ಶ್ರೀನಗರ: ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಕಣಿವೆಯಿಂದ ಅವರ ನಿರ್ಗಮನಕ್ಕೆ (ಎಕ್ಸೋಡಸ್) ಸಂಬಂಧಿಸಿದ ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸುವ ಅಥವಾ ತನಿಖೆ ನಡೆಸುವ ಪ್ರಯತ್ನಗಳ ವಿರುದ್ಧ ಲಷ್ಕರ್-ಎ-ತೊಯ್ಬಾ (LeT) ಬೆಂಬಲಿತ ‘ಯುನೈಟೆಡ್ ಲಿಬರೇಷನ್ ಕೌನ್ಸಿಲ್’ (ULC) ಉಗ್ರ ಸಂಘಟನೆ ತೀವ್ರ ಬೆದರಿಕೆ ಹಾಕಿದೆ.
ಆಗಸ್ಟ್ 27 ರಂದು ದಿನಾಂಕ ಹೊಂದಿರುವ ಈ ಬೆದರಿಕೆ ಪತ್ರವನ್ನು ULC ಮೀಡಿಯಾ ಸಂಯೋಜಕ ಅಹ್ಮದ್ ಬಿಲಾಲ್ ಬಿಡುಗಡೆ ಮಾಡಿದ್ದು, ಕಾಶ್ಮೀರಿ ಪಂಡಿತರ ವಿರುದ್ಧ ಈ ಸಂಘಟನೆ ನೀಡುತ್ತಿರುವ ನಾಲ್ಕನೇ ಬೆದರಿಕೆ ಇದಾಗಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವವರನ್ನು “ದ್ರೋಹಿಗಳು” ಎಂದು ಕರೆದಿರುವ ಉಗ್ರ ಪಡೆ, ಎಷ್ಟೇ ಭದ್ರತೆ ಒದಗಿಸಿದರೂ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದೆ.
1990ರ ದಶಕದ ಕಾಶ್ಮೀರಿ ಪಂಡಿತರ ನಿರ್ಗಮನವು ಭಾರತ ಸರ್ಕಾರದ “ಪೂರ್ವಯೋಜಿತ ಕಾರ್ಯಕ್ರಮ” ಎಂದು ಆರೋಪಿಸಿರುವ ಯುಎಲ್ಸಿ, ಕಾಶ್ಮೀರಿ ಪಂಡಿತರ ಪ್ರಕರಣಗಳನ್ನು ಮರುತನಿಖೆ ಮಾಡುವುದಾದರೆ ಗಾವ್ಕಡಲ್, ಸೊಪೋರ್, ಹಂದ್ವಾರಾ ಮತ್ತು 1993ರ ಬಿಜ್ಬೆಹರಾ ಘಟನೆಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ಸದ್ಯ ಈ ಬೆದರಿಕೆ ಪತ್ರದ ಮೂಲ ಹಾಗೂ ಸತ್ಯಾಸತ್ಯತೆಯನ್ನು ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ತೀವ್ರವಾಗಿ ಪರಿಶೀಲಿಸುತ್ತಿದ್ದು, ಕಣಿವೆಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.





Leave a comment