SUDDIKSHANA KANNADA NEWS/ DAVANAGERE/ DATE:16-10-2024
ದಾವಣಗೆರೆ: ನಗರದ ಬೇತೂರು ರಸ್ತೆಯ ಸಮೀಪ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ, ಗಲಾಟೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಸತೀಶ್ ಪೂಜಾರಿ ಸೇರಿದಂತೆ ಒಟ್ಟು 48 ಮಂದಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
14 ಹಿಂದೂ ಕಾರ್ಯಕರ್ತರು ಹಾಗೂ ಮುಸ್ಲಿಂ ಸಮಾಜದ 34 ಮಂದಿಗೆ ಜಾಮೀನು ಮಂಜೂರಾಗಿದ್ದು, ಎಲ್ಲರೂ ಹೊರ ಬಂದಿದ್ದಾರೆ. ಈ ಪೈಕಿ ಓರ್ವ ಹಿಂದೂ ಕಾರ್ಯಕರ್ತನ ಜಾಮೀನು ದಾಖಲಾತಿಗಳಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಜಾಮೀನು ಮಂಜೂರಾಗಿಲ್ಲ ಎಂದು ತಿಳಿದು ಬಂದಿದೆ.
ಸತೀಶ್ ಪೂಜಾರಿ ಅವರನ್ನು ಪ್ರಚೋದನಕಾರಿ ಭಾಷಣ ಆರೋಪದ ಮೇಲೆ ಸತೀಶ್ ಪೂಜಾರಿ ಅವರ ಮೇಲೆ ಕೇಸ್ ದಾಖಲಾಗಿತ್ತು. ಬಳಿಕ ಪೊಲೀಸರು ಸಾಗರದಲ್ಲಿ ಬಂಧಿಸಿದ್ದರು. ಸತೀಶ್ ಪೂಜಾರಿ ಸೇರಿದಂತೆ ಹಿಂದೂ ಕಾರ್ಯಕರ್ತರು ಬಿಡುಗಡೆಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಹಳೇ ದಾವಣಗೆರೆಯ ಕಾರಾಗೃಹ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಂತರ ಕೆಟಿಜೆ ನಗರ ಹಾಗೂ ಸತೀಶ್ ಪೂಜಾರಿ ನಿವಾಸದ ಬಳಿಯೂ ನೂರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಕಾರ್ಯಕರ್ತರು ಸತೀಶ್ ಪೂಜಾರಿ ಅವರಿಗೆ ಜೈಕಾರ ಹಾಕುತ್ತಾ ಅದ್ಧೂರಿಯಾಗಿ ಸ್ವಾಗತಿಸಿದರು. ಹಿಂದೂ ಹುಲಿ ಸತೀಶ್ ಪೂಜಾರಿ, ಸತೀಶಣ್ಣಗೆ ಜೈ ಜೈ ಎನ್ನುತ್ತಾ ಜೈಕಾರ ಹಾಕಿದರು.
ಸತೀಶ್ ಪೂಜಾರಿ ಅವರಿಗೆ ಕುಟುಂಬ ವರ್ಗದ ಸದಸ್ಯರು ಓಕುಳಿ ಮಾಡಿ, ಆರತಿ ಎತ್ತಿ ಹಣೆಗೆ ತಿಲಕ ಇಟ್ಟು ಬರಮಾಡಿಕೊಂಡರು. ಸತೀಶ್ ಪೂಜಾರಿ ಪತ್ನಿ, ಮಕ್ಕಳು, ತಂದೆ ಹಾಗೂ ಸುತ್ತಮುತ್ತಲಿನವರ ಮುಖದಲ್ಲಿ ಮಂದಹಾಸ ಮೂಡಿತ್ತು.