ಸೋನ್ಭದ್ರ (ಉತ್ತರ ಪ್ರದೇಶ): ಪವಿತ್ರವಾದ ದಾಂಪತ್ಯ ಸಂಬಂಧಕ್ಕೆ ಕಳಂಕ ತರುವಂತಹ ಹಾಗೂ ಮಾನವೀಯತೆಯನ್ನೇ ಉಸಿರುಗಟ್ಟಿಸುವಂತಹ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯ ಶಕ್ತಿಫೀಠ/ಬೀನಾ ಕಾಲೋನಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಎನ್ಸಿಎಲ್ ಸಂಸ್ಥೆಯಲ್ಲಿ ಸೀನಿಯರ್ ಓವರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮಾ ಶಂಕರ್ ಮಿಶ್ರಾ ಅವರನ್ನು ಅವರ ಪತ್ನಿ ಪ್ರಿಯಾಂಕಾ ಮಿಶ್ರಾ ಹಾಗೂ ಆಕೆಯ ಪ್ರಿಯಕರ ವಿಕಾಸ್ ಚೌಹಾಣ್ ಮತ್ತು ಸಹಚರರು ಸೇರಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಘಟನೆಯ ವಿವರ:
ಎನ್ಸಿಎಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಮಾ ಶಂಕರ್ ಅವರಿಗೆ ರಾತ್ರಿ ಪಾಳಿಯ (ನೈಟ್ ಡ್ಯೂಟಿ) ಕೆಲಸವಿರುತ್ತಿತ್ತು. ಗಂಡ ಕೆಲಸಕ್ಕೆ ತೆರಳಿದ ತಕ್ಷಣ, ಪತ್ನಿ ಪ್ರಿಯಾಂಕಾ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿ, ಪ್ರಿಯಕರ ವಿಕಾಸ್ನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು.
ಘಟನೆ ನಡೆದ ರಾತ್ರಿ ರಮಾ ಶಂಕರ್ ಅವರು ಪ್ರಮುಖ ಫೈಲ್ ಒಂದನ್ನು ಮನೆಯಲ್ಲೇ ಮರೆತು ಡ್ಯೂಟಿಗೆ ತೆರಳಿದ್ದರು. ಮಧ್ಯರಾತ್ರಿ ಫೈಲ್ ಕೊಂಡೊಯ್ಯಲು ಮನೆಗೆ ವಾಪಸ್ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ಸ್ಪೇರ್ ಕೀ ಬಳಸಿ ಒಳಗೆ ಹೋದಾಗ ಪತ್ನಿ ಪ್ರಿಯಕರನೊಂದಿಗೆ ಇರುವುದು ಕಂಡುಬಂದಿದೆ.
ಪ್ರೆಶರ್ ಕುಕ್ಕರ್ನಿಂದ ಹಲ್ಲೆ ಹಾಗೂ ಕೊಲೆ:
ಈ ವೇಳೆ ದಂಪತಿ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಸೇರಿ ಪ್ರೆಶರ್ ಕುಕ್ಕರ್ ಹಾಗೂ ಬಲವಾದ ವಸ್ತುವಿನಿಂದ ರಮಾ ಶಂಕರ್ ತಲೆಗೆ ಹೊಡೆದು, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರಸ್ತೆಬದಿಯಲ್ಲಿ ಎಸೆದು, ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದರು.
ಪೊಲೀಸರ ತನಿಖೆ ಮತ್ತು ಬಂಧನ:
ಘಟನೆಗೆ ಸಂಬಂಧಿಸಿದಂತೆ ರಮಾ ಶಂಕರ್ ಅವರ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾಲ್ ಡಿಟೇಲ್ಸ್ (CDR) ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ನಡೆಸಿ 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಪತ್ನಿ ಪ್ರಿಯಾಂಕಾ, ಆಕೆಯ ಪ್ರಿಯಕರ ವಿಕಾಸ್ ಚೌಹಾಣ್ ಹಾಗೂ ಮೃತದೇಹ ವಿಲೇವಾರಿಗೆ ಸಹಕರಿಸಿದ ಅನುರಾಗ್ ಸಿಂಗ್ ಮತ್ತು ಸೋನು ಗುಪ್ತಾ ಎಂಬ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ





Leave a comment