SUDDIKSHANA KANNADA NEWS/ DAVANAGERE/ DATE:16-10-2024
ದಾವಣಗೆರೆ: ಯುಬಿಡಿಟಿ ಉಳಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ಪ್ರತಿಭಟನೆ ವೇಳೆ ಹಲವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಇಂದು ಯುಬಿಡಿಟಿ ಉಳಿಸಿ, ಪೇಮೆಂಟ್ ಸೀಟ್ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಎಐಡಿಎಸ್ಒ, ಯುಬಿಡಿಟಿ ವಿದ್ಯಾರ್ಥಿಗಳ ಹೋರಾಟ ಸಮಿತಿಯು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ದಾವಣಗೆರೆ ಬಂದ್ ಗೆ
ಕರೆ ಕೊಡಲಾಗಿತ್ತು. ಇದರ ಭಾಗವಾಗಿ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಶಶಿಕಲಾ, ಐಎಡಿಎಸ್ ಒ ದಾವಣಗೆರೆ ಜಿಲ್ಲಾ
ಕಾರ್ಯದರ್ಶಿ ಸುಮನ್, ಹಾಗೂ ಹಲವು ರಾಜ್ಯ ನಾಯಕರನ್ನೊಳಗೊಂಡಂತೆ ಯುಬಿಡಿಟಿ ವಿದ್ಯಾರ್ಥಿ ಹೋರಾಟ ಸಮಿತಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ರಾಜ್ಯ ಸರಕಾರದ ಈ ನಡೆ ಅತ್ಯಂತ ಖಂಡನೀಯ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಬಡ, ಮಧ್ಯಮ ವರ್ಗದ ಜನರ ಮಕ್ಕಳಿಗಾಗಿ ಇರುವ ರಾಜ್ಯದ ಏಕೈಕ ಸರ್ಕಾರಿ ಇಂಜಿನಿಯರಿಂಗ್
ಕಾಲೇಜು ಖಾಸಗೀಕರಣಗೊಳಿಸಲು ಹೊರಟಿದೆ. ಇದರ ವಿರುದ್ಧ ಹೋರಾಟ ನಡೆಸಲು ಮುಂದಾದರೆ ಪ್ರತಿಭಟನೆ ನಡೆಸುವವರ ಹಕ್ಕು ಕಿತ್ತುಕೊಳ್ಳುವ ಸರ್ಕಾರದ ನಡೆಗೆ ನಮ್ಮ ವಿರೋಧ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ಸರಕಾರವೇ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡುತ್ತದೆ. ಇನ್ನೊಂದೆಡೆ ಅದನ್ನು ವಿರೋಧಿಸಿದ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತದೆ. ಇದು ರಾಜ್ಯ ಸರಕಾರ ವಿದ್ಯಾರ್ಥಿಗಳ ಹೋರಾಟದ ಹಕ್ಕಿನ ಮೇಲೆ ಮಾಡುತ್ತಿರುವ ಪ್ರಹಾರವಾಗಿದೆ. ಈ ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದುಎಐಡಿಎಸ್ ಒ ರಾಜ್ಯ ಸಮಿತಿಯು ಆಗ್ರಹಿಸಿದೆ.