Home ಕ್ರೈಂ ನ್ಯೂಸ್ ಜೋಧ್‌ಪುರದಲ್ಲಿ ಭೀಕರ ಘಟನೆ: ನಾಲ್ಕು ವರ್ಷಗಳ ಗ್ಯಾಂಗ್‌ರೇಪ್, ಬ್ಲ್ಯಾಕ್‌ಮೇಲ್ ಗೆ ಬೇಸತ್ತು ಇಬ್ಬರು ಸೋದರಿಯರು ಆತ್ಮಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜೋಧ್‌ಪುರದಲ್ಲಿ ಭೀಕರ ಘಟನೆ: ನಾಲ್ಕು ವರ್ಷಗಳ ಗ್ಯಾಂಗ್‌ರೇಪ್, ಬ್ಲ್ಯಾಕ್‌ಮೇಲ್ ಗೆ ಬೇಸತ್ತು ಇಬ್ಬರು ಸೋದರಿಯರು ಆತ್ಮಹತ್ಯೆ!

Share
ಜೋಧ್‌ಪುರ
Share

ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರ ಗ್ರಾಮಾಂತರ ಪ್ರದೇಶದಲ್ಲಿ ಹೃದಯವಿದ್ರಾವಕ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸತತ ನಾಲ್ಕು ವರ್ಷಗಳ ಕಾಲ ಸಾಮೂಹಿಕ ಅತ್ಯಾಚಾರ ಹಾಗೂ ಬ್ಲ್ಯಾಕ್‌ಮೇಯ್ಲ್‌ಗೆ ಬಲಿಯಾಗಿದ್ದ ಇಬ್ಬರು ಸೋದರಿಯರು ನ್ಯಾಯ ಸಿಗದೇ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೊಲೀಸರ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವೇ ಈ ಇಬ್ಬರು ಹೆಣ್ಣುಮಕ್ಕಳ ಸಾವಿಗೆ ಕಾರಣ ಎಂದು ಆರೋಪಿಸಿ ಸ್ಥಳೀಯ ರಜಪೂತ ಸಮುದಾಯ ಮತ್ತು ಸಂತ್ರಸ್ತರ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಏನಿದು ಘಟನೆ?

ಸ್ಥಳೀಯ ಇ-ಮಿತ್ರ (e-Mitra) ಸೇವಾ ಕೇಂದ್ರದ ಆಪರೇಟರ್ ಆಗಿದ್ದ ಮಹಿಪಾಲ್ ಎಂಬಾತ ಹಿರಿಯ ಸಹೋದರಿಯ ಆಕ್ಷೇಪಾರ್ಹ ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದನು. ಕಳೆದ ಮಾರ್ಚ್ ತಿಂಗಳಲ್ಲಿ ಈ ವೀಡಿಯೊಗಳನ್ನು ತೋರಿಸಿ ಬ್ಲ್ಯಾಕ್‌ಮೇಯ್ಲ್ ಮಾಡುತ್ತಾ, ಮಹಿಪಾಲ್ ಸೇರಿದಂತೆ ಒಟ್ಟು ಎಂಟು ಜನ ಆರೋಪಿಗಳು (ಶಿವರಾಜ್, ಗೋಪಾಲ್, ವಿಜಾರಾಮ್, ದಿನೇಶ್, ಮನೋಜ್ ಮತ್ತು ಪುಖ್‌ರಾಜ್) ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ ಬ್ಲ್ಯಾಕ್‌ಮೇಯ್ಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನೂ ವಸೂಲಿ ಮಾಡಿದ್ದರು ಎನ್ನಲಾಗಿದೆ. ಈ ನರಕಯಾತನೆ ತಾಳಲಾರದೆ ಹಿರಿಯ ಸಹೋದರಿ ಮಾರ್ಚ್ 20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಮುಂದುವರಿದ ನರಕಯಾತನೆ:

ಹಿರಿಯ ಸಹೋದರಿಯ ಸಾವಿನ ನಂತರ, ಆರೋಪಿಗಳ ಕ್ರೌರ್ಯ ಕಿರಿಯ ಸಹೋದರಿಯ ಕಡೆಗೆ ತಿರುಗಿದೆ. ಮೃತಪಟ್ಟ ಸೋದರಿಯ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ಆರೋಪಿಗಳು ಕಿರಿಯ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಏಪ್ರಿಲ್ 11 ರಂದು ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ (FIR) ದಾಖಲಿಸಿದ್ದರೂ, ಪೊಲೀಸರು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. “ನನಗೆ ನ್ಯಾಯ ಸಿಗದಿದ್ದರೆ ನಾನು ಪ್ರಾಣ ಬಿಡುತ್ತೇನೆ” ಎಂದು ಯುವತಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ.

ನ್ಯಾಯಕ್ಕಾಗಿ ಟ್ಯಾಂಕ್ ಹತ್ತಿ ಪ್ರಾಣ ಬಿಟ್ಟ ಯುವತಿ:

ಪೊಲೀಸರ ನಿರಕ್ಷ್ಯ ಹಾಗೂ ಆರೋಪಿಗಳ ನಿರಂತರ ಬೆದರಿಕೆಯಿಂದ ಬೇಸತ್ತ ಕಿರಿಯ ಸಹೋದರಿ, ಶುಕ್ರವಾರದಂದು ನ್ಯಾಯಕ್ಕಾಗಿ ಆಗ್ರಹಿಸಿ ನೀರಿನ ಟ್ಯಾಂಕ್ ಏರಿ ಪ್ರತಿಭಟನೆ ನಡೆಸಿದ್ದಾಳೆ. ಬಳಿಕ ಅಲ್ಲಿಯೇ ವಿಷ ಸೇವಿಸಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಸಾರ್ವಜನಿಕ ಆಕ್ರೋಶ ಮತ್ತು ತನಿಖೆ:

ಇಬ್ಬರು ಸೋದರಿಯರ ಆತ್ಮಹತ್ಯೆಯಿಂದಾಗಿ ಇಡೀ ಜೋಧ್‌ಪುರ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರಜಪೂತ ಸಮುದಾಯದ ನಾಯಕ ಹನುಮಾನ್ ಸಿಂಗ್ ಖಾಂಗ್ಟಾ ನೇತೃತ್ವದಲ್ಲಿ ಎಂಡಿಎಂ ಆಸ್ಪತ್ರೆಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ. ಸದ್ಯ ಸಾರ್ವಜನಿಕರ ಒತ್ತಡಕ್ಕೆ ಮಣಿದಿರುವ ಪೊಲೀಸ್ ಇಲಾಖೆ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ (Departmental Inquiry) ನಡೆಸುವುದಾಗಿ ಮತ್ತು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ಭರವಸೆ ನೀಡಿದೆ.

Share

Leave a comment

Leave a Reply

Your email address will not be published. Required fields are marked *