ಬೆಂಗಳೂರು: ರಾಜ್ಯದ ಶ್ರಮಿಕ ವರ್ಗಕ್ಕೆ ಕರ್ನಾಟಕ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಕಾರ್ಮಿಕರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿರುವ ಸರ್ಕಾರ, ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಹೆಚ್ಚಿಸಿ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸುಪ್ರೀಂ ಕೋರ್ಟ್ನ ನಿರ್ದೇಶನಗಳ ಅನ್ವಯ ಈ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ನಿರ್ಧಾರದಿಂದ ರಾಜ್ಯದ ಅಸಂಘಟಿತ ವಲಯ ಸೇರಿದಂತೆ 81 ಪರಿಶಿಷ್ಟ ಉದ್ಯೋಗಗಳ ಲಕ್ಷಾಂತರ ಕಾರ್ಮಿಕರಿಗೆ ನೇರ ಆರ್ಥಿಕ ಭದ್ರತೆ ಸಿಗಲಿದೆ.
ಹೊಸ ವೇತನ ಶ್ರೇಣಿ ವಿವರಗಳು:
ಬೆಂಗಳೂರು ನಗರ: ಸಾಮಾನ್ಯ ಕಾರ್ಮಿಕರ ಕನಿಷ್ಠ ಮಾಸಿಕ ವೇತನ ರೂ. 23,376 ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಬೆಂಗಳೂರಿನಲ್ಲಿರುವ ನುರಿತ (Skilled) ಕಾರ್ಮಿಕರ ಮಾಸಿಕ ವೇತನವನ್ನು ರೂ. 31,114 ಕ್ಕೆ ನಿಗದಿಪಡಿಸಲಾಗಿದೆ.
ಇತರ ಜಿಲ್ಲೆಗಳು: ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ಕಾರ್ಮಿಕರ ಕೌಶಲ್ಯ ಮತ್ತು ಸ್ಥಳದ ಆಧಾರದ ಮೇಲೆ ಕನಿಷ್ಠ ವೇತನವು ರೂ. 19,300 ರಿಂದ ರೂ. 21,251 ರವರೆಗೆ ಇರಲಿದೆ.
ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ:
ಈ ಹಿಂದೆ ಜಾರಿಯಲ್ಲಿದ್ದ ‘ನಾಲ್ಕು ವಲಯಗಳ’ (Four-Zone Model) ವರ್ಗೀಕರಣ ವ್ಯವಸ್ಥೆಯನ್ನು ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ ಪರಿಶಿಷ್ಟ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರುವ ಮೂಲಕ ವೇತನ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲದೊಂದಿಗೆ ಕಾರ್ಮಿಕ ಇಲಾಖೆ ಈ ಐತಿಹಾಸಿಕ ಸುಧಾರಣೆ ತಂದಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.





Leave a comment