ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಸಾರ್ವಜನಿಕವಾಗಿ ವಿರೋಧ ಪಕ್ಷದವರು ಚಪ್ಪಲಿ ಎಸೆದು ನಡೆಸಿರುವ ಕೃತ್ಯವನ್ನು ಕೆಪಿಸಿಸಿ ನೂತನ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ವಾದದಿಂದ ಎದುರಿಸಲಾಗದವರು, ಪ್ರಜಾಪ್ರಭುತ್ವದ ಭಾಷೆಯಲ್ಲಿ ಉತ್ತರಿಸಲು ಸಾಧ್ಯವಾಗದವರು ಮಾತ್ರ ಇಂತಹ ಹೇಯ ಮತ್ತು ಹೇಡಿತನದ ಕೃತ್ಯಗಳಿಗೆ ಇಳಿಯುತ್ತಾರೆ. ಭಿನ್ನಮತವನ್ನು ಹಿಂಸೆ, ಬೆದರಿಕೆ ಮತ್ತು ಅವಮಾನದಿಂದ ಹತ್ತಿಕ್ಕಲು ಹೊರಟಿರುವ ರಾಜಕೀಯ ಸಂಸ್ಕೃತಿಗೆ ಕರ್ನಾಟಕದಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಂದುವರಿದು, “ಜನರ ತೀರ್ಪಿಗೆ ಗೌರವ ಕೊಡುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ದುಷ್ಕೃತ್ಯಗಳಿಗೆ ಯಾವುದೇ ಸಮರ್ಥನೆ ಇಲ್ಲ. ಶ್ರೀ ಪ್ರದೀಪ್ ಈಶ್ವರ್ ಅವರು ಇಂತಹ ಘಟನೆಗಳಿಂದ ಎದೆಗುಂದಬೇಕಿಲ್ಲ. ಇಡೀ ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ಸತ್ಯ, ಪ್ರಜಾಪ್ರಭುತ್ವ ಮತ್ತು ಜನರ ಪರವಾದ ಧ್ವನಿಯನ್ನು ಇಂತಹ ಕೀಳು ಮಟ್ಟದ ಕೃತ್ಯಗಳಿಂದ ಯಾರೂ ಮೌನಗೊಳಿಸಲು ಸಾಧ್ಯವಿಲ್ಲ” ಎಂದು ಶಾಸಕರಿಗೆ ಧೈರ್ಯ ತುಂಬಿದ್ದಾರೆ.





Leave a comment