ಭೋಪಾಲ್: ಭಾರತದಲ್ಲಿ 2047ರ ವೇಳೆಗೆ ಇಸ್ಲಾಮಿಕ್ ಸರ್ಕಾರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಉಗ್ರಗಾಮಿ ಸಿದ್ದಾಂತಕ್ಕೆ ಪ್ರಚೋದಿಸುತ್ತಿದ್ದ ದೊಡ್ಡದೊಂದು ಜಾಲವನ್ನು ಮಧ್ಯಪ್ರದೇಶದ ಭಯೋತ್ಪಾದನಾ ನಿರೋಧಕ ದಳ (MP ATS) ಪತ್ತೆಹಚ್ಚಿದೆ.
ಈ ದೇಶವಿರೋಧಿ ಕೃತ್ಯಕ್ಕೆ ಸಂಬಂಧಿಸಿದಂತೆ ಭೋಪಾಲ್ನ ಖಾಜಿ ಕ್ಯಾಂಪ್ ಪ್ರದೇಶದ ಕೋಚಿಂಗ್ ಕ್ಲಾಸ್ ಶಿಕ್ಷಕ ಮೊಹಮ್ಮದ್ ಫರಾಜ್ ಮತ್ತು ಈತನಿಗೆ ತರಬೇತಿ ನೀಡಿದ್ದ ಮಾಸ್ಟರ್ ಮೈಂಡ್ ನಯೀಮ್ ಖುರೇಷಿಯನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪಾಕಿಸ್ತಾನ ಲಿಂಕ್, ಅಫ್ಘಾನಿಸ್ತಾನದಲ್ಲಿ ಟ್ರೈನಿಂಗ್ ಪ್ಲಾನ್! ಭೋಪಾಲ್ನಲ್ಲಿ ಕೋಚಿಂಗ್ ಟೀಚರ್ ಅರೆಸ್ಟ್ ಹಾರರ್ ಕಥೆ ಇದು.
ಮೊಬೈಲ್ನಲ್ಲೇ ಇತ್ತು ಪ್ರತ್ಯೇಕ ಜಗತ್ತು:
ಬಂಧಿತ ಮೊಹಮ್ಮದ್ ಫರಾಜ್ ತನ್ನ ಮನೆಯಲ್ಲೇ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಹಾಗೂ ಕ್ಲಿನಿಕ್ ಒಂದರಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ನೆರೆಹೊರೆಯವರಿಗೆ ಈತ ಅತ್ಯಂತ ಸಾಮಾನ್ಯ ಹಾಗೂ ಗೌರವಾನ್ವಿತ ವ್ಯಕ್ತಿಯಂತೆ ನಟಿಸುತ್ತಿದ್ದ. ಆದರೆ ಈತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಆಘಾತಕಾರಿ ಮಾಹಿತಿ ಹೊರಬಂದಿದೆ. ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗ್ರೂಪ್ಗಳ ಮೂಲಕ ಪಾಕಿಸ್ತಾನಿ, ಭಾರತೀಯ ಮತ್ತು ವಿದೇಶಿ ಮುಜಾಹಿದ್ದೀನ್ಗಳೊಂದಿಗೆ ಈತ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಸಮಾಜದಿಂದ ದೂರವಿರುವ ಯುವಕರನ್ನು ಟಾರ್ಗೆಟ್ ಮಾಡಿ, ಉಗ್ರ ವೀಡಿಯೊಗಳನ್ನು ಶೇರ್ ಮಾಡುವ ಮೂಲಕ ಅವರ ಮನಸ್ಸು ಕೆಡಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಬಿದ್ದ PFI ‘ಮಿಷನ್ 2047’ ರಹಸ್ಯ ದಾಖಲೆ:
ಆರೋಪಿ ಫರಾಜ್ನಿಂದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ‘ಮಿಷನ್ 2047’ ರಹಸ್ಯ ದಾಖಲೆಯನ್ನು ಎಟಿಎಸ್ ವಶಪಡಿಸಿಕೊಂಡಿದೆ. ಈ ದಾಖಲೆಯಲ್ಲಿ 2047ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಅಧಿಕಾರವನ್ನು ಮರಳಿ ತರುವುದು ಮುಖ್ಯ ಗುರಿ ಎಂದು ಉಲ್ಲೇಖಿಸಲಾಗಿದೆ. ಒಟ್ಟು ಮುಸ್ಲಿಂ ಜನಸಂಖ್ಯೆಯ ಕೇವಲ ಶೇ. 10 ರಷ್ಟು ಜನರು ಒಟ್ಟಾಗಿ PFI ಬೆನ್ನಿಗೆ ನಿಂತರೆ, ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಮರುಸ್ಥಾಪಿಸಬಹುದು ಎಂದು ಅದರಲ್ಲಿ ಸಿದ್ಧಾಂತ ಬಿತ್ತಲಾಗಿತ್ತು. ಯುವಕರಲ್ಲಿ ನಿರಂತರವಾಗಿ ಅಸಮಾಧಾನ ಮತ್ತು ದ್ವೇಷವನ್ನು ಉಂಟುಮಾಡುವುದು ಹಾಗೂ ಗುರಿ ಇಟ್ಟ ಸರಣಿ ಕೊಲೆಗಳನ್ನು (Targeted Killings) ಮಾಡಲು ಇವರಿಗೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.
ಮಾಸ್ಟರ್ ಮೈಂಡ್ ಅರೆಸ್ಟ್, ಕಠಿಣ ಕ್ರಮದ ಎಚ್ಚರಿಕೆ:
ಫರಾಜ್ ನೀಡಿದ ಮಾಹಿತಿ ಆಧರಿಸಿ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ದಿಯೋಬಂದ್ನಲ್ಲಿ ಮಾಸ್ಟರ್ ಮೈಂಡ್ ನಯೀಮ್ ಖುರೇಷಿಯನ್ನು ಬಂಧಿಸಲಾಗಿದೆ. ಈತ ಫರಾಜ್ನನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ ಉಗ್ರ ತರಬೇತಿ ಕೊಡಿಸಲು ಮತ್ತು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, “ದೇಶದ ಭದ್ರತೆಗೆ ಧಕ್ಕೆ ತರುವ ಇಂತಹ ಉಗ್ರ ಸಿದ್ಧಾಂತಗಳನ್ನು ಬುಡಸಮೇತ ಕಿತ್ತೆಸೆಯಲಾಗುವುದು. ಇಂತಹ ದೇಶದ್ರೋಹಿಗಳನ್ನು ಬಿಡುವುದಿಲ್ಲ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಸದ್ಯ ಎಟಿಎಸ್ ತನಿಖೆಯನ್ನು ತೀವ್ರಗೊಳಿಸಿದ್ದು, ಈ ಜಾಲ ದೇಶದ ಇನ್ಯಾವ ರಾಜ್ಯಗಳಿಗೆ ಹರಡಿದೆ ಎಂಬುದರ ತನಿಖೆ ನಡೆಸುತ್ತಿದೆ.
- Bhopal radicalisation case
- Lone wolf attack prevention
- Madhya Pradesh Police terror probe
- Mission 2047 document
- Mohammad Faraz
- MP ATS arrest
- MP ATS ಬಂಧನ
- Naeem Qureshi Saharanpur
- PFI conspiracy India
- Telegram terror module
- ದೇಶವಿರೋಧಿ ಸಂಚು
- ನಯೀಮ್ ಖುರೇಷಿ
- ಪಿಎಫ್ಐ ರಹಸ್ಯ ದಾಖಲೆ
- ಭೋಪಾಲ್ ಉಗ್ರ ಜಾಲ
- ಮಧ್ಯಪ್ರದೇಶ ಕ್ರೈಂ ನ್ಯೂಸ್
- ಮಿಷನ್ 2047
- ಮೊಹಮ್ಮದ್ ಫರಾಜ್
- ಸಾಮಾಜಿಕ ಜಾಲತಾಣ ಪ್ರಚೋದನೆ





Leave a comment