ನವದೆಹಲಿ: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಜಂತರ್ ಮಂತರ್ನಲ್ಲಿ ನಡೆಸಿದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗೆ ಬಿಜೆಪಿ ನಾಯಕರ ಮಕ್ಕಳೇ ಬೆಂಬಲ ವ್ಯಕ್ತಪಡಿಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಫತೇಪುರ್ ಸಾದರ್ನ ಮಾಜಿ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಅವರ ಪುತ್ರಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಯಶಸ್ವಿನೀ ರಾಜೇ ಸಿಂಗ್ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ 36 ದಿನಗಳ ಸುದೀರ್ಘ ವಿದ್ಯಾರ್ಥಿ ಚಳವಳಿಯು ದೇಶಾದ್ಯಂತ ಸದ್ದು ಮಾಡಿದ್ದು, ಅಂತಿಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯಶಸ್ವಿನೀ ರಾಜೇ ಸಿಂಗ್, ಅಲ್ ಜಜೀರಾ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೇಂದ್ರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರ ನೇಮಕವನ್ನು “ಒಂದು ಕಹಿ ತಮಾಷೆ” (bleak joke) ಎಂದು ಕರೆದಿದ್ದಾರೆ.
ಪ್ರಧಾನ್ ರಾಜೀನಾಮೆ ಪತ್ರಕ್ಕೆ ಆಕ್ಷೇಪ:
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪತ್ರದ ಭಾಷೆಯನ್ನು ಟೀಕಿಸಿದ ಯಶಸ್ವಿನೀ, “ಅವರು ತಪ್ಪು ಒಪ್ಪಿಕೊಂಡು ಪಶ್ಚಾತ್ತಾಪ ಪಡುವ ಬದಲು, ತಾವು ಯಾವುದೋ ದೊಡ್ಡ ಹುತಾತ್ಮರು ಎಂಬಂತೆ ಪತ್ರ ಬರೆದಿದ್ದಾರೆ. ಪ್ರತಿಭಟನಾಕಾರರನ್ನು ದೇಶವಿರೋಧಿ ಶಕ್ತಿಗಳು ಬಳಸಿಕೊಳ್ಳಬಾರದು ಎಂದು ಹೇಳಿರುವುದು ಅತ್ಯಂತ ಕಿರಿದಾದ ದೃಷ್ಟಿಕೋನ” ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜಕೀಯ ಮತ್ತು ಕುಟುಂಬದಿಂದ ಅಂತರ:
ತಮ್ಮ ತಂದೆಯ ರಾಜಕೀಯ ಮತ್ತು ತಮ್ಮ ಸಿದ್ಧಾಂತಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ ಅವರು, “ನಾನು ಸ್ವತಂತ್ರವಾಗಿ ಜೀವಿಸುತ್ತಿದ್ದೇನೆ, ನನ್ನ ತಂದೆಯೊಂದಿಗೆ ರಾಜಕೀಯ ಚರ್ಚಿಸುವುದಿಲ್ಲ. ಕಳೆದ ಹಲವು ವರ್ಷಗಳಿಂದ ಫತೇಪುರ್ ಸಾದರ್ಗೆ ಭೇಟಿ ನೀಡಿಲ್ಲ. ಆದ್ದರಿಂದ ನಾನು ಯಾವುದೇ ಹಿಂಜರಿಕೆಯಿಲ್ಲದೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ. ಸಾಮಾಜಿಕ ಜಾಲತಾಣ, ಮೀಮ್ಗಳು ಮತ್ತು ಇನ್ಸ್ಟಾಗ್ರಾಮ್ ಮೂಲಕ ಯುವಜನರನ್ನು ಒಗ್ಗೂಡಿಸಿದ ಸಿಜೆಪಿಯ ಶೈಲಿಯನ್ನು ಅವರು ಶ್ಲಾಘಿಸಿದರು.
ಬೆಂಬಲಕ್ಕೆ ನಿಂತ ಇತರ ನಾಯಕರ ಮಕ್ಕಳು:
ಇತ್ತೀಚೆಗಷ್ಟೇ ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಪುತ್ರಿ ಅರ್ಚಿತಾ ಸಚಿನ್ ರಹಾರ್ ಹಾಗೂ ಅಸ್ಸಾಂ ಸಚಿವ ಕೇಶವ್ ಮಹಂತ ಅವರ ಪುತ್ರಿ ದಿಬಿಸಾ ಮಹಂತ ಕೂಡ ಸಿಜೆಪಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದರು.
- Archita Sachin Rahar
- BJP Vikram Singh daughter
- CJP protest
- Dharmendra Pradhan Resignation
- Dibisa Mahanta
- Gen Z protests India
- Jantar Mantar protest
- NEET paper leak
- Pralhad Joshi
- Yashaswinee Raje Singh
- ಅರ್ಚಿತಾ ಸಾರಂಗಿ
- ಜಂತರ್ ಮಂತರ್ ಚಳವಳಿ
- ದಿಬಿಸಾ ಮಹಂತ
- ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ನೀಟ್ ಪ್ರಶ್ನೆಪತ್ರಿಕೆ ಸೋರಿಕೆ
- ಪ್ರಲ್ಹಾದ್ ಜೋಶಿ
- ಬಿಜೆಪಿ ವಿಕ್ರಮ್ ಸಿಂಗ್
- ಯಶಸ್ವಿನೀ ರಾಜೇ ಸಿಂಗ್
- ಸಿಜೆಪಿ ಪ್ರತಿಭಟನೆ





Leave a comment