Home ದಾವಣಗೆರೆ “ಬಿಜೆಪಿ ಟಾರ್ಗೆಟ್ ಯಾರು ಗೊತ್ತಾ?” : ಮುಂಬರುವ ಜುಲೈ ತಿಂಗಳ ಮಹತ್ವದ ಬಗ್ಗೆ ಸಿದ್ದರಾಮಯ್ಯ ಬಿಚ್ಚಿಟ್ಟ ಸ್ಫೋಟಕ ಸತ್ಯ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಬಿಜೆಪಿ ಟಾರ್ಗೆಟ್ ಯಾರು ಗೊತ್ತಾ?” : ಮುಂಬರುವ ಜುಲೈ ತಿಂಗಳ ಮಹತ್ವದ ಬಗ್ಗೆ ಸಿದ್ದರಾಮಯ್ಯ ಬಿಚ್ಚಿಟ್ಟ ಸ್ಫೋಟಕ ಸತ್ಯ!

Share
ಸಿದ್ದರಾಮಯ್ಯ
Share

ಬೆಂಗಳೂರು: ದೇಶದಲ್ಲಿ ಮುಂಬರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR – Special Intensive Revision) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ನಿಮ್ಮ ರಾಜಕೀಯ ಬದುಕಿನ ಮಾರಣಹೋಮ ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ನಡೆದ ಎಸ್‌ಐಆರ್ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕಾದ ಚುನಾವಣಾ ಆಯೋಗಕ್ಕೆ ಅರ್ಹ ಮತದಾರರನ್ನು ಕೈಬಿಡುವ ಯಾವುದೇ ಅಧಿಕಾರವಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ 2014ರ ನಂತರ ದೇಶದಲ್ಲಿ ವ್ಯವಸ್ಥಿತವಾಗಿ “ಮತ ದ್ರೋಹ” ಎಸಗಲಾಗುತ್ತಿದೆ. ಜನರ ಬಹುಮತದ ಮೂಲಕ ಗೆದ್ದವರು ಮಾತ್ರ ಅಧಿಕಾರ ನಡೆಸಲು ಯೋಗ್ಯರು, ಆದರೆ ಬಿಜೆಪಿ ಮೋಸದ ಆಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಟಾರ್ಗೆಟ್ ಯಾರು? ಅಂಕಿ-ಅಂಶಗಳ ಲೆಕ್ಕಾಚಾರ:

ದೇಶದ 141 ಕೋಟಿ ಜನಸಂಖ್ಯೆಯಲ್ಲಿ 96 ಕೋಟಿ ಮತದಾರರಿದ್ದಾರೆ. ನಮ್ಮಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕೇವಲ 1,000 ದಿಂದ 5,000 ಮತಗಳ ಅತ್ಯಲ್ಪ ಅಂತರದಿಂದ ಗೆದ್ದಿರುತ್ತಾರೆ. ಇಂತಹ ಸೂಕ್ಷ್ಮ ಜಾಗಗಳಲ್ಲಿ ನಾಲ್ಕೈದು ಸಾವಿರ ಮತಗಳನ್ನು ಕಿತ್ತುಹಾಕಿದರೆ ನಮ್ಮವರ ಗೆಲುವು ಕಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಡವರು, ರೈತರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುವುದೇ ಬಿಜೆಪಿ ಪಕ್ಷದ ಮುಖ್ಯ ಟಾರ್ಗೆಟ್ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ದೇಶದಲ್ಲಿ ಬಿಜೆಪಿ ಪಡೆದಿರುವುದು ಕೇವಲ 36% ಮತಗಳನ್ನು ಮಾತ್ರ, ಅಂದರೆ 64% ಜನ ಬಿಜೆಪಿ ವಿರುದ್ಧವಾಗಿದ್ದಾರೆ. ಈ 64% ಮತಗಳಲ್ಲಿ ಕೇವಲ 10% ಮತಗಳನ್ನು ಕೈಬಿಟ್ಟರೂ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಧಕ್ಕೆಯಾಗಲಿದೆ. 2019ರಲ್ಲಿ 303 ಸ್ಥಾನ ಗೆದ್ದಿದ್ದ ಬಿಜೆಪಿ, 2024ರ ಹೊತ್ತಿಗೆ ಬೆಲೆಯೇರಿಕೆ, ನಿರುದ್ಯೋಗ ಮತ್ತು ವಚನ ಭ್ರಷ್ಟತೆಯಿಂದಾಗಿ 240ಕ್ಕೆ ಕುಸಿದಿದೆ. ಈ ಹಿನ್ನಡೆಯನ್ನು ಮುಂಬರುವ ದಿನಗಳಲ್ಲಿ SIR ಪ್ರಕ್ರಿಯೆಯ ಮೂಲಕ ಅಕ್ರಮವಾಗಿ ಬದಲಾಯಿಸಲು ಅವರು ಸಂಚು ರೂಪಿಸಿದ್ದಾರೆ ಎಂದರು.

ಸಂಘ ಪರಿವಾರ ಹಾಗೂ ಸರ್ವಾಧಿಕಾರದ ಇತಿಹಾಸ:

ಬಿಜೆಪಿ ಮತ್ತು ಸಂಘ ಪರಿವಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, “ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು. ಅವರಿಗೆ ಸರ್ವಾಧಿಕಾರದಲ್ಲೇ ನಂಬಿಕೆ. ಅದಕ್ಕಾಗಿಯೇ ‘ಒನ್ ನೇಷನ್, ಒನ್ ಎಲೆಕ್ಷನ್’ ನೀತಿ ತರುತ್ತಿದ್ದಾರೆ. ಹಿಂದುತ್ವದ ಮಾತನಾಡುವ ಇವರು ಜಾತಿ, ವರ್ಣಾಶ್ರಮದ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡಿಲ್ಲವೇ? ಸಾಮಾಜಿಕ ನ್ಯಾಯ ಬಂದರೆ ತಮಗೆ ಶೋಷಣೆಗೆ ಅವಕಾಶ ಸಿಗಲ್ಲ ಎಂಬುದು ಅವರಿಗೆ ಗೊತ್ತು. ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಅವರು ತಮ್ಮ ಆಪ್ತರನ್ನು ಇಟಲಿ ಮತ್ತು ಜರ್ಮನಿಗೆ ಕಳುಹಿಸಿ ಅಲ್ಲಿನ ಸರ್ವಾಧಿಕಾರವನ್ನು ಅಧ್ಯಯನ ಮಾಡಲು ಬಿಟ್ಟಿದ್ದರು, ಅಲ್ಲಿಂದಲೇ ಇವರಿಗೆ ಸರ್ವಾಧಿಕಾರದ ವ್ಯಾಮೋಹ ಹುಟ್ಟಿದ್ದು,” ಎಂದು ಇತಿಹಾಸವನ್ನು ನೆನಪಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹೆಡ್ಗೆವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಬ್ರಿಟಿಷರ ವಿರುದ್ಧ ಹೋರಾಡಿಲ್ಲ. ಕ್ಷಮಾಪಣೆ ಕೇಳಿ ಜೈಲಿನಿಂದ ಹೊರಬಂದ ಸಾವರ್ಕರ್ ಅವರನ್ನು ಇವರು ವೈಭವೀಕರಿಸುತ್ತಾರೆ. ಇವರ ಹಿಂಬಾಲಕರು ದೇಶ ಉಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಜೂನ್ 30 ರಿಂದ ಜುಲೈ 29: ನಾಯಕರಿಗೆ 5 ಸೂತ್ರಗಳ ಟಾಸ್ಕ್

“ನನ್ನ ರಾಜಕೀಯ ಮುಗಿಯುತ್ತಾ ಬಂದಿದೆ, ಆದರೆ ನೀವು ಇನ್ನೂ ರಾಜಕೀಯ ಮಾಡಬೇಕಾದವರು. ಹಾಗಾಗಿ ಮುಂಬರುವ ಜೂನ್ 30 ರಿಂದ ಜುಲೈ 29 ರವರೆಗಿನ ಒಂದು ತಿಂಗಳ ಅವಧಿ ಅತ್ಯಂತ ಮಹತ್ವದ್ದು,” ಎಂದು ಹೇಳಿದ ಸಿದ್ದರಾಮಯ್ಯ ಪಕ್ಷದ ನಾಯಕರಿಗೆ ಪ್ರಮುಖ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು:

  • ಬಿಎಲ್‌ಒಗಳ ಜೊತೆ ಸಮನ್ವಯ: ಎಲ್ಲಾ ಹಾಲಿ, ಮಾಜಿ ಶಾಸಕರು ಮತ್ತು ಸಂಸದರು ಬಿಎಲ್‌ಒ (BLO) ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮನೆ ಮನೆಗೆ ತೆರಳಬೇಕು.

  • ಬೂತ್ ಮಟ್ಟದ ಜವಾಬ್ದಾರಿ: ಪ್ರತಿ ಬೂತ್‌ಗೆ ಸ್ಥಳೀಯವಾಗಿ ಕನಿಷ್ಠ ಇಬ್ಬರು ನಂಬಿಕಸ್ಥ ಮತದಾರರನ್ನು ಆಯ್ಕೆ ಮಾಡಿ ನಿಗಾ ಇಡಬೇಕು.

  • ಫಾರ್ಮ್ ಭರ್ತಿ ಮತ್ತು ಸ್ವೀಕೃತಿ: ಎನಮರೇಷನ್ ಫಾರ್ಮ್ (Enumeration Form) ಅನ್ನು ಸರಿಯಾಗಿ ಭರ್ತಿ ಮಾಡಿ, ಕಡ್ಡಾಯವಾಗಿ ಅದರ ಸ್ವೀಕೃತಿ ದೃಢೀಕರಣವನ್ನು (Acknowledgement) ಪಡೆಯಲೇಬೇಕು.

  • ಅರ್ಹ ಮತದಾರರ ರಕ್ಷಣೆ: ಒಬ್ಬನೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸಬೇಕು.

ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ. ಈ ಸಂಚನ್ನು ಬಯಲು ಮಾಡಲು ಕಾಂಗ್ರೆಸ್ ನಾಯಕರು ಮುಂಬರುವ ಒಂದು ತಿಂಗಳು ಎಲ್ಲಾ ಕೆಲಸ ಬಿಟ್ಟು SIR ಮೇಲೆ ಕಣ್ಣಿಡಬೇಕು ಎಂದು ಸಿದ್ದರಾಮಯ್ಯ ಕೈಮುಗಿದು ಪ್ರಾರ್ಥಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles