ಕೃಷ್ಣನಗರ (ಪಶ್ಚಿಮ ಬಂಗಾಳ): ದ್ವೇಷಪೂರಿತ ಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾಗೆ ಪಶ್ಚಿಮ ಬಂಗಾಳದ ಕೃಷ್ಣನಗರ ನ್ಯಾಯಾಲಯ ಬುಧವಾರ ಬಂಧನ ವಾರಂಟ್ (Arrest Warrant) ಜಾರಿಗೊಳಿಸಿದೆ. ಕೋರ್ಟ್ ನೀಡಿದ್ದ ಬಹುಸಂಖ್ಯೆಯ ಸಮನ್ಸ್ ಪ್ರಕ್ರಿಯೆಗಳನ್ನು ಪದೇ ಪದೇ ನಿರ್ಲಕ್ಷಿಸಿ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಠಿಣ ಕ್ರಮ ಕೈಗೊಂಡಿದೆ.
ಕೃಷ್ಣನಗರದ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದ್ದು, ಆಗಸ್ಟ್ 28ರ ಒಳಗಾಗಿ ವಾರಂಟ್ ಜಾರಿಗೊಳಿಸಿದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಗೈರುಹಾಜರಿಗೆ ವಕೀಲರ ಸಮರ್ಥನೆ:
ಬುಧವಾರ ಸಂಜೆ 5 ಗಂಟೆಯೊಳಗೆ ಕೋರ್ಟ್ಗೆ ಹಾಜರಾಗುವಂತೆ ಮಂಗಳವಾರವೇ ನ್ಯಾಯಾಲಯ ಸೂಚಿಸಿತ್ತು. ಆದರೆ ಮಹುವಾ ಮೊಯಿತ್ರಾ ಹಾಜರಾಗಲಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಅವರ ವಕೀಲರು, “ಕೋರ್ಟ್ ಆವರಣದ ಹೊರಗೆ ಪ್ರತಿಭಟನಾಕಾರರಿಂದ ಕಿರುಕುಳ ಮತ್ತು ತೊಂದರೆಯಾಗುವ ಭೀತಿ ಇರುವುದರಿಂದ ಸಂಸದರು ಖುದ್ದಾಗಿ ಹಾಜರಾಗುತ್ತಿಲ್ಲ” ಎಂದು ಕಾರಣ ನೀಡಿದರು.
ಕೋರ್ಟ್ ಕಟ್ಟುನಿಟ್ಟಿನ ಅಭಿಪ್ರಾಯ:
ಮಹುವಾ ಅವರ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, “ಆರೋಪಿಯು ನ್ಯಾಯಾಲಯದ ಆದೇಶಗಳನ್ನು ಪದೇ ಪದೇ ಉಲ್ಲಂಘಿಸುತ್ತಿರುವುದು ಅವರ ಉದಾಹಸೀನ ಧೋರಣೆಯನ್ನು ತೋರಿಸುತ್ತದೆ. ಆರೋಪಿಗೆ ಕಾನೂನು ಮತ್ತು ನ್ಯಾಯಾಲಯದ ಮೇಲೆ ಯಾವುದೇ ಗೌರವವಿಲ್ಲದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಬಂಧನ ವಾರಂಟ್ ಜಾರಿಗೊಳಿಸುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಬೇರೆ ಯಾವುದೇ ಆಯ್ಕೆಯಿಲ್ಲ” ಎಂದು ಕಿಡಿಕಾರಿದರು.
ಪ್ರಕರಣದ ಹಿನ್ನೆಲೆ ಏನು?
ಕಳೆದ ಜೂನ್ 17, 2026 ರಂದು ಕೃಷ್ಣನಗರ ಕೋರ್ಟ್ ಆವರಣದ ಹೊರಗೆ ಮಹಿಳೆಯರು ಮೊಟ್ಟೆ ಹಿಡಿದು ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ, ಮಹುವಾ ಮೊಯಿತ್ರಾ ಅವರು ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಮಹಿಳೆಯರು ಮುಸುಕು ಧರಿಸಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ನೀಡಿದ್ದ ಹೇಳಿಕೆಯು ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದೆ ಹಾಗೂ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.
ಪ್ರಸ್ತುತ ಕೃಷ್ಣನಗರ ಪೊಲೀಸರು ಈ ದೂರಿನನ್ವಯ ದ್ವೇಷಪೂರಿತ ಭಾಷಣ, ಬೆದರಿಕೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ವಿವಿಧ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಅರೆಸ್ಟ್ ವಾರಂಟ್ ಜಾರಿಯಾಗಿರುವುದರಿಂದ ಆಗಸ್ಟ್ 28 ರೊಳಗೆ ಪೊಲೀಸರು ಕೋರ್ಟ್ಗೆ ನೀಡುವ ವರದಿ ಮುಂದಿನ ಹಂತದ ನಿರ್ಣಾಯಕ ಬೆಳವಣಿಗೆಯಾಗಲಿದೆ.





Leave a comment