ಚೆನ್ನೈ: ಸನಾತನ ಕುರಿತ ಹೇಳಿಕೆ ಧರ್ಮದ ವಿರುದ್ಧ ಅಲ್ಲ, ಜಾತಿ ತಾರತಮ್ಯದ ವಿರುದ್ಧ ಎಂದು ಹೇಳುವ ಮೂಲಕ ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಉಲ್ಟಾ ಹೊಡೆದಿದ್ದಾರೆ. ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತು ತನ್ನ ಹೇಳಿಕೆ ಬದಲಿಸಿದ್ದಾರೆ.
ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ‘ಸನಾತನ’ ಕುರಿತಾದ ತಮ್ಮ ಇತ್ತೀಚಿನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತುಗಳು ಯಾವುದೇ ಧರ್ಮ ಅಥವಾ ದೇವಸ್ಥಾನದ ಆರಾಧನೆಯ ವಿರುದ್ಧವಾಗಿರಲಿಲ್ಲ, ಬದಲಿಗೆ ಸಮಾಜದಲ್ಲಿರುವ ಜಾತಿ ತಾರತಮ್ಯ ಮತ್ತು ಅಸಮಾನತೆಯ ವಿರುದ್ಧವಾಗಿತ್ತು ಎಂದು ಅವರು ಗುರುವಾರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಅವರು, “ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದರೆ ಜನರು ದೇವಸ್ಥಾನಕ್ಕೆ ಹೋಗಬಾರದು ಎಂದಲ್ಲ. ಪ್ರತಿಯೊಬ್ಬರಿಗೂ ದೇವಸ್ಥಾನದಲ್ಲಿ ಮತ್ತು ಸಮಾಜದಲ್ಲಿ ಸಮಾನ ಹಕ್ಕುಗಳು ಸಿಗಬೇಕು ಎಂಬುದು ನನ್ನ ಆಶಯ” ಎಂದಿದ್ದಾರೆ. ಅಲ್ಲದೆ, ಪೆರಿಯಾರ್, ಅಂಬೇಡ್ಕರ್ ಮತ್ತು ಅಣ್ಣಾದೊರೈ ಅವರ ಸಾಮಾಜಿಕ ನ್ಯಾಯದ ತತ್ವಗಳನ್ನೇ ತಾನು ಪ್ರತಿಪಾದಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.





Leave a comment