SUDDIKSHANA KANNADA NEWS/ DAVANAGERE/ DATE:01-06-2023
ದಾವಣಗೆರೆ (DAVANAGERE): ನಗರದ ದೇವರಾಜು ಅರಸು ಬಡಾವಣೆಯಲ್ಲಿನ ಶಿವಧ್ಯಾನ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜೂನ್. 4 ರಂದು ಬೆಳಿಗ್ಗೆ 10. 45ಕ್ಕೆ ಪತ್ರಿಕಾ ದಿನಾಚರಣೆ, 2022 ನೇ ಸಾಲಿನ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರಿಗೆ ಗೌರವಾರ್ಪಣೆ, ಮಹಿಳಾ ಪತ್ರಕರ್ತರಿಗೆ ಸನ್ಮಾನ ಹಾಗೂ ಪತ್ರಕರ್ತರಿಗೆ ಧನಸಹಾಯ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ಇ.ಎಂ ಮಂಜುನಾಥ್, ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 9.30ಕ್ಕೆ ಸಂಘದ ಜಿಲ್ಲಾ ಘಟಕದ 2022-23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ನಡೆಯಲಿದೆ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ ಸಾನ್ನಿಧ್ಯದಲ್ಲಿ ಬ್ರಹ್ಯಾಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯದ ನಿರ್ದೇಶಕರಾದ ರಾಜಯೋಗಿ ಬ್ರಹ್ಮಾಕುಮಾರ ಬಸವರಾಜ ರಾಜಋಷಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು “ಮಾಧ್ಯಮ ಮಾಣಿಕ್ಯ” ಪ್ರಶಸ್ತಿ ಪ್ರದಾನ ಮಾಡುವರು. ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಹಿಳಾ ಪತ್ರಕರ್ತೆಯರನ್ನು ಗೌರವಿಸುವರು. ಹಿರಿಯ ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಮತ್ತು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರನ್ನು ಸನ್ಮಾನಿಸುವರು ಎಂದರು.
‘ಜನತಾವಾಣಿ’ (JANATHA VANI) ಸಂಪಾದಕ (EDITOR) ಎಂ. ಎಸ್. ವಿಕಾಸ್ ಮತ್ತು ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರು, ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತರಿಗೆ ಸಹಾಯ ಧನದ ಚೆಕ್ ವಿತರಿಸುವರು ಎಂದ ಅವರು, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ದಾವಣಗೆರೆ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕ ದೇವರಮನಿ ಶಿವಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಆರ್. ನಾಗಭೂಷಣರಾವ್, ಲಯನ್ಸ್ ಕ್ಲಬ್ ಉಪಾಧ್ಯಕ್ಷ ಮಹಾಂತೇಶ್ ಪಿ. ಒಣರೊಟ್ಟಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದರು.
ಮಾಧ್ಯಮ ಮಾಣಿಕ್ಯ ಪ್ರಶಸ್ತಿ:
ಮಾಧ್ಯಮ ಮಾಣಿಕ್ಯ (MEDIA MANIKYA) ಪ್ರಶಸ್ತಿಗೆ ವರದಿಗಾರರ ವಿಭಾಗದಲ್ಲಿ ಹಿರಿಯ ಪತ್ರಕರ್ತ ‘ಕನ್ನಡಪ್ರಭ’ದ ನಾಗರಾಜ್ ಬಡದಾಳ್, ವಿದ್ಯುನ್ಮಾನ ವಿಭಾಗದಲ್ಲಿ ಹಿರಿಯ ಪತ್ರಕರ್ತ ‘ದೂರದರ್ಶನ’ದ ಎ. ಎಲ್, ತಾರಾನಾಥ್, ಛಾಯಾಗ್ರಾಹಕ ವಿಭಾಗದಲ್ಲಿ ವಿವೇಕ್ ಎಲ್. ಬದ್ದಿ, ಡಿಸೈನರ್, ಡಿಟಿಪಿ ವಿಭಾಗದಲ್ಲಿ’ಜನತಾವಾಣಿ’ಯ ಟಿ.ಎನ್. ಮಂಜುಳಾ, ಜಾಹೀರಾತು ವಿಭಾಗದಲ್ಲಿ ಸಾಯಿ ಅಡ್ವರ್ಟೈಸರ್ಸ್ ಬಿ.ಎನ್, ಸಾಯಿಪ್ರಸಾದ್, ಮುದ್ರಣ (PRINTING) ವಿಭಾಗದಲ್ಲಿ ಮಂಜು ಮುದ್ರಣದ ಎಂ. ನಾಗರಾಜ್, ಸಿಬ್ಬಂದಿ ವಿಭಾಗದಲ್ಲಿ ಹಿರಿಯ ತಂತ್ರಜ್ಞ ಬುಡೇನ್ ಸಾಬ್, ಪತ್ರಿಕಾ ವಿತರಕ ವಿಭಾಗದಲ್ಲಿ ಹಿರಿಯ ಪತ್ರಿಕಾ ವಿತರಕ ಎ.ಕೆ. ಶಿವಬಸಪ್ಪ ಅವರಿಗೆ ನೀಡಿದ್ದು, ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಮಾಧ್ಯಮ ಚೂಡಾಮಣಿ ಬಿರುದು:
2022-23ನೇ ಸಾಲಿನಲ್ಲಿ ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರಿಗೆ ‘ಮಾಧ್ಯಮ ಚೂಡಾಮಣಿ’ ಬಿರುದು ನೀಡಿ ಸನ್ಮಾನಿಸಲಾಗುವುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ‘ಕರ್ನಾಟಕ ಎಕ್ಸ್ಪ್ರೆಸ್’ ಸಂಪಾದಕ ಕೆ. ಚಂದ್ರಣ್ಣ, ಕೆಯುಡಬ್ಲೂಜೆ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ‘ನಗರವಾಣಿ’ ಸಹ ಸಂಪಾದಕ ಬಿ.ಎನ್. ಮಲ್ಲೇಶ್, ಕೆಯುಡಬ್ಲೂಜೆ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್, ‘ಪ್ರಜಾವಾಣಿ’ಯ ಚಂದ್ರಹಾಸ ಹಿರೇಮಳಲಿ ಮತ್ತು ಎಲ್. ಮಂಜುನಾಥ್, ‘ವಿಜಯವಾಣಿ’ಯ ಎನ್. ಡಿ. ಶಾಂತಕುಮಾರ್, ಹರಿಹರದ ‘ಲೋಕಪ್ರಭಾ’ ಸಂಪಾದಕರಾದ ಡಿ.ಎನ್. ಶಾಂಭವಿ ನಾಗರಾಜ್ ಅವರಿಗೆ ಗೌರವಿಸಲಾಗುವುದು ಎಂದು ಹೇಳಿದರು.
ಮಾಧ್ಯಮ ರತ್ನ:
ಅಂತಾರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಮ್ಮಂದಿರ ದಿನಾಚರಣೆ ಅಂಗವಾಗಿ ಮಹಿಳಾ ಪತ್ರಕರ್ತರಿಗೆ ‘ಮಾಧ್ಯಮ ರತ್ನ’ ಬಿರುದು ನೀಡಿ ಗೌರವಿಸಲಾಗುತ್ತದೆ. ಜೊತೆಗೆ, ಅನಾರೋಗ್ಯದಿಂದ ಬಳಲುತ್ತಿರುವ 8 ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನದ ಚೆಕ್ ವಿತರಿಸಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಸಂಘದ ಖಜಾಂಚಿ ಎನ್. ವಿ. ಬದರಿನಾಥ್, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ ಒಡೆಯರ್ ಉಪಸ್ಥಿತರಿದ್ದರು.