ಬೆಂಗಳೂರು: “ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಹೊಸ ಆಲೋಚನೆ, ಭರವಸೆ, ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ನಮ್ಮ ಶಾಸಕರು, ವಿರೋಧ ಪಕ್ಷದ ಶಾಸಕರು, ನಾಯಕರು, ನಮ್ಮ ಸಚಿವ ಸಂಪುಟದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು” ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಕರೆ ನೀಡಿದರು.
ವಿಧಾನಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.
“ಜೂನ್ 3ರಂದು ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚರ್ಚೆ ಮಾಡಿ 139 ಶಾಸಕರ ಬೆಂಬಲದೊಂದಿಗೆ ನನ್ಮನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ಹಿಂದೆ ಅನೇಕ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಕಳೆದ 3 ವರ್ಷಗಳಿಂದ ಸಿದ್ದರಾಮಯ್ಯ ಅವರು ಸಿಎಂ ಆಗಿ ನಾನು ಡಿಸಿಎಂ ಆಗಿ ಕೆಲಸ ಮಾಡಿದ್ದೆವು. ಇದು ಅದರ ಮುಂದುವರಿದ ಸರ್ಕಾರ” ಎಂದರು.
224 ಶಾಸಕರೂ ನನಗೆ ಒಂದೇ
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಜನರು ವಿವಿಧ ರೀತಿಯಲ್ಲಿ ಏನೇ ತೀರ್ಮಾನ ಮಾಡಿದ್ದರೂ ನಾವು ಒಪ್ಪಬೇಕು. ಆದರೆ ಈಗ ನನಗೆ ಸಿಕ್ಕಿರುವ ಅವಕಾಶದಲ್ಲಿ 224 ಶಾಸಕರೂ ನನ್ನ ದೃಷ್ಟಿಯಲ್ಲಿ ಒಂದೇ. ನಾನು ಈ ಸ್ಥಾನದಲ್ಲಿ ಕೂತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ” ಎಂದರು.
ರಾಜ್ಯದ ಎಲ್ಲ ಮುಖ್ಯಮಂತ್ರಿಗಳನ್ನು ಸ್ಮರಿಸಿದ ಸಿಎಂ
ಕಂಠಿ ಅವರ ಕಾಲದಿಂದ ಸಿದ್ದರಾಮಯ್ಯ ಅವರ ವರೆಗೆ ಅನೇಕ ರಾಜಕೀಯ ಮುತ್ಸದ್ಧಿಗಳು ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಗುಂಡೂರಾವ್, ನಿಜಲಿಂಗಪ್ಪ, ಬಿಡಿ ಜತ್ತಿ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೋಯ್ಲಿ, ದೇವೇಗೌಡರು, ಎಸ್ ಎಂ ಕೃಷ್ಣ, ಧರಂ ಸಿಂಗ್, ಯಡಿಯೂರಪ್ಪ, ಬೊಮ್ಮಾಯಿ, ಸದಾನಂದ ಗೌಡರು, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರ ಆಡಳಿತ ನೋಡಿದ್ದೇವೆ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ನಾಡಿಗೆ ಕೊಡುಗೆ ನೀಡಿದ್ದಾರೆ. ನಾನು ಯಾರನ್ನು ಟೀಕೆ ಮಾಡುವುದಿಲ್ಲ” ಎಂದು ಹೇಳಿದರು.
“ ಜೆಎಚ್ ಪಟೇಲರ ಹೃದಯ ಶ್ರೀಮಂತಿಕೆ ಬಹಳ ದೊಡ್ಡದು. ಬೇರೆಯವರ ಒತ್ತಡದಿಂದ ನನ್ನನ್ನು ಒಮ್ಮೆ ಬಂಧಿಸುವ ಸಂದರ್ಭ ಬಂದಾಗ, ನೀವು ಹೊರಗಡೆ ರಾಜಕೀಯ ಮಾಡಿಕೊಳ್ಳಿ, ನಿಮ್ಮ ರಾಜಕೀಯಕ್ಕೆ ಶಾಸಕನನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದನ್ನು ಮುಖ್ಯಮಂತ್ರಿಗಳ ಸ್ಮರಿಸಿದರು.
“ನಮ್ಮ ರಾಜಕಾರಣ ಏನೇ ಇದ್ದರು ರಸ್ತೆಯಲ್ಲಿರಲಿ. ನನಗೆ ಎಲ್ಲರೂ ಒಂದೇ. ಹಳೆಯದನ್ನೆಲ್ಲಾ ಮರೆತು, ಹೊಸ ಪಯಣದಲ್ಲಿ ಸಾಗೋಣ. ಇಡಿ ಪ್ರಪಂಚ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕ ಮುಖೇನ ನೋಡುತ್ತಿದೆ. ನಮ್ಮಲ್ಲಿರುವ ಜ್ಞಾನ, ಪ್ರತಿಭೆ, ಮಾನವ ಸಂಪನ್ಮೂಲ, ಪ್ರಕೃತಿ ಸಂಪತ್ತು ಬೇರೆ ರಾಜ್ಯಗಳಲ್ಲಿ ಇಲ್ಲ” ಎಂದರು.
“ರಾಜಸ್ಥಾನ ಬಿಟ್ಟರೆ ಇದೇ ಎರಡನೇ ಅತಿದೊಡ್ಡ ಒಣ ಭೂಮಿ ರಾಜ್ಯ. ನಾವು ನೀರಿನ ವಿಚಾರದಲ್ಲಿ ಬೇರೆ ರಾಜ್ಯಗಳೊಂದಿಗೆ ಬಡಿದಾಡುತ್ತಿದ್ದೇವೆ. ಕೃಷಿಗೆ ಉತ್ತೇಜನ ನೀಡಲು ಅನೇಕ ನೀರಾವರಿ ಯೋಜನೆಗಳನ್ನು ನೀಡಿದ್ದು, ಮುಂದೆಯೂ ನೀಡುತ್ತೇವೆ. ಬೆಂಗಳೂರು ಸರ್ವಜನಾಂಗದ ಶಾಂತಿಯ ತೋಟ. ಇದು ಎಲ್ಲಾ ರೀತಿಯ ಜನರನ್ನು ಸ್ವಾಗತಿಸುತ್ತದೆ. ಇಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು, 500 ಪ್ರತಿಷ್ಠಿತ ಕಂಪನಿಗಳ ಪೈಕಿ 480 ಕಂಪನಿಗಳು, ಅದರ ಅಧಿಕಾರಿಗಳು ವಾಸಿಸುತ್ತಿದ್ದಾರೆ. ನಮ್ಮ ಕಾವೇರಿ ತಾಯಿ ಎಲ್ಲರಿಗೂ ನೀರು ನೀಡುತ್ತಿದ್ದಾಳೆ. ಬಂದವರಲ್ಲಿ ಎಲ್ಲರಿಗೂ ಉತ್ತಮ ಶಿಕ್ಷಣ, ಆರೋಗ್ಯ, ಪರಿಸರ ನೀಡುತ್ತಿದ್ದೇವೆ” ಎಂದರು.
“ಬೆಂಗಳೂರು ಬೆಳವಣಿಗೆ ಕಾಣುತ್ತಿರುವಂತೆ ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ನಮ್ಮ ರಾಜ್ಯ ಪ್ರತಿ ವರ್ಷ 13,940 ವೈದ್ಯರನ್ನು ತಯಾರು ಮಾಡುತ್ತಿದೆ. ಇಲ್ಲಿನ ಅತ್ಯುತ್ತಮ ಇಂಜಿನಿಯರ್, ಡಾಕ್ಟರ್ ಗಳು ಹೊರಗಡೆ ಸೇವೆಸಲ್ಲಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 13ಲಕ್ಷ ಇಂಜಿನಿಯರ್ ಗಳಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ಗಳಿದ್ದಾರೆ. ಇದಕ್ಕಾಗಿ ಉಪನಗರ ಅಭಿವೃದ್ಧಿ ಮಾಡಬೇಕು. ನಾವು ಹೊಸ ಯೋಜನೆ, ರಿಂಗ್ ರಸ್ತೆ ಮಾಡುತ್ತಿದ್ದೇವೆ. ದೇವೇಗೌಡರು ನೈಸ್ ರಸ್ತೆಗೆ ಸಹಿ ಹಾಕಿದರು. ಅವರು ಈ ವಿಚಾರದಲ್ಲಿ ಟೀಕೆ ಮಾಡಬಹುದು. ಆದರೆ ಆ ರಸ್ತೆನೇ ಇಲ್ಲವಾಗಿದ್ದರೆ ಬೆಂಗಳೂರು ಪರಿಸ್ಥಿತಿ ಏನಾಗುತ್ತಿತ್ತು. ಆ ಯೋಜನೆಯಲ್ಲಿ ಅನ್ಯಾಯ ಆಗಿದ್ದರೆ ಅದನ್ನು ಸರಿ ಮಾಡೋಣ. ಕುಮಾರಸ್ವಾಮಿ ಅವರು ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಹಿ ಹಾಕಿದ್ದಾರೆ. ಯಡಿಯೂರಪ್ಪ ಅವರು ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿ, ಅನ್ನದಾತರಿಗೆ ಕೊಡುಗೆ ನೀಡಿದ್ದಾರೆ” ಎಂದು ಸ್ಮರಿಸಿದರು.
“ಸಿದ್ದರಾಮಯ್ಯ ಅವರು ಹಸಿವಿನಿಂದ ಜನ ಕಂಗಾಲಾಗಬಾರದು ಎಂದು ಕೊಟ್ಟ ಅನ್ನಭಾಗ್ಯ ಯೋಜನೆ ಇತಿಹಾಸ ಪುಟದಲ್ಲಿ ರಾರಾಜಿಸುತ್ತದೆ. ಅರಸು ಅವರು ಕೊಟ್ಟ ಯೋಜನೆ, ಕೃಷ್ಣ ಅವರ ಕಾಲದಲ್ಲಿ ಆದ ಐಟಿ ಬಿಟಿ ಕ್ರಾಂತಿ ಎಲ್ಲವೂ ಇತಿಹಾಸ ಪುಟ ಸೇರಿದೆ. ನೆಹರೂ ಅವರ ಕಾಲದಿಂದ ಇಲ್ಲಿಯವರೆಗೂ ಎಲ್ಲ ನಾಯಕರು ಪಕ್ಷಾತೀತವಾಗಿ ತಮ್ಮದೇ ಆದ ದಾರಿಯಲ್ಲಿ ದೇಶದ ಪ್ರಗತಿಗೆ ಕೆಲಸ ಮಾಡಿದ್ದಾರೆ.
ವಿರೋಧ ಪಕ್ಷದ ವಿರೋಧ ಸರಿಯಲ್ಲ
”ಸಭಾಧ್ಯಕ್ಷರ ಪೀಠ ವೈಯಕ್ತಿಕ ಸ್ಥಾನವಲ್ಲ. ನಮ್ಮ ಪಕ್ಷದ ನಾಯಕರು ಈ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಸೂಚಿಸಿದ್ದಾರೆ ಹೊರತು ಅವರನ್ನೇ ಸಭಾಧ್ಯಕ್ಷರನ್ನಾಗಿ ಘೋಷಣೆ ಮಾಡಿಲ್ಲ. ಇದಕ್ಕೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಪೀಕರ್ ಆದವರು ಪಕ್ಷಾತೀತತರು. ಎಲ್ಲರ ಮಾತಿಗೂ ಕಿವಿಗೊಡಬೇಕು. ಹೀಗಾಗಿ ವಿರೋಧ ಪಕ್ಷದವರು ವಿರೋಧ ಮಾಡುವುದನ್ನು ಬಿಟ್ಟು ಸಭಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸಬೇಕಿತ್ತು. ವಿರೋಧ ಮಾಡುವುದು ಅವರ ಘನತೆಗೆ ತಕ್ಕದಲ್ಲ” ಎಂದು ಅಭಿಪ್ರಾಯಪಟ್ಟರು.
“ಮುಂದಿನ 25 ವರ್ಷಗಳಲ್ಲಿ ರಾಜ್ಯವನ್ನು ಹಸಿರು ರಾಜ್ಯವನ್ನಾಗಿ ಮಾಡಿ, ನೀರಿನ ಪೋಲು ತಡೆಗಟ್ಟಿ ಕೃಷಿಗೆ ಬಳಸಬೇಕು. ಪ್ರತಿಯೊಬ್ಬ ರೈತರ ಬದುಕಿಗೆ ಆಸರೆಯಾಗಬೇಕು. ತೋಟಗಾರಿಕೆ, ಹೈನುಗಾರಿಕೆ ಪರ್ಯಾಯ ರೈತರ ಆರ್ಥಿಕತೆಯಾಗಿದೆ. ನಮ್ಮ ಸರ್ಕಾರ ಗ್ರಾಮೀಣ ಭಾಗದ ಜನರು, ಮಕ್ಕಳು ಶಿಕ್ಷಣಕ್ಕಾಗಿ ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಲು ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಡಲು ತೀರ್ಮಾನಿಸಿದ್ದೇವೆ. ಬೆಂಗಳೂರಿನಲ್ಲಿ 10 ಲಕ್ಷಕ್ಕೆ ಒಬ್ಬ ಪೊಲೀಸ್ ಕಮಿಷನರ್ ಮಾಡಿದ್ದರು. ಆದರೆ ಇಂದು 1.50 ಕೋಟಿ ಜನರಾಗಿದ್ದಾರೆ. ನಮ್ಮ ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ರಾತ್ರಿ 2 ಗಂಟೆಯಲ್ಲಿ ಹೆಣ್ಣುಮಕ್ಕಳು ನಿರ್ಭೀತವಾಗಿ ಹೊರಗೆ ಓಡಾಡಿದರೂ ರಕ್ಷಣೆ ನೀಡುತ್ತಿದೆ. ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಲು ಕ್ರಮ ವಹಿಸಿದ್ದೇವೆ. ಕೃಷ್ಣ ಬೈರೇಗೌಡರು ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಾಂತಿಕಾರಿ ತೀರ್ಮಾನ ದೇಶಕ್ಕೆ ಮಾದರಿಯಾಗಿದೆ. ಇ ಖಾತೆ, ಬಿ ಟು ಎ ಖಾತಾ ಎಲ್ಲವನ್ನು ನೀಡುತ್ತಿದ್ದೇವೆ. ಗ್ಯಾರಂಟಿ ನೀಡಿದ್ದೇವೆ. ನಮ್ಮ ಸರ್ಕಾರ ಇರುವುದೇ ಜನರಿಗಾಗಿ. ಸರ್ಕಾರಿ ನೌಕರರು ಗ್ಯಾರಂಟಿ ಯೋಜನೆ ತ್ಯಜಿಸಲು ಮುಂದಾಗಿದ್ದು, ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ” ಎಂದರು.
ಅಶೋಕ್ ಅವರಿಗೆ ಆವತ್ತೇ ಹೇಳಿದ್ದೆ
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ವಿರೋಧ ಪಕ್ಷದ ನಾಯಕರನ್ನು ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ. ನಮಗೆ ಯಾರ ಬಗ್ಗೆಯೂ ಹೊಟ್ಟೆಉರಿ ಇಲ್ಲ. ಯಾರ ವಿರುದ್ಧವೂ ಈ ಅಧಿಕಾರ ದುರುಪಯೋಗ ಮಾಡಿ ತೊಂದರೆ ನೀಡಲು ನಾನು ಬಯಸುವುದಿಲ್ಲ. ಅಧಿಕಾರದ ವಿಚಾರವಾಗಿ ಅಶೋಕ್ ಅವರು ಇದೇ ಸದನದಲ್ಲಿ ಮಾತನಾಡಿದಾಗ, ನಾನು ಒಂದು ಮಾತು ಹೇಳಿದ್ದೆ. ಧೈರ್ಯಶಾಲಿ ಒಬ್ಬ ವ್ಯಕ್ತಿಯಿಂದ ಬಹುಮತ ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಅವರು ಸೇರಿದಂತೆ ನಾವು 136 ಜನ ಒಂದೇ ಎಂದು ಅಂತ ಹೇಳಿದ್ದೆ. ನಾನು ಅದನ್ನು ಸಾಬೀತುಪಡಿಸಿದ್ದೇನೆ. ನಾವು ಒಟ್ಟಾಗಿ ಹೋರಾಟ ಮಾಡುತ್ತೇವೆ. ಅಂತಿಮ ಫಲಿತಾಂಶವನ್ನು ಜನ ತೀರ್ಮಾನಿಸುತ್ತಾರೆ” ಎಂದು ತಿಳಿಸಿದರು.
- 2028 Karnataka Elections
- 2028 ಚುನಾವಣೆ
- Assembly Session
- DK Shivakumar
- DK Shivakumar Assembly Speech
- DK Shivakumar Chess Statement
- Karnataka Congress
- Karnataka Deputy CM
- Karnataka Politics
- Political News Karnataka
- UT Khader
- ಕರ್ನಾಟಕ ರಾಜಕೀಯ
- ಕರ್ನಾಟಕ ಸುದ್ದಿ
- ಕಾಂಗ್ರೆಸ್ ಸರ್ಕಾರ
- ಡಿ ಕೆ ಶಿವಕುಮಾರ್ ಚೆಸ್ ಹೇಳಿಕೆ
- ಡಿ. ಕೆ. ಶಿವಕುಮಾರ್
- ಡಿಸಿಎಂ ಡಿ.ಕೆ. ಶಿವಕುಮಾರ್
- ಯು ಟಿ ಖಾದರ್
- ರಾಜಕೀಯ ತಂತ್ರಗಾರಿಕೆ
- ವಿಧಾನಸಭೆ ಅಧಿವೇಶನ





Leave a comment