ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ‘ಬುರುಡೆ ಪ್ರಕರಣ’ (ಅಕ್ರಮ ಶವಗಳ ಹೂತ ಆರೋಪ) ಇದೀಗ ಅತ್ಯಂತ ಸ್ಫೋಟಕ ತಿರುವು ಪಡೆದುಕೊಂಡಿದೆ.
ಇಡೀ ಪ್ರಕರಣದ ಮುಖ್ಯ ಸೂತ್ರಧಾರ ಹಾಗೂ ದೂರುದಾರನಾಗಿದ್ದ ‘ಮಾಸ್ಕ್ ಮ್ಯಾನ್’ ಸಿ.ಎನ್. ಚಿನ್ನಯ್ಯ, ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆದಿದೆ ಎನ್ನಲಾದ ಬರೋಬ್ಬರಿ ₹200 ಕೋಟಿ ರೂ. ಬಜೆಟ್ನ ಮಹಾ ಷಡ್ಯಂತ್ರವನ್ನು ಕರ್ನಾಟಕ ಹೈಕೋರ್ಟ್ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಪ್ರಕರಣದ ಅಂತಿಮ ತನಿಖಾ ವರದಿಯನ್ನು ಶೀಘ್ರವಾಗಿ ಸಲ್ಲಿಕೆ ಮಾಡಲು ಮತ್ತು ಅಸಲಿ ಸಂಚುಗಾರರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ರಾಜ್ಯ ಗೃಹ ಇಲಾಖೆ ಹಾಗೂ ವಿಶೇಷ ತನಿಖಾ ತಂಡಕ್ಕೆ (SIT) ತುರ್ತು ನೋಟಿಸ್ ಜಾರಿ ಮಾಡಿದ್ದು, ತನಿಖೆಯ ಪ್ರಸ್ತುತ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.
ಮಾಸ್ಕ್ನೊಳಗಿತ್ತು ರಹಸ್ಯ ಹೆಡ್ಫೋನ್! ಯೂಟ್ಯೂಬರ್ಗಳ ಗೇಮ್ಪ್ಲಾನ್!
ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಚಿನ್ನಯ್ಯ ನೀಡಿರುವ ಹೇಳಿಕೆಗಳು ಇಡೀ ತನಿಖೆಯ ದಿಕ್ಕನ್ನೇ ಬದಲಿಸುವಂತಿವೆ. ಕಾರ್ಯಾಚರಣೆಯ ಸಮಯದಲ್ಲಿ ತನ್ನ ಮುಖಕ್ಕೆ ಹಾಕಲಾಗಿದ್ದ ಮಾಸ್ಕ್ನೊಳಗೆ ರಹಸ್ಯವಾಗಿ ಹೆಡ್ಫೋನ್ ಇಡಲಾಗಿತ್ತು ಎಂದು ಆತ ಒಪ್ಪಿಕೊಂಡಿದ್ದಾನೆ. “ಕೆಲವು ಯೂಟ್ಯೂಬರ್ಗಳು ಹಾಗೂ ಸಂಚುಗಾರರು ಆ ಹೆಡ್ಫೋನ್ ಮೂಲಕ ನಾನು ಎಸ್ಐಟಿ ಅಧಿಕಾರಿಗಳ ಮುಂದೆ ಏನು ಮಾತನಾಡಬೇಕು ಮತ್ತು ಯಾವ ಜಾಗಗಳನ್ನು ತೋರಿಸಬೇಕು ಎಂದು ಲೈವ್ ಆಗಿ ತರಬೇತಿ ನೀಡುತ್ತಿದ್ದರು. ಮೊದಲೇ ಸ್ಕ್ರಿಪ್ಟ್ ಸಿದ್ಧಪಡಿಸಿ ಸುಮಾರು 30 ರಿಂದ 35 ಸ್ಥಳಗಳ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು” ಎಂದು ಚಿನ್ನಯ್ಯ ಗಂಭೀರ ಆರೋಪ ಮಾಡಿದ್ದಾನೆ.
₹200 ಕೋಟಿ ಬಜೆಟ್, ₹50 ಲಕ್ಷದ ಆಮಿಷ ಹಾಗೂ ಕೇರಳ ಫಂಡಿಂಗ್!
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹೆಸರನ್ನು ಕೆಡಿಸಲು ಮತ್ತು ಅವರನ್ನು ಜೈಲಿಗೆ ಕಳುಹಿಸಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬೃಹತ್ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. “ಈ ಸುಳ್ಳು ದೂರನ್ನು ಸೃಷ್ಟಿಸಲು ಪ್ರಮುಖ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ನನಗೆ 50 ಲಕ್ಷ ರೂಪಾಯಿ ಕೊಡುವ ಆಮಿಷ ಒಡ್ಡಿದ್ದನು. ಈ ಇಡೀ ಆಟಕ್ಕೆ ನೆರೆಯ ಕೇರಳ ರಾಜ್ಯದಿಂದ ಭಾರಿ ಪ್ರಮಾಣದ ಫಂಡಿಂಗ್ ಬಂದಿರುವುದರ ಜೊತೆಗೆ ಚಿತ್ರದುರ್ಗದ ಮಹಿಳೆಯೊಬ್ಬರು ದೊಡ್ಡ ಮಟ್ಟದ ಹಣಕಾಸಿನ ನೆರವು ನೀಡಿದ್ದಾರೆ” ಎಂದು ಆತ ಕೋರ್ಟ್ಗೆ ತಿಳಿಸಿದ್ದಾನೆ.
ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖ!
ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರೂ ತಳುಕು ಹಾಕಿಕೊಂಡಿದೆ. “ಸಂಚಿನ ಭಾಗವಾಗಿ ನನ್ನನ್ನು ಕೇರಳದ ರೆಸಾರ್ಟ್ವೊಂದಕ್ಕೆ ಕರೆದೊಯ್ದಾಗ, ಗಿರೀಶ್ ಮಟ್ಟಣ್ಣವರ್ ಅವರು ನಟ ಪ್ರಕಾಶ್ ರಾಜ್ ಅವರಿಗೆ ಫೋನ್ ಮಾಡಿ ನನ್ನ ಕೈಗೆ ನೀಡಿದ್ದರು. ತಮಿಳಿನಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಮಟ್ಟಣ್ಣವರ್ ಸೂಚಿಸಿದಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡುವಂತೆ ತಿಳಿಸಿದ್ದರು” ಎಂದು ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾನೆ.
ಸುಳ್ಳು ಹೇಳಲ್ಲ ಎಂದಾಗ ಚಾಕು ಅಟ್ಯಾಕ್!
“ಧರ್ಮಸ್ಥಳದ ಪರಮ ಪೂಜ್ಯರ ವಿರುದ್ಧ ಇಷ್ಟೊಂದು ದೊಡ್ಡ ಸುಳ್ಳು ಹೇಳಲು ನನ್ನ ಆತ್ಮಸಾಕ್ಷಿ ಒಪ್ಪದೇ ಇದ್ದಾಗ, ಮಹೇಶ್ ಶೆಟ್ಟಿ ತಿಮರೋಡಿ ಉಜಿರೆಯಲ್ಲಿರುವ ತನ್ನ ನಿವಾಸದಲ್ಲಿ ನನ್ನನ್ನು ಕೂಡಿಹಾಕಿ, ಚಾಕುವಿನಿಂದ ಕೊಲೆ ಮಾಡಲು ಬಂದಿದ್ದ. ಇದರಿಂದ ಬೇಸತ್ತು ತಾನು ಆತ್ಮಹತ್ಯೆಗೂ ಯತ್ನಿಸಿದ್ದೆ” ಎಂದು ಚಿನ್ನಯ್ಯ ತನ್ನ ಅಳಲು ತೋಡಿಕೊಂಡಿದ್ದಾನೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂಡಿ, ಜಯಂತ್, ವಿಠಲ್ ಗೌಡ ಸೇರಿದಂತೆ ಹಲವರು ತನ್ನನ್ನು ದಾಳವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾನೆ.
ನನ್ನೊಬ್ಬನನ್ನೇ ಜೈಲಿಗಟ್ಟಿದ್ದು ಯಾಕೆ? ಹೈಕೋರ್ಟ್ ಮೆಟ್ಟಿಲೇರಲು ಕಾರಣ:
ಧರ್ಮಸ್ಥಳ ವ್ಯಾಪ್ತಿಯಲ್ಲಿ ಅಕ್ರಮ ಶವಗಳನ್ನು ಹೂಳಲಾಗಿದೆ ಎಂಬ ಚಿನ್ನಯ್ಯನ ದೂರಿನ ಮೇರೆಗೆ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸ್ಥಳದಲ್ಲೂ ಅವಶೇಷ ಸಿಗದೇ ಇದ್ದಾಗ ಪೊಲೀಸರು ಸುಳ್ಳು ದೂರು ನೀಡಿದ (Perjury) ಆರೋಪದಡಿ ಸ್ವತಃ ಚಿನ್ನಯ್ಯನನ್ನೇ ಬಂಧಿಸಿದ್ದರು. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಿರುಗಿಬಿದ್ದಿರುವ ಚಿನ್ನಯ್ಯ, “ನನ್ನಿಂದ ಸುಳ್ಳು ಹೇಳಿಸಿದ ಅಸಲಿ ಸಂಚುಗಾರರ ವಿರುದ್ಧ 2025ರ ಡಿಸೆಂಬರ್ನಲ್ಲೇ ಎಸ್ಐಟಿಗೆ ಎಫ್ಐಆರ್ ಸಂಖ್ಯೆ 39/2025 ರ ಅಡಿಯಲ್ಲಿ ಎಲ್ಲಾ ವಿವರ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನೊಬ್ಬನನ್ನೇ ಯಾಕೆ ಬಲಿಪಶು ಮಾಡಲಾಗಿದೆ?” ಎಂದು ಪ್ರಶ್ನಿಸಿ ಹೈಕೋರ್ಟ್ ಕದ ತಟ್ಟಿದ್ದಾನೆ. ಸದ್ಯ ಹೈಕೋರ್ಟ್ ನೋಟಿಸ್ ನೀಡಿರುವುದರಿಂದ ಜೂನ್ 29ರ ಮುಂದಿನ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ
- Chinnayya mask man petition
- Dharmasthala Burude case
- Dharmasthala mass burial hoax
- Karnataka High Court notice SIT
- Karnataka news live
- Mahesh Shetty Thimarody
- Prakash Raj Dharmasthala plot
- ಎಸ್ಐಟಿ ತನಿಖೆ ಧರ್ಮಸ್ಥಳ
- ಕರ್ನಾಟಕ ಕ್ರೈಮ್ ನ್ಯೂಸ್
- ಕರ್ನಾಟಕ ಹೈಕೋರ್ಟ್ ನೋಟಿಸ್
- ಚಿನ್ನಯ್ಯ ಮಾಸ್ಕ್ ಮ್ಯಾನ್
- ಧರ್ಮಸ್ಥಳ ಬುರುಡೆ ಪ್ರಕರಣ
- ಪ್ರಕಾಶ್ ರಾಜ್ ಧರ್ಮಸ್ಥಳ ಕೇಸ್
- ಮಹೇಶ್ ಶೆಟ್ಟಿ ತಿಮರೋಡಿ
- ವೀರೇಂದ್ರ ಹೆಗ್ಗಡೆ ಷಡ್ಯಂತ್ರ





Leave a comment