ಮುಂಬೈ: ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಕೈಗೊಂಡಿದ್ದ ಏಕಪಕ್ಷೀಯ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆ ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ (Cadila Pharmaceuticals Ltd) ನೀಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, “ಮೊದಲು ಗುಂಡು ಹಾರಿಸಿ, ನಂತರ ಪ್ರಶ್ನೆ ಕೇಳುವುದು ವೈಲ್ಡ್ ವೆಸ್ಟ್ ನಿಯಮವೇ ಹೊರತು ಕಾನೂನಿನ ವ್ಯವಸ್ಥೆಯಲ್ಲ” ಎಂದು ಖಾರವಾಗಿ ಹೇಳಿದೆ.
ಕಾರ್ಯಾಚೇಷ್ಟೆ ನಡೆಸುತ್ತಿದ್ದ ಮಹಾರಾಷ್ಟ್ರ ಎಫ್ಡಿಎ ಕಮಿಷನರ್ ತುಕಾರಾಂ ಮುಂಧೆ ಅವರ ನೇತೃತ್ವದ ತಂಡವು ಕ್ಯಾಡಿಲಾ ಸಂಸ್ಥೆಯ ಕೆಲವು ಪ್ರಮುಖ ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಿ, ದಾಸ್ತಾನನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದನ್ನು ಪ್ರಶ್ನಿಸಿ ಕ್ಯಾಡಿಲಾ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ನಿಕಟಪೂರ್ವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆರ್.ವಿ. ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ಪೀಠವು, ಎಫ್ಡಿಎಗೆ ನಿಯಂತ್ರಣಾಧಿಕಾರ ಇದೆ ಎಂಬುದನ್ನು ಒಪ್ಪಿಕೊಂಡರೂ, ಅದನ್ನು ಬಳಸಿದ ರೀತಿಯನ್ನು ತೀವ್ರವಾಗಿ ಪ್ರಶ್ನಿಸಿತು. “ನಿಮ್ಮ ಬಳಿ ಖಡ್ಗ ಬಳಸುವ ಅಧಿಕಾರವಿದೆ, ಆದರೆ ಅದನ್ನು ಸೊಳ್ಳೆ ಕೊಲ್ಲಲು ಬಳಸುತ್ತಿದ್ದೀರಿ” ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿತು. ಅಲ್ಲದೆ, ನೋಟಿಸ್ ನೀಡದೇ 32 ದಿನಗಳ ಕಾಲ ರೋಗಿಗಳಿಗೆ ಅಗತ್ಯ ಔಷಧಿ ಸಿಗದಂತೆ ಮಾಡಿದ್ದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿತು.
ಹೈಕೋರ್ಟ್ನ ತೀವ್ರ ಆಕ್ಷೇಪಣೆಯ ನಂತರ, ಮಹಾರಾಷ್ಟ್ರ ಎಫ್ಡಿಎ ತನ್ನ ಸ್ಥಗಿತಗೊಳಿಸುವ ಆದೇಶಗಳನ್ನು (Stop-sale orders) ಹಿಂಪಡೆಯಲು ಒಪ್ಪಿಕೊಂಡಿದೆ. ಮುಂದೆ ಸೂಕ್ತ ನೋಟಿಸ್ ನೀಡಿ, ಕಂಪನಿಯ ವಿವರಣೆ ಆಲಿಸಿದ ನಂತರವೇ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಕೋರ್ಟ್ಗೆ ಭರವಸೆ ನೀಡಿದೆ.





Leave a comment