ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಭಾಗಿಯಾಗಿದ್ದಾರೆನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಇದೀಗ ತನಿಖೆಗೆ ಬಹುದೊಡ್ಡ ತಿರುವು ಸಿಕ್ಕಿದೆ.
ಪ್ರಕರಣದ 14ನೇ ಆರೋಪಿ (A-14) ಹಾಗೂ ದರ್ಶನ್ ಆಪ್ತನಾಗಿದ್ದ ಪ್ರದೋಷ್ ಎಸ್. ರಾವ್, ನ್ಯಾಯಾಲಯದಲ್ಲಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿ ‘ಅಪ್ರೂವರ್’ (ಸರ್ಕಾರಿ ಸಾಕ್ಷಿ) ಆಗಲು ಮುಂದಾಗಿದ್ದಾನೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ 2024 ಜೂನ್ 8ರಂದು ಕಾಮಾಕ್ಷಿಪಾಳ್ಯದ ಶೆಡ್ನಲ್ಲಿ ನಡೆದ ಕೊಲೆ ಹಾಗೂ ಚಿತ್ರಹಿಂಸೆಯ ಕರಾಳ ಘಟನೆಯ ಸಂಪೂರ್ಣ ವಿವರವನ್ನು ಪ್ರದೋಷ್ ಬಿಚ್ಚಿಟ್ಟಿದ್ದಾನೆ.
ಪ್ರದೋಷ್ ಅರ್ಜಿಯಲ್ಲಿರುವ ಪ್ರಮುಖ ಅಂಶಗಳು:
ಪವಿತ್ರಾ ಗೌಡ ಸಮ್ಮುಖದಲ್ಲೇ ಹಲ್ಲೆ: ಶೆಡ್ಗೆ ರೇಣುಕಾಸ್ವಾಮಿಯನ್ನು ಅಪಹರಿಸಿ ತಂದಾಗ ದರ್ಶನ್ ಆತನಿಗೆ ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದರು. ನಟಿ ಪವಿತ್ರಾ ಗೌಡ ಸ್ಥಳಕ್ಕೆ ಆಗಮಿಸಿ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದರು.
ಎದೆ ಮೇಲೆ ನಿಂತು ತುಳಿದ ದರ್ಶನ್: ನೈಲಾನ್ ಹಗ್ಗದಿಂದ ರೇಣುಕಾಸ್ವಾಮಿಗೆ ಹಿಂಸಿಸಲಾಯಿತು. ದರ್ಶನ್ ರೇಣುಕಾಸ್ವಾಮಿಯ ಕುತ್ತಿಗೆ ಮತ್ತು ಎದೆಗೆ ಬೂಟುಕಾಲಿನಿಂದ ಒದ್ದಿದ್ದಲ್ಲದೆ, ಆತನ ಎದೆಯ ಮೇಲೆಯೇ ಎರಡೂ ಕಾಲಿಟ್ಟು ನಿಂತು ಸಾಯುವಂತೆ ದಾಂದಲೆ ನಡೆಸಿದ್ದರು.
ತಡೆದರೂ ಕೇಳಲಿಲ್ಲ: “ಹೀಗೆ ಹೊಡೆದರೆ ಆತ ಸತ್ತುಹೋಗುತ್ತಾನೆ” ಎಂದು ತಾನು ದರ್ಶನ್ ಅವರನ್ನು ತಡೆಯಲು ಯತ್ನಿಸಿದರೂ ಅವರು ಕೇಳಲಿಲ್ಲ ಎಂದು ಪ್ರದೋಷ್ ಆರೋಪಿಸಿದ್ದಾನೆ.
15 ಲಕ್ಷ ರೂ. ನೀಡಿ ಡೀಲ್, ಬೆದರಿಕೆ: ರೇಣುಕಾಸ್ವಾಮಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ದರ್ಶನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಕೇಸ್ ಮುಚ್ಚಿಹಾಕಲು ಹಣಕಾಸು ವಿವಾದದ ಸುಳ್ಳು ಕಥೆ ಕಟ್ಟಿ, ಬೇರೆ ವ್ಯಕ್ತಿಗಳು ಶರಣಾಗಲು 15 ಲಕ್ಷ ರೂಪಾಯಿ ನಗದು ನೀಡಿದ್ದರು. ನಂತರ ಮೃತದೇಹವನ್ನು ಸುಮನಹಳ್ಳಿಯ ಚರಂಡಿ ಬಳಿ ಎಸೆಯಲಾಯಿತು.





Leave a comment