ದಾವಣಗೆರೆ: ಜಿಲ್ಲೆಯ ವಿವಿಧೆಡೆ ಇಸ್ಫೀಟ್ ಜೂಜಾಟದ ಅಡ್ಡಗಳ ಮೇಲೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಮೂರು ಪ್ರತ್ಯೇಕ ಕಡೆಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ಬರೋಬ್ಬರಿ 10.63 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡು, 26 ಮಂದಿ ಜೂಜುಕೋರರನ್ನು ಕಂಬಿ ಹಿಂದೆ ತಳ್ಳಿದ್ದಾರೆ.
ವಿದ್ಯಾನಗರ ಲಾಡ್ಜ್ ಮೇಲೆ ಹಠಾತ್ ದಾಳಿ:
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆ ಸಮೀಪದ ಲಾಡ್ಜ್ ಒಂದರ ಕೊಠಡಿಯಲ್ಲಿ ಇಸ್ಫೀಟ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಎ.ಎನ್.ಟಿ.ಎಫ್ (ANTF) ತಂಡ ದಾಳಿ ನಡೆಸಿದೆ. ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಹಾಗೂ ಡಿವೈಎಸ್ಪಿ ಶರಣಬಸವೇಶ್ವರ ಬಿ. ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ 11 ಜನರನ್ನು ಬಂಧಿಸಲಾಗಿದ್ದು, ಬರೋಬ್ಬರಿ 10,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ನಿರೀಕ್ಷಕ ಕೆ.ಟಿ.ಅಣ್ಣಯ್ಯ, ಪಿಎಸ್ಐ ಸಾಗರ್ ಅತ್ತಾರ್ವಾಲ ಹಾಗೂ ತಂಡವನ್ನು ಎಸ್ಪಿ ಪ್ರಶಂಸಿಸಿದ್ದಾರೆ.
ರಸ್ತೆ ಬದಿಯ ಅಡ್ಡೆಗಳಿಗೂ ಬಿತ್ತು ಪೆಟ್ಟು:
ಇನ್ನೊಂದೆಡೆ, ಬಿಳಿಚೋಡು ಠಾಣೆ ವ್ಯಾಪ್ತಿಯ ಗುತ್ತಿದುರ್ಗ-ಚಿಕ್ಕಅರಕೆರೆ ಹೊಸೂರು ರಸ್ತೆ ಬದಿಯಲ್ಲಿ ಜೂಜಾಡುತ್ತಿದ್ದ 8 ಜನರನ್ನು ಬಂಧಿಸಿ 9,150 ರೂ. ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ, ಮಾಯಕೊಂಡ ಠಾಣೆ ವ್ಯಾಪ್ತಿಯ ನಲ್ಕುಂದ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಜೂಜಾಡುತ್ತಿದ್ದ 7 ಜನರನ್ನು ಪಿಎಸ್ಐ ಅಜ್ಜಪ್ಪ ನೇತೃತ್ವದ ತಂಡ ಬಂಧಿಸಿ, 4,600 ರೂ. ನಗದನ್ನು ಜಪ್ತಿ ಮಾಡಿದೆ. ಮೂರೂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.





Leave a comment