ಬೆಂಗಳೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪಾದಯಾತ್ರೆ ಮಾಡಿ ರಾಜಕಾರಣ ಮಾಡಿ, ಪ್ರಧಾನಿಯಾಗಬೇಕೆಂದು ಅಗತ್ಯವಿಲ್ಲ. ಕರ್ನಾಟಕದಲ್ಲಿ ಹಿಜಾಬ್, ಆಜಾನ್, ಹಲಾಲ್ ಗಲಾಟೆ, ಅಲ್ಪಸಂಖ್ಯಾತರ ಜತೆ ವ್ಯಾಪಾರ ಮಾಡಬೇಡಿ ಎಂದು ಬಿಜೆಪಿ ಕೃಪಾಪೋಷಿತ ಸಂಘಟನೆಗಳು ಕರೆ ಕೊಟ್ಟರು. ಭಾರತ ದೇಶ ಇವರ ಅಪ್ಪನ ಮನೆ ಆಸ್ತಿಯೇ? ಬೇರೆ ಧರ್ಮದವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಹಾಗೂ ಬೆವರು ಹರಿಸಿದ್ದಾರೆ. ಪ್ರತಿಯೊಬ್ಬರಿಗೂ ಇಲ್ಲಿ ಹಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಐದನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ಜೋಡೋ ಯಾತ್ರೆ ಮಾಡಿದ ಹಿಂದಿನ ಉದ್ದೇಶವನ್ನು ನಾವು ತಿಳಿಯಬೇಕು. ದೇಶದಲ್ಲಿ ಜಾತಿ, ಧರ್ಮಗಳ ವೈಷಮ್ಯದಿಂದ ಹತ್ಯೆ, ದಲಿತರ ಮೇಲೆ ಹಲ್ಲೆಯಾಗುತ್ತಿತ್ತು. ದನದ ಮಾಂಸ ಹೊಂದಿದ್ದಾರೆ ಎಂದು ಹಲ್ಲೆ ಮಾಡುತ್ತಿದ್ದರು. ಈ ರೀತಿ ಬಿಜೆಪಿಯವರು ಹಿಂಸೆಯ ವಾತಾವರಣ ಸೃಷ್ಟಿಸಿದಾಗ, ಅವರಿಗೆ ಉತ್ತರ ಕೊಡುವವರು ಯಾರೂ ಇರುವುದಿಲ್ಲ. ದ್ವೇಷದ ಜ್ವಾಲೆ ಅಂತಾ ಬಂದರೆ ಅವರ ಕಣ್ಣಿಗೆ ಯಾರೂ ಕಾಣುವುದಿಲ್ಲ ಎಂದು ಹೇಳಿದರು,
ಗುಜರಾತಿನಲ್ಲಿ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮಗುವಿನ ಮುಂದೆ ತಾಯಿಯನ್ನೇ ಅತ್ಯಾಚಾರ ಮಾಡುತ್ತಾರೆ. ತಾಯಿ ಎದುರು 3 ವರ್ಷದ ಮಗು ಹತ್ಯೆ ಮಾಡುತ್ತಾರೆ. ಆ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಲ್ಲಿ ನಡೆಸಿದಾಗ 11 ಜನರಿಗೆ ಜಿವಾವಧಿ ಶಿಕ್ಷೆ ಆಗುತ್ತದೆ. ನಂತರ ಬಿಜೆಪಿಯವರು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸುತ್ತಾರೆ. ಜೈಲಿಂದ ಹೊರಬಂದ ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕಿ ಸಿಹಿ ಹಂಚುತ್ತಾರೆ. ಸಮಾಜ ಇಷ್ಟು ಕುಸಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಹೈದರಾಬಾದ್ ನಲ್ಲಿ ವೆಮುಲ ಎಂಬ ದಲಿತ ಹುಡುಗ ಸ್ನಾತಕೋತ್ತರ ಪದವಿ ಮಾಡುವಾಗ ಅಸ್ಪೃಷ್ಯತೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆತನ ತಾಯಿಯ ಕಣ್ಣೀರು ಒರೆಸಲು ರಾಹುಲ್ ಗಾಂಧಿ ಹೋಗುತ್ತಾರೆ. ಇಂತಹ ನೂರಾರು ಘಟನೆ ಬಿಜೆಪಿ ಬಂದ ನಂತರ ನಡೆದವು. ಇದರ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ. ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ ಎಂದು ಆತ್ಮಸ್ಥೈರ್ಯ ತುಂಬಿದ್ದು ರಾಹುಲ್ ಗಾಂಧಿ ಮಾತ್ರ ಎಂದು ಬಣ್ಣಿಸಿದ್ದಾರೆ.





Leave a comment