ಬೆಂಗಳೂರು: ದೇಶದಲ್ಲಿ ಸೌಹಾರ್ದತೆ, ಭಾವೈಕ್ಯತೆ ಮೂಡಿಸಲು 10 ಸಾವಿರ ಕಿ.ಮೀ ಪಾದಯಾತ್ರೆ ಮಾಡಿ ಇತಿಹಾಸ ನಿರ್ಮಿಸಿದರು. ಬಿಜೆಪಿಯವರು ರಾಹುಲ್ ಗಾಂಧಿ ಅವರ ವಿರುದ್ಧ ಇನ್ನಿಲ್ಲದ ಅಪಪ್ರಚಾರ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಜತೆ 5 ಕಿ.ಮೀ ನಡೆಯಲಿ ನೋಡೋಣ. ಅವರಿಗೆ ಆ ಶಕ್ತಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಐದನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಏಕತೆ, ಶಾಂತಿ ಕಾಪಾಡಲು ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಬೇಕೆಂದು ತೀರ್ಮಾನಿಸಲಾಯಿತು. ಇದಕ್ಕಾಗಿ ಅಖಿಲ ಭಾರತ ಮಟ್ಟದಲ್ಲು ಸಮಿತಿ ಮಾಡಿ, ನನ್ನನ್ನು ಕರ್ನಾಟಕದ ಸಮನ್ವಕರನ್ನಾಗಿ ಮಾಡಿದರು. ಆಗ ರಾಹುಲ್ ಗಾಂಧಿ ಅವರು ದಿನಕ್ಕೆ 40 ಕಿ.ಮೀ ನಡೆಯಬೇಕು ಎಂದರು. ಅದಕ್ಕೆ ನಾನು ನೀವು ಬೇಕಾದರೆ 80 ಕಿ.ಮೀ ನಡೆಯುತ್ತೀರಿ. ನಾವು ಕರ್ನಾಟಕದಲ್ಲಿ ಮೇಕೆದಾಟು ಯಾತ್ರೆ ಮಾಡಿದ್ದೇವೆ. 20 ಕಿ.ಮೀ ನಡೆಯುವುದು ಕಷ್ಟ ಎಂದೆ. ನಂತರ 30 ಕಿ.ಮೀ.ಗೆ ಇಳಿಸಿದರು. ಆಗ ದಿಗ್ವಿಜಯ್ ಸಿಂಗ್ ಅವರು ನೀವು ಒಮ್ಮೆ ಪರಿಶೀಸಿ ಎಂದು ಹೇಳಿದಾಗ ರಾಹುಲ್ ಗಾಂಧಿ ಅವರು 20 ಕಿ.ಮೀಗೆ ಇಳಿಸಿದರು ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾತ್ರ ಮಾಡಿಲ್ಲ, ಮಣಿಪುರದ ಇಂಘಾಲದಿಂದ ಮುಂಬೈವರೆಗೂ ಒಟ್ಟು 10 ಸಾವಿರ ಕಿ.ಮೀ ನಡೆದರು. ಮಹಾತ್ಮ ಗಾಂಧಿ ಅವರ ದಂಡಿ ಯಾತ್ರೆ ಮಾಡಿದರು. ದಂಡಿಯಾತ್ರೆ 243 ಕಿ.ಮೀ ನಡೆಸಿದರು. ಬ್ರಿಟೀಷರು ಉಪ್ಪಿನ ಮೇಲೆ ತೆರಿಗೆ ಹಾಕಿದಾಗ ಅದನ್ನು ಖಂಡಿಸಿ ಈ ಯಾತ್ರೆ ಮಾಡಿದರು. ಆಗ ಬ್ರಿಟೀಷರಿಗೆ ನಡುಕ ಹುಟ್ಟಿತ್ತು. ಅದೇ ರೀತಿ ರಾಹುಲ್ ಗಾಂಧಿ ಅವರು ನಡೆಸಿದ ಯಾತ್ರೆ ಬಿಜೆಪಿ ಪಕ್ಷಕ್ಕೆ ನಡುಕ ಹುಟ್ಟಿಸುವಂತಾಯಿತು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿಯಾಗಲು ಪಾದಯಾತ್ರೆ ಮಾಡಲಿಲ್ಲ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡುವಾಗ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು, ಸಫಾಯಿ ಕರ್ಮಚಾರಿ, ದೇವದಾಸಿಯರ ಜೊತೆ ಸಂವಾದ ಮಾಡಿದರು. ದೇವದಾಸಿಯವರ ಜೊತೆ ಮಾತನಾಡುವಾಗ ಸೆಂಥಿಲ್ ಅವರಿಗೆ ಭಾಷಾಂತರ ಮಾಡಲು ಹೇಳಿದರು. ಆಗ ಅಲ್ಲಿದ್ದ ಹಿರಿಯ ಮಹಿಳೆ ದೇವದಾಸಿ ಪದ್ಧತಿ ಹಿಂದೂ ಸಂಪ್ರದಾಯದಲ್ಲಿರುವ ಅನಿಷ್ಠ ಪದ್ಧತಿ ಎಂದು ಹೇಳಿದರು. ಆಗ ಕೆಲವರು ಮಧ್ಯ ಮಾತನಾಡಿದಾಗ ರಾಹುಲ್ ಗಾಂಧಿ ಅವರು ತಡೆದು, ನಾನು ಆಕೆ ಹೇಳುವುದನ್ನು ಕೇಳಬೇಕು ಎಂದರು. ಆಗ ದೇವದಾಸಿಯ ಪದ್ಧತಿ ಬಗ್ಗೆ ಕೇಳಿದಾಗ, ರಾಹುಲ್ ಗಾಂಧಿ ಬೆವತು ಹೋದರು. ಈ ದೇಶದಲ್ಲಿ ಇಂತಹ ವ್ಯವಸ್ಥೆ ಇದೆಯೇ ಎಂದು ಕೇಳಿದರು ಎಂದರು.
ರಾಹುಲ್ ಗಾಂಧಿ ಅವರ ತಾತ ನೆಹರೂ ಅವರು ಡಿಸ್ಕವರಿ ಆಫ್ ಇಂಡಿಯಾ ಎಂದು ಪುಸ್ತಕ ಬರೆದಿದ್ದರು. ಆದರೆ ರಾಹುಲ್ ಗಾಂಧಿ ಅವರು ಇಡೀ ದೇಶ ಸುತ್ತಿ ಬಡವರ ನೋವು ಅರಿತರು. ಸೋನಿಯಾ ಗಾಂಧಿ ಅವರು ತಮ್ಮ ಮಗನನ್ನು ರಾಜಕಾರಣಕ್ಕೆ ತರುವಾಗ ನಮ್ಮ ಮಗನನ್ನು ರಾಜಕೀಯವೆಂಬ ವಿಷದ ಮುಂದೆ ಇಡತ್ತಿದ್ದೇನೆ ಎಂದು ಹೇಳಿದ್ದರು. ಅವರ ಪ್ರೇರಣೆಯಿಂದ ನಡೆದ ಯಾತ್ರೆಗೆ ನಾವು ಸಹಕಾರ ನೀಡಿದ್ದೇವೆ. ಈ ಯಾತ್ರೆ ತಮಿಳುನಾಡು, ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಯಶಸ್ವಿಯಾಯಿತು ಎಂದು ತಿಳಿಸಿದರು.





Leave a comment