ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈನ ಬಾಂದ್ರಾ ನಿವಾಸದಲ್ಲಿ 2025ರ ಜನವರಿಯಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಾಂಗ್ಲಾದೇಶಿ ಪ್ರಜೆ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಲು ಮುಂದಾಗಿದ್ದಾನೆ.
ಪ್ರಕರಣದ ಆರೋಪಿ ಮೊಹಮ್ಮದ್ ಶರಿಫುಲ್ ಇಸ್ಲಾಂ, ತಾನು ತಪ್ಪೊಪ್ಪಿಕೊಳ್ಳುವುದಾಗಿ ತಿಳಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತನಗೆಕ್ಷಮೆ ಅಥವಾ ಶಿಕ್ಷೆಯಲ್ಲಿ ವಿನಾಯಿತಿ (leniency) ನೀಡುವಂತೆ ಕೋರಿದ್ದಾನೆ ಎಂದು ಆತನ ಪರ ವಕೀಲ ವುಪುಲ್ ದುಷಿಂಗ್ ತಿಳಿಸಿದ್ದಾರೆ. ಜನವರಿ 2025ರಲ್ಲಿ ನಡೆದ ಈ ಘಟನೆಯ ನಂತರ ಬಂಧಿಸಲ್ಪಟ್ಟ ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಈ ಅರ್ಜಿಯ ವಿಚಾರಣೆ ನಡೆಸಿದ ಮುಂಬೈ ನ್ಯಾಯಾಲಯವು, ಈ ಕುರಿತು ಆಕ್ಷೇಪಣೆ ಅಥವಾ ಪ್ರತಿಕ್ರಿಯೆ ಸಲ್ಲಿಸುವಂತೆ ಅಭಿಯೋಜನೆಗೆ (prosecution) ಸೂಚಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ. ಈ ತಿಂಗಳ ಆರಂಭದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿ.ಪಿ. ದೇಶ್ಮುಖ್ ಅವರು ಆರೋಪಿಯ ವಿರುದ್ಧ ಆರೋಪಗಳನ್ನು ನಿಗದಿಪಡಿಸಿದ್ದರು. 2025ರ ಜನವರಿ 16ರಂದು ನಡೆದ ಈ ಕೃತ್ಯದಲ್ಲಿ ಸೈಫ್ ಅಲಿ ಖಾನ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿದ್ದರು.





Leave a comment