ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಕಟೌಟ್ ಒಂದರ ಹಿನ್ನೆಲೆಯಲ್ಲಿ ದೇಶವಿರೋಧಿ ಹಾಗೂ ಮುಜಾಹಿದ್ದೀನ್ ಬೆಂಬಲಿತ ಹಾಡುಗಳನ್ನು ಬಳಸಿ ಪ್ರಚೋದನೆ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯು ಕೇವಲ ಸ್ಥಳೀಯ ಪುಂಡಾಟಿಕೆಯಲ್ಲ, ಬದಲಿಗೆ ರಾಜ್ಯದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಸ್ಪಷ್ಟ ಹುನ್ನಾರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬಳಕೆಯಾಗಿರುವ ಪ್ರಚೋದನಾಕಾರಿ ಸಾಲುಗಳನ್ನು ಉಲ್ಲೇಖಿಸಿದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ. “ಇಂತಹ ಪ್ರಚೋದನಾಕಾರಿ ನಡೆಗಳನ್ನು ಸರ್ಕಾರ ದ್ವೇಷ ಭಾಷಣವೆಂದು ಪರಿಗಣಿಸುವುದಿಲ್ಲವೇ?” ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಓಲೈಕೆ ರಾಜಕಾರಣವೇ ಇಂತಹ ದೇಶದ್ರೋಹಿ ಶಕ್ತಿಗಳಿಗೆ ಧೈರ್ಯ ನೀಡುತ್ತಿದೆ ಎಂದು ಆರೋಪಿಸಿದ ಬಿಜೆಪಿ ರಾಜ್ಯಾಧ್ಯಕ್ಷರು, ಕೇವಲ ಹೆಸರಿಗೆ ಎಫ್ಐಆರ್ ದಾಖಲಿಸುವುದನ್ನು ಬಿಟ್ಟು ಘಟನೆಯ ಹಿಂದೆ ಇರುವ ಹಾಗೂ ವಿಡಿಯೋ ಹರಡಿದ ಪ್ರತಿಯೊಬ್ಬರನ್ನೂ ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕಾನೂನಿಗೆ ಬೆಲೆ ಇದ್ದರೆ ಹಾಗೂ ಸರ್ಕಾರಕ್ಕೆ ಗಂಭೀರತೆ ಇದ್ದರೆ ಇಂತಹ ದೇಶದ್ರೋಹಿಗಳನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೇಶದ್ರೋಹಿಗಳ ಸವಾಲು! ಅಲ್ಲಿ ಉದ್ದೇಶಪೂರ್ವಕವಾಗಿ ಬಳಸಿರುವ ಹಾಡುಗಳ ಸಾಲುಗಳು ಏನನ್ನು ಹೇಳುತ್ತಿದೆ ಮಾನ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರೇ? ಆ ಹಿಂದಿ ಸಾಲುಗಳನ್ನು ಕನ್ನಡದಲ್ಲಿ ಅನುವಾದಿಸಿದರೆ, “ಬೆರಳು ತೋರಿಸಬೇಡಿ, ತೋಳು ಮುರಿಯುತ್ತೇವೆ, ತಪ್ಪಿಯೂ ಸವಾಲೆಸೆದರೆ, ಹೂತು ಹಾಕಿಬಿಡುತ್ತೇವೆ, ನಾವು ಪಾಕಿಸ್ತಾನಿ ಯೋಧರು, ಈ ಮಣ್ಣಿನ ರಕ್ಷಕರು, ಜೀವದ ಹಂಗು ತೊರೆದು, ನಿಮ್ಮನ್ನು ತುಂಡರಿಸಿ ಹಾಕಿಬಿಡುತ್ತೇವೆ” – ಇದಕ್ಕೂ ನಿಮ್ಮ ರಕ್ತ ಕುದಿಯುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ರಾಜ್ಯದಲ್ಲಿ ಕಾನೂನಿಗೆ ಏನಾದರೂ ಅರ್ಥ ಇದೆ ಅಂದ್ರೆ, ಈ ರಾಜ್ಯದಲ್ಲಿ ಗೃಹ ಸಚಿವರು ಅನ್ನೋರು ಯಾರಾದರೂ ಬದುಕಿದ್ರೆ, ಈ ವಿಚಾರವನ್ನ, ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು, ಯಾರು ಇಂತಹ ದೇಶದ್ರೋಹದ ಕೆಲಸ ಮಾಡಿದ್ದಾರೆ ಅವರ ಹೆಡಮುರಿ ಕಟ್ಟುವಂತಹ ಕೆಲಸ ಆಗಬೇಕು, ಅವರನ್ನು ಒದ್ದು ಒಳಗೆ ಹಾಕಬೇಕು. ಈ ರೀತಿ ಘಟನೆಗಳು ನಡೆದಾಗ ನೀವು ಕೈಕಟ್ಟಿಕೊಂಡು ಕೂರುವ ಬದಲು ನಿಮ್ಮ ತಾಕತ್ತೇನು, ನಿಮ್ಮ ಇಲಾಖೆಯ ತಾಕತ್ತೇನು ಅನ್ನೋದನ್ನ ದೇಶದ್ರೋಹಿಗಳಿಗೆ ತೋರಿಸಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಜನರಿಗೆ ನಿಮ್ಮ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಶ್ವಾಸ ಬರಬೇಕು ಅನ್ನುವ ಆಸೆ ಇದ್ದಾರೆ, ಇಂತಹ ದೇಶದ್ರೋಹಿಗಳನ್ನ, ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳೋವವರನ್ನು ಒದ್ದು ಒಳಗೆ ಹಾಕಿ! ಯಾವುದೇ ಕಾರಣಕ್ಕೂ ಇವರುಗಳು ಹೊರಗಡೆ ಬರದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ರಾಜ್ಯದಲ್ಲಿ ಇನ್ನೊಮ್ಮೆ ಯಾರೂ ಕೂಡ ಮತ್ತೆ ಎಲ್ಲೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎನ್ನುವ ರೀತಿ ಬಲವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ರಾಜ್ಯಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ.
- Anti national song controversy
- BJP vs Congress
- BY Vijayendra
- Chikkamagaluru cutout controversy
- Chikkamagaluru News
- DK Shivakumar
- Karnataka News
- Karnataka Politics
- Priyank Kharge
- ಕರ್ನಾಟಕ ಪೊಲೀಸ್
- ಕರ್ನಾಟಕ ರಾಜಕೀಯ
- ಕೋಮು ಸೌಹಾರ್ದತೆ
- ಚಿಕ್ಕಮಗಳೂರು ಕಟೌಟ್ ವಿವಾದ
- ಡಿ. ಕೆ. ಶಿವಕುಮಾರ್
- ದೇಶದ್ರೋಹಿ ಹಾಡು ವಿವಾದ
- ಪ್ರಿಯಾಂಕ್ ಖರ್ಗೆ
- ಬಿ. ವೈ. ವಿಜಯೇಂದ್ರ
- ಬಿಜೆಪಿ ಆಕ್ರೋಶ





Leave a comment