ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಮತ್ತು ವಂಚನೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಯೋಧ್ಯೆ ಬಾರ್ ಅಸೋಸಿಯೇಷನ್ (Ayodhya Bar Association) ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದ್ದು, ಬಂಧಿತ ಯಾವುದೇ ಆರೋಪಿಗಳ ಪರವಾಗಿ ಸ್ಥಳೀಯ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
5 ಲಕ್ಷ ರೂಪಾಯಿ ದಂಡದ ಎಚ್ಚರಿಕೆ:
ಅಯೋಧ್ಯೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಾಲಿಕಾ ಪ್ರಸಾದ್ ಮಿಶ್ರಾ ಮಾತನಾಡಿ, “ರಾಮ ಮಂದಿರದ ನಿಧಿಗೆ ಭಕ್ತರು ನೀಡಿದ ಕಾಣಿಕೆಯನ್ನು ಲೂಟಿ ಮಾಡಿದ ಆರೋಪಿಗಳ ಪರವಾಗಿ ಯಾವುದೇ ವಕೀಲರು ನಿಲ್ಲಬಾರದು. ಒಂದು ವೇಳೆ ಸಂಘದ ನಿಯಮ ಮೀರಿ ಯಾರಾದರೂ ಆರೋಪಿಗಳ ಪರ ವಾದ ಮಂಡಿಸಲು ಮುಂದಾದರೆ, ಅವರಿಗೆ 5 ಲಕ್ಷ ರೂಪಾಯಿ ಭಾರಿ ದಂಡ ವಿಧಿಸಲಾಗುವುದು,” ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆಯಿದೆ.
ಇದರೊಂದಿಗೆ, ದೇಣಿಗೆ ಹಗರಣಕ್ಕೆ ಸಂಬಂಧಿಸಿದಂತೆ ರಾಮಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರ ಸಂಘ ಒತ್ತಾಯಿಸಿದೆ.
ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ:
ಮತ್ತೊಂದೆಡೆ, ಈ ಇಡೀ ಹಗರಣದ ತನಿಖೆಯನ್ನು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಬೇಕು ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರಿದ್ದ ರಜಾಕಾಲದ ಪೀಠವು, “ಇದರಲ್ಲಿ ಅಷ್ಟೊಂದು ತುರ್ತು ಏನಿದೆ? ಜಗತ್ತೇನೂ ಮುಳುಗಿ ಹೋಗುತ್ತಿಲ್ಲ,” ಎಂದು ಹೇಳಿ, ಸುಪ್ರೀಂ ಕೋರ್ಟ್ ಬೇಸಿಗೆ ರಜೆಯ ನಂತರ ಪುನರಾರಂಭಗೊಳ್ಳುವ ಜುಲೈ 13, 2026 ರಂದು ನಿಯಮಿತ ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸಿದೆ.
ಪ್ರಸ್ತುತ, ದೇವಸ್ಥಾನದ ಕಾಣಿಕೆ ಪೆಟ್ಟಿಗೆಯ ಹಣ ಮತ್ತು ಬ್ಯಾಂಕ್ ಖಾತೆಯಲ್ಲಿದ್ದ ಮೊತ್ತದ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅಯೋಧ್ಯೆ ಪೊಲೀಸರು ಎಂಟು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿ, ಎಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
- Anil Mishra
- Ayodhya Bar Association
- Ayodhya temple fraud
- champat rai
- Ram Janmabhoomi Teerth Kshetra
- ram mandir donation scam
- Ram Mandir row
- Rs 5 lakh fine on lawyers
- SIT investigation Ayodhya
- Supreme Court on Ayodhya scam
- Trending news India
- ಅನಿಲ್ ಮಿಶ್ರಾ
- ಅಯೋಧ್ಯೆ ಬಾರ್ ಅಸೋಸಿಯೇಷನ್
- ಅಯೋಧ್ಯೆ ವಕೀಲರ ದಂಡ
- ಕರ್ನಾಟಕ ಲೇಟೆಸ್ಟ್ ನ್ಯೂಸ್
- ಕಾಣಿಕೆ ಹಗರಣ ಅಯೋಧ್ಯೆ
- ಚಂಪತ್ ರಾಯ್
- ರಾಮ ಜನ್ಮಭೂಮಿ ಟ್ರಸ್ಟ್ ಹಗರಣ
- ರಾಮ ಮಂದಿರ ದೇಣಿಗೆ ವಂಚನೆ
- ರಾಮ ಮಂದಿರ ನಿಧಿ ದುರುಪಯೋಗ
- ಸುಪ್ರೀಂ ಕೋರ್ಟ್ ವಿಚಾರಣೆ





Leave a comment