ಬೆಂಗಳೂರು: ಗೌರಿ ಗಣೇಶ ಹಬ್ಬ ಹಿಂದೂಗಳು ಆಚರಿಸುವ ಸಾಂಪ್ರದಾಯಿಕ ಆಚರಣೆ ಅಷ್ಟೇ ಅಲ್ಲ, ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರಭಕ್ತಿಯೊಂದಿಗೆ ಬೆಸೆದುಕೊಂಡಿರುವ ಸಡಗರದ ಹಬ್ಬವಾಗಿದೆ. ಯುವಶಕ್ತಿಯನ್ನು ಒಂದುಗೂಡಿಸುವ ರಾಷ್ಟ್ರದ ಏಕತೆಗೆ ಪ್ರೇರಣೆ ನೀಡಿರುವ ಸ್ವಾಂತಂತ್ರ್ಯಾ ಪೂರ್ವದಿಂದಲೂ ಸಾಂಪ್ರದಾಯುಕವಾಗಿ ಆಚರಿಸಿಕೊಂಡುಬಂದಿರುವ ಈ ಹಬ್ಬದ ಆಚರಣೆಗೆ,ಸಡಗರಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೆಂಗಣ್ಣು ಬೀರಿಕೊಂಡು ಬರುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿ ನರಸೀಪುರದ ಪೊಲೀಸ್ ಇನ್ಸ್ಪೆಕ್ಟರ್ ಗಣಪತಿ ಆಚರಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ನೀಡಿರುವ ಎಚ್ಚರಿಕೆ ಉದ್ಧಟತನದ ಪರಮಾವಧಿಯಾಗಿದೆ. ಅತಿರೇಕದ ಮಾತುಗಳು ಧಾರ್ಮಿಕ ಭಾವನೆಯನ್ನು ಹತ್ತಿಕ್ಕುವ ಸರ್ವಾಧಿಕಾರಿತನವನ್ನು ಪ್ರದರ್ಶಿಸಿದೆ. ಈ ಕೂಡಲೇ ಈ ಅಧಿಕಾರಿಯ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದ್ದಾರೆ.
. ಟಿ.ನರಸೀಪುರ ಸೇರಿದಂತೆ ರಾಜ್ಯದ ಯಾವ ಮೂಲೆಯಲ್ಲೂ ಗಣೇಶೋತ್ಸವ ಆಚರಣೆಗೆ ಪೊಲೀಸ್ ಬಲ ಉಪಯೋಗಿಸಿ ಅಡ್ಡಿ-ಅಡಚಣೆ ಉಂಟು ಮಾಡುವುದು, ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಮಸೀದಿಗಳ ಮುಂದೆ ಮೆರವಣಿಗೆ ತೆರಳಬಾರದು ಎಂಬ ಕಠಿಣ ನಿಯಮ ಅಳವಡಿಸುವುದು ಸಮಾಜದ ಸಾಮರಸ್ಯವನ್ನು ಸರ್ಕಾರವೇ ಕದಡುವ ಅವಿವೇಕದ ಕ್ರಮವಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಕಾರ್ಯಕರ್ತರು ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗದೇ ಸಾಂಪ್ರದಾಯಿಕವಾಗಿ ನಿರ್ಭಿಡೆಯಿಂದ ಹಬ್ಬ ಆಚರಿಸಲಿ, ಪೊಲೀಸರ ಮೂಲಕ ಹಬ್ಬದ ಆಚರಣೆಯ ಮೇಲೆ ದಬ್ಬಾಳಿಕೆ ನಡೆದರೆ ಭಾರತೀಯ ಜನತಾ ಪಾರ್ಟಿ ಅದನ್ನು ಖಂಡಿಸುತ್ತದೆ ಹಾಗೂ ಪ್ರತಿಭಟಿಸುತ್ತದೆ ಎಂದು ಎಚ್ಚರಿಸುವೆ ಎಂದಿದ್ದಾರೆ.





Leave a comment