯತ್ತಿಗೆ ಅತ್ಯಂತ ಮಾರಕವಾಗಲಿದೆ. ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವದ ದೇಶದ ಚುನಾವಣಾ ಪ್ರಕ್ರಿಯೆಯನ್ನು ಬಿಜೆಪಿ ಸಂಪೂರ್ಣವಾಗಿ ನಾಶಗೊಳಿಸುತ್ತಿದೆ. ಬಿಜೆಪಿ ನೀಚ ರಾಜಕೀಯದ ವಿರುದ್ಧ ಪ್ರಭಲ ಹೋರಾಟ ನಡೆಸಬೇಕಿದೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿರಬಹುದು ಆದರೆ ವ್ಯವಸ್ಥೆಯನ್ನು ಸೋಲಿಸಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
- BJP
- BK Hariprasad
- Congress vs BJP
- Democracy
- Election Commission of India
- IAS Officers reward
- Manoj Kumar Agarwal
- Political Controversy India.
- Subrata Gupta
- West Bengal Elections
- ಐಎಎಸ್ ಅಧಿಕಾರಿಗಳು
- ಕಾಂಗ್ರೆಸ್ ಟ್ವೀಟ್
- ಚುನಾವಣಾ ಆಯೋಗ
- ಪಶ್ಚಿಮ ಬಂಗಾಳ ಚುನಾವಣೆ
- ಪ್ರಜಾಪ್ರಭುತ್ವ
- ಬಿ. ಕೆ. ಹರಿಪ್ರಸಾದ್
- ಬಿಜೆಪಿ
- ಮನೋಜ್ ಕುಮಾರ್ ಅಗರವಾಲ್
- ರಾಜಕೀಯ ವಿವಾದ
- ಸುಬ್ರತಾ ಗುಪ್ತಾ





Leave a comment