ಹಾಸನ: ಬೆಂಗಳೂರು ಮೂಲದ 23 ವರ್ಷದ ವರ್ಷ ಎಂಬ ಯುವತಿ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಕೂಡಿಗೆ ಸಮೀಪದ ಶ್ರೀದೇವಿ ಲಾಡ್ಜ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಸೆಪ್ಟೆಂಬರ್ 11 ರಂದು ಈ ಯುವತಿ ಇಬ್ಬರು ಯುವಕರೊಂದಿಗೆ ಲಾಡ್ಜ್ಗೆ ತಂಗಲು ಬಂದಿದ್ದರು. ತದನಂತರ ಲಾಡ್ಜ್ನಲ್ಲಿಯೇ ಯುವತಿ ಮೃತಪಟ್ಟಿರುವುದು ಹಲವು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಸಾವಿಗೆ ನಿಖರ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಚಾಕ್ ಲೇಟ್ ಸೇವಿಸಿದ ಬಳಿಕ ಕುಸಿದು ಬಿದ್ದಿದ್ದು, ಅಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮಾಲತೀಶ್ ಹಾಗೂ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾಡ್ಜ್ನಲ್ಲಿನ ರಿಜಿಸ್ಟರ್ ಮಾಹಿತಿ, ಸಿಸಿಟಿವಿ ದೃಶ್ಯಾವಳಿ ಹಾಗೂ ಘಟನಾಕ್ರಮಕ್ಕೆ ಸಂಬಂಧಿಸಿದ ವಿವಿಧ ಸಾಕ್ಷ್ಯಾಧಾರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಯುವತಿಯೊಂದಿಗೆ ಬಂದಿದ್ದರೆನ್ನಲಾದ ಇಬ್ಬರು ಯುವಕರು ಯಾರು, ಪ್ರಸ್ತುತ ಅವರು ಎಲ್ಲಿದ್ದಾರೆ ಮತ್ತು ಈ ಘಟನೆಯಲ್ಲಿ ಅವರ ಪಾತ್ರವೇನು ಎಂಬುದರ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮೃತದೇಹವನ್ನು ಸಕಲೇಶಪುರದ ಕ್ರಾಫರ್ಡ್ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.





Leave a comment