SUDDIKSHANA KANNADA NEWS/ DAVANAGERE/ DATE:24-03-2024
ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ಗೌರವಿಸಿ, ಹೊದಿಸಿದ್ದ ಬೆಲೆಕಟ್ಟಲಾಗದ ಶಾಲನ್ನು ನಾನು ಬಸ್ಸಿನೊಳಗೆ ಸಿಕ್ಕ ಒಬ್ಬ ಜಾನಪದ ಪ್ರತಿಭಾನ್ವಿತೆಗೆ ಹೊದಿಸಿ, ಗೌರವಿಸಿದ ಆಕಸ್ಮಿಕ ಜೀವಂತ ಘಟನೆಯ ಸಂಕಥನ!
2024ರ ಕಳೆದ ಮಾರ್ಚ್ 19ರಂದು ಸಂಜೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿನ ಸಂಜೆಯ ಉಪಹಾರ ಮಂಡಕ್ಕಿ ಮೆಣಸಿನಕಾಯಿ ರುಚಿಯನ್ನು ಆಸ್ವಾದಿಸಿ, ಆ ಸಮ್ಮೇಳನದ ಶಿಸ್ತು, ಅಚ್ಚುಕಟ್ಟುತನ ಹಾಗೂ ಆ ಕಾರ್ಯಕ್ರಮದ ಯಶೋಗಾಥೆಗೆ ದುಡಿದ ಎಲ್ಲ ಮನಸ್ಸುಗಳಿಗೂ ಮನಸ್ಸಿನಲ್ಲೇ ವಂದಿಸುತ್ತಾ.. ,ನಾನು ಅಂದು ಎಷ್ಟು ಹೊತ್ತಿದ್ದರೂ ಶಾಲಾ ಕರ್ತವ್ಯ ನಿಮಿತ್ತ ಬೆಂಗಳೂರಿಗೆ ಹೋಗುವ ಅವಶ್ಯಕತೆ ಇದ್ದಿದ್ದರಿಂದ ಹರಿಹರದ ಬಸ್ ಸ್ಟಾಪ್ ಗೆ ಬಂದು, ಅಲ್ಲಿಂದ ದಾವಣಗೆರೆಗೆ ಬಂದು, ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬೆಂಗಳೂರಿನ ಬಸ್ ಹತ್ತಬೇಕೆಂದು ಮೊದಲೇ ಯೋಚಿಸಿ ನಿರ್ಧರಿಸಿದ್ದೆ!
ಜೊತೆಯಲ್ಲಿದ್ದ ಎಲ್ಲ ಅಭಿಮಾನದ ಬಂಧುಗಳಿಗೂ ಹೇಳಿ ಹೊರಡಲನುವಾದೆ. ಆದರೆ ಜೊತೆಯಲ್ಲಿದ್ದ ಶಿಕ್ಷಕಿ ಸಾಹಿತಿ- ರತ್ನಸಾಲಿಮಠ್ ಮೇಡಂ ಎಂದಿನಂತೆ ಅವರ ಹೃದಯವಂತಿಕೆಯನ್ನು ತೋರುತ್ತಾ “ಮೇಡಂ ನಮ್ಮ ಯಜಮಾನರಿಗೆ ಹೇಳಿದೀನಿ ಕಾರು ತರ್ತಿದಾರೆ ನಿಮ್ಮನ್ನು ನಾವು ಬಸ್ ಸ್ಟ್ಯಾಂಡ್ ಗೆ ಡ್ರಾಪ್ ಮಾಡುತ್ತೇವೆ. ನಿಮ್ಮ ಟೈಮ್ ಸೇವ್ ಆಗತ್ತೆ. ನೀವು ನಮ್ಮ ಮನೆಗೂ ಕೂಡ ಬರದೆ ಹೋಗ್ತಿದೀರಿ ಇಷ್ಟಾದರೂ ನಿಮಗೆ ನಾವು ಅಭಿಮಾನದಿಂದ ಮಾಡಲು ಬಿಡಿ ! ಎಂದು ನನ್ನ ತಡೆದರು! ಸ್ವಲ್ಪ ಹೊತ್ತಿನಲ್ಲೇ ಬಂದ ಅವರ ಕಾರಿನಲ್ಲಿ ಹಿಂದಿನ ಸೀಟಲ್ಲಿ ನನ್ನ ಕೂರಿಸಿ ನನ್ನ ಪಕ್ಕದಲ್ಲೇ ಕುಳಿತು ಕೊಳ್ಳಲು ಬಂದಾಗ “ಮೇಡಂ ನೀವು ಮುಂದೆ ನಿಮ್ಮ ಯಜಮಾನರ ಪಕ್ಕ ಕುಳಿತುಕೊಳ್ಳಿ ಎಂದೆ.” ಆಗ ಅವರು “ಏನ್ ಮೇಡಂ ನೀವು ! ಯಜಮಾನರು ಸದಾ ಇರ್ತಾರೆ! ನಿಮ್ಮ ಭೇಟಿ ನಮಗೆ ಬಹಳ ಅಪರೂಪ ಅದೂ ಅಲ್ಲದೆ ಅದು ಸಜ್ಜನಿಕೆ ಅಲ್ಲ !” ಎಂದು ಮತ್ತೆ ನನ್ನ ಪಕ್ಕದಲ್ಲೇ ಬಂದು ಕುಳಿತರು. ಕಾರು ಐದು ನಿಮಿಷದಲ್ಲಿ ಬಸ್ ಸ್ಟ್ಯಾಂಡ್ ತಲುಪಿತು.
ಅಲ್ಲಿಂದ ನಾನು ಡಿವಿಜಿಗೆ ಹೋಗುವ ಬಸ್ ಹತ್ತಿದೆ. ಆಗಲೇ ಸಂಜೆ ಏಳುಗಂಟೆ ಆಗಿದೆ… ಬೆಳಿಗ್ಗೆ ಬೇರೆ ಎಂಟು ಗಂಟೆಗೆ ಬೆಂಗಳೂರಿನಲ್ಲಿ ಸ್ಕೂಲ್ ಡ್ಯೂಟಿಗೆ ಹೋಗಬೇಕಿದೆ. ಬೆಂಗಳೂರಿಗೆ ಹೋಗಿ ಅಲ್ಲಿನ ಮನೆಗೆ ಹೋಗಿ ಫ್ರೆಶ್ ಆಗಿ ಶಾಲೆಗೆ ಹೋಗಲು ಎಷ್ಟು ಹೊತ್ತಾಗುತ್ತೋ… !? ಎಂದುಕೊಳ್ಳುತ್ತಲೇ ದಾವಣಗೆರೆ ರೈಲ್ವೆ ಸ್ಟೇಷನ್ ಹತ್ತಿರ ಆಟೋ ಹಿಡಿಯಲು ಹೋದಾಗ 15 ನೇ ನಂಬರ್ ನ ಸರಸ್ವತಿ ನಗರದಲ್ಲಿನ ನಮ್ಮ ಮನೆ ಕಡೆ ಹೋಗುವ ಸಿಟಿ ಬಸ್ ಬಂದಿತು.
ತಕ್ಷಣ ಹತ್ತಿ ಕುಳಿತೆ! ನೋಡ ನೋಡುತಿದ್ದಂತೆ ದುರ್ಗಮ್ಮನ ಜಾತ್ರೆಯ ತೇರನೇರಿ ಕುಳಿತಂತೆ ಬಸ್ ಜನರಿಂದ ತುಂಬಿ ಹೋಯಿತು ! ಕಂಡಕ್ಟರ್ ಟಿಕೇಟ್ ಕೇಳಲು ಬಂದಾಗ ,,,,ಆಧಾರ್ ಕಾರ್ಡ್ ತೋರಿಸಿದೆ !ನೂಕು ನುಗ್ಗಲಲ್ಲಿ ಆತನಿಗೆ ನನ್ನ ಮುಖ ಕಾಣ್ತಿರಲಿಲ್ಲ ! ಏನ್ರಿ ಹೀಗೆ !? ಇದು ಖಾಸಗಿ ಸಿಟಿ ಬಸ್ ಅಂದರು! ನಾನು ಬ್ಯಾಗೆಲ್ಲ ಹುಡುಕಿದೆ,,,,,ಕ್ಯಾಷ್ ಸಿಗಲಿಲ್ಲ ! ಖಾಲಿ,,,,ಖಾಲಿ,,,,! ಮೊಬೈಲ್ ನಿಂದ ಮಾಡಬಹುದಾದ ಗೋಗಲ್ ಪೇ , ಪೇಟಿಯಂ ಪೇ ,ಫೋನ್ ಪೇ ಅಂತಹ ಕ್ಯಾಷ್ ಲೆಸ್ ವ್ಯವಹಾರ ಇನ್ನೂ ಖಾಸಗಿ ಸಿಟಿ ಬಸ್ ನಲ್ಲಿ ಬಂದಿಲ್ಲ!
ಕತ್ತಲಲ್ಲಿ ಬಸ್ ಬಣ್ಣ ಸರಿಯಾಗಿ ಕಾಣದೆ,ಬೇಗ ಹೋಗುವ ಭರದಲ್ಲಿ ಖಾಸಗಿ / ಗೌರ್ಮೆಂಟ್ ಬಸ್ ಬಗ್ಗೆ ಸರಿಯಾಗಿ ನಾನು ಗಮನ ಮಾಡದೆ ಬಸ್ ಹತ್ತಿಬಿಟ್ಟು ಕುಳಿತಿದ್ದೆ! ಸಾಮಾನ್ಯವಾಗಿ ಕ್ಯಾಷ್ ಕೂಡ ಯಾವಾಗಲೂ ಐನೂರು /ಆರುನೂರು ರೂಪಾಯಿಗಳಷ್ಟು ಆದರೂ ಬ್ಯಾಗಲ್ ಇರ್ತಿತ್.ಆದರೆ ಎಲ್ಲಿ ಹೋದರೂ ಕ್ಯಾಷ್ ಲೆಸ್ ವ್ಯವಹಾರ ಮಾಡ್ತಾ ಇರ್ತಿದ್ದ ನನಗೆ ಕ್ಯಾಷ್ ಖಾಲಿಯಾಗಿದ್ದೂ ಗಮನಕ್ಕಿರಲೇ ಇಲ್ಲ!
ತಕ್ಷಣ ಎಚ್ಚರಗೊಂಡು , ಬಸ್ ಇನ್ನೂ ಹೊರಡದ ಕಾರಣ ಬಸ್ಸಿನೊಳಗಿನ ದುಗ್ಗಮ್ಮನ ಜಾತ್ರೆಯ ಸಡಗರ ಸೊಂಪು ಇಂಪಿನ ಸಂಭ್ರಮದ ಕಲರವಗಳ ನೂಕು ನುಗ್ಗಲಿನ ನಡುವೆ ,,,,ಇಳಿಯಲು ಹೋದೆ! ನನ್ನ ಪಕ್ಕ ಕುಳಿತಿದ್ದ ಜಾನಪದದ ಸೊಗಡನ್ನೇ ಮೈ ತುಂಬ ಹೊದ್ದಿದ್ದ ಅಪರಿಚಿತ ಹಿರಿಯ ವನಿತೆಯ ಕೈಯೊಂದು ನನ್ನ ಕೈಯನ್ನು ಬಿಗಿಯಾಗಿ ಹಿಡಿದು ತಡೆಯಿತು! ಅದೂವರೆಗೆ ನಾನು ಕ್ಯಾಷ್ ಗಾಗಿ ನನ್ನ ಬ್ಯಾಗ್ ಹುಡುಕಾಡಿದ್ದು.. ನನ್ನ ಮುಖ ಭಾವ ಗಮನಿಸಿದ್ದ ಆ. ಹಿರಿಯ ವನಿತೆ… ಮೇಡಂ ಇಳಿಯಬೇಡಿ! ತಗೋಳಿ ನಾನು ಕೊಡ್ತೀನಿ… ! ಅಂದು ತನ್ನ ಸಂಚಿಯಿಂದ ಇಪ್ಪತ್ತು ರೂಪಾಯಿ ನೋಟು ಕೊಡಲು ಮುಂದಾಯಿತು! ನಾನು “ಬೇಡಮ್ಮ… ನಾನು ಬಸ್ ಇಳಿದು ಆಟೋ ಹೋಗ್ತೀನಿ..
ಆಟೋ ಡ್ರೈವರ್ ಫೋನ್ ಪೇ ವ್ಯವಸ್ಥೆ ಹೊಂದಿರ್ತಾರೆ.. ಎಂದೆ. ” ಅವ್ವಾ ! ನೀ ನನ್ನ ಮಗಳಿದ್ದಂಗ್ ಅನ್ಕಂತೀನಿ! ಈ ರಾತ್ರಿ ಹೊತ್ನಾಗ್…ಕೆಲವು ಜನ ಭಕ್ತಿ ಹೆಸರಲ್ಲಿ ಕುಡಿದು ತಿಂದು ಮಜ ಮಾಡುವ ದುಗ್ಗಮ್ಮನ ಜಾತ್ರಿಯ ಈ ಅಮಲಿನ ಹೊತ್ನಾಗ.. ಈ ನೂಕು ನುಗ್ಗಲಿನ್ಯಾಗ ಎಲ್ಲಿ ಇಳಿದು ಪೇಚಾಡ್ತಿಯವ್ವಾ ! ನೀನು ಐಕ್ಳಿಗೆ ಸಾಲಿ ಕಲಿಸೋ ಮೇಡಂ ಇದ್ದಂಗ್ ಇದಿಯಾ… ! ನಿಂಗ್ ಹತ್ ರೂಪಾಯಿ ನಾನು ಕೊಟ್ ತಕ್ಷಣ ನಾನೇನು ಬಡವಿ ಆಗಂಗಿಲ್ಲ ! ತಗಳವ್ವ ಆ ಕಂಡಕ್ಯರ್ ಗಾ ಕೊಡು ಅಂದು ನನ್ನ ಕೈ ಎಳೆದು ಸೀಟಿನಲ್ಲಿ ಕೂರಿಸಿ ಇಪ್ಪತ್ತು ರೂಪಾಯಿ ಕೊಟ್ಟಿತು! ಅಷ್ಟರಲ್ಲಿ ಕಂಡಕ್ಟರ್ ನನ್ನ ಕಂಡು , ಶಶಿಕಲಾ ಮೇಡಂ ! ನೀವಾ ! ನನಗೆ ಗೊತ್ತೇ ಆಗಲಿಲ್ಲ ಮೇಡಂ ನೀವಂತ! ನೀವು ಅದೆಷ್ಟು ಸರ್ತಿ ನಿಮ್ಮ ಜೊತೆಗೆ ಕುಳಿತು ಪ್ರಯಾಣ ಮಾಡುವ ಟೀಚರ್ಸ್ ಗೆ ಟಿಕೇಟ್ ತೆಗೆಸಿದ್ದೀರಿ! ನಾನೇ ಖುದ್ದು ಕಂಡಿದೀನಿ!… ಒಂದೆರಡು ಬಾರಿ ನನಗೇ ಹತ್ ರೂ ಕೊಡುವ ಕಡೆ ಇಪ್ಪತ್ತು ರೂ ಕೊಟ್ಟು ವಾಪಾಸ್ ಕೊಡಲು ನನ್ನ ಹತ್ತಿರ ಚಿಲ್ಲರೆ ಇಲ್ಲದಾಗ ಬಿಟ್ಟು ಹೋಗಿದ್ದೀರಿ ಮೇಡಂ ! ಸಾರಿ ನನಗೆ ಗೊತ್ತಾಗಲಿಲ್ಲ ಮೇಡಂ ಅಂದರು!
ಇರಲಿ ನಿಮ್ಮ ಡ್ಯೂಟಿ ಸರಿ ಮಾಡ್ತಿದೀರಿ… ಸಂತೋಷ.ಎಂದು ಆತನ ಕೈಗೆ ಆ ವನಿತೆ ಕೊಟ್ಟ ಹಸಿರು ಬಣ್ಣದ ಇಪ್ಪತ್ತು ರೂಪಾಯಿ ನೀಡಿ,ಹತ್ತು ರೂ ವಾಪಾಸ್ ಪಡೆದು ವನಿತೆಗೆ ವಾಪಾಸ್ ಮಾಡಿದೆ ! ಅದೂವರೆಗೆ ಅಪರಿತಳಾಗಿದ್ದ , ಅಪ್ಪಟ ಗ್ರಾಮೀಣ ಗೃಹಿಣಿ ! ಜಾನಪದ ವೇಷಭೂಷಣದಲ್ಲಿ ಕಾಂತಿಯಿಂದ ಮಿನುಗುತಿದ್ದ ಆ ಜಾನಪದ ನಾರಿ ನನಗೆ ಮಾನವತಾ ಮಮತೆಯಾಗಿ ಅಳಿಲ ಸೇವೆಯಂತೆ ಕಾಯಕವಾಗಿ , ನನ್ನ ಆ ಕ್ಷಣದ ಸಂದರ್ಭಕ್ಕೆ ಗೌರವಯುತವಾಗಿ ಪೋಷಣೆ ಮಾಡಿದ್ದಳು!
ಇದೆಲ್ಲಾ ಐದು ನಿಮಿಷದಲ್ಲಿ ಆಗಿದ್ದರೂ ಹತ್ತು ರೂಪಾಯಿ ನೋಟಿನ ಪಾಠ ನನಗೆ ಬೆಳಕಾಗಿತ್ತು! ಮಗ ನಿತ್ಯ ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ “ಅಮ್ಮಾ ! ಬ್ಯಾಗಿನಲ್ಲಿ ಕ್ಯಾಷ್ ಇದೆಯಾ !? ನೋಡಿಕೊಳ್ಳಮ್ಮ ! ಒಂದೇ ಸಮ ಎಲ್ಲ ಕಡೆ ಕ್ಯಾಷ್ ಲೆಸ್ ವ್ಯವಹಾರ ಇರಲ್ಲ ಬೇಕಾಗತ್ !” ಎಂದು ನಾನು ನಿತ್ಯ ಶಾಲಾ ಕರ್ತವ್ಯಕ್ಕೆ ಹೊರಡುವಾಗ ಬಹಳ ಹೇಳುತಿದ್ದ ಕಾಳಜಿಯ ಮಾತು ಪ್ರತಿಧ್ವನಿಸಿದಂತಾಯಿತು! ಜೊತೆಗೆ ಇಷ್ಟು ಮಾತೃ ಹೃದಯದಿಂದ ನನಗೆ ಸಹಾಯ ಮಾಡಿದ ಗುರುತು ಪರಿಚಯವೇ ಇರದ ಈ ವನಿತೆಗೆ ಹತ್ತು ರೂಪಾಯಿ ಹೇಗೆ ವಾಪಾಸ್ ನೀಡುವುದು!? ಎನ್ನುತ್ತಾ ,,,ಫೋನ್ ಪೇ ಮಾಡಲಾ ಅಮ್ಮ ಅಂದೆ! “ಅವೆಲ್ಲಾ ನಂಗ್ ತಿಳಿಯಕಿಲ್ಲ ಮೇಡಂ” ಎಂದ ವನಿತೆಯ ನೋಡಿದೆ! ಕೈ ತುಂಬಾ ಹಸಿರು ಬಳೆ,ಹಣೆಯಲ್ಲಿ ಕಾಸಗಲದ ಕುಂಕುಮ, ಕೆನ್ನೆ ತುಂಬ ಅರಿಶಿಣ ಬಳಿದ ಆ ಜಾನಪದ ಗರತಿಯ ಮುಖ ಗಮನಿಸಿದೆ! ನನಗೆ ಏನು ಹೊಳೆಯಿತೋ.. !” ಅಮ್ಮಾ ನಿಮಗೆ ಜಾನಪದ ಹಾಡು ಹೇಳಲು ಬರತ್ತಾ ಅಂದೆ!?” “ಮೇಡಮ್ಮು! ನಾನು ಬಹಳ ಚಂದಾಗಿ ಭಜನೆ , ಸೋಬಾನೆ ಹಾಡ್ತೀನಿ,,,,ಕೊರವಂಜಿ ಪದ ಹಾಡ್ತೀನಿ,,,,ನಂಗ್ ಒಮ್ಮೆ ಬಹುಮಾನ ಬಂದಾದೆ ಅಂತು! ”
ನಿಮ್ಮ ಊರು ಯಾವುದಮ್ಮ!? ಹೆಸರೇನಮ್ಮ !? ಎಂದೆ. “ನನ್ನ ಹೆಸರು…ಹನುಮಕ್ಕ ಉಳ್ಳಪ್ನೋರು.
ಊರು- ಹಾನಗಲ್ಲ ಇಲ್ಲಿ ದಾವಣಗೇರಿನಲ್ಲಿ ನಮ್ಮ ನೆಂಟರು ಇದಾರ,,,,ದುರ್ಗಮ್ಮನ ಜಾತ್ರಿಗಂತ
ಕರೆದಿದ್ರು ಅದಕ್ಕಾ ಬಂದೀವಿ ಅಂತು! ” ಅದು ಸಿಟಿ ಬಸ್ ! ಕೆಲವೇ ನಿಮಿಷಗಳ ಪ್ರಯಾಣ,,,,ನನಗೆ ಈ ಹಿರಿಯ ವನಿತೆ ಮತ್ ಸಿಕ್ತಾರೋ ಇಲ್ಲವೋ ಗೊತ್ತಿಲ್ಲ ! ಇಳಿದು ಹೋಗುವ ಮುನ್ನ ಹತ್ತು ರೂಪಾಯಿ ರಿಣ ಅಂತೂ ತೀರಿಸಕಾಗಲ್ಲ ! ಅದು ಬೆಲೆಕಟ್ಟಲಾಗದಷ್ಟು ಮಾನವತಾ ಬಾಂಧವ್ಯದ ಗರಿಮೆ ಆಗಿತ್ತು ನನ್ನ ಪಾಲಿಗೆ! ಅದು ಕೆಲವೇ ನಿಮಿಷಗಳಲ್ಲಿ ಘಟಿಸಿದ ಕನ್ನಡವ್ವನ ಔದಾರ್ಯದ ಸಿರಿ ಅನ್ನಿಸಿತ್ತು ! ಅಮ್ಮ ನಿಮಗೆ ಬರುವ ಒಂದೆರಡು ಭಜನೆ ಹಾಡಿ ಅಂದೆ! ಆ ಗರತಿ ಇಂಪಾಗಿ ಹಾಡ ತೊಡಗಿದಳು ! ಇಡೀ ಬಸ್ಸಿನ ಕಿಕ್ಕಿರಿದು ತುಂಬಿದ ಜನರ ಗಲಾಟೆಯೆಲ್ಲಾ ನಿಂತು ನಿಶ್ಯಬ್ಧವಾಯಿತು ! ಅಷ್ಟು ಮಧುರವಾದ ಕಂಠದಿಂದ ಭಜನೆ ಮೊಳಗಿತ್ತು! ಸೋಬಾನೆ ಹಾಡವ್ವ ಅಂದೆ!,,,,ಹಾಡಿದರು! ಬಸ್ಸಿನ ಜನ ಓಹ್… ಬಸ್ಸೊಳಗೇ ಸಾಹಿತ್ಯ ವೇದಿಕೆ ಅಂದು ಜೋರಾಗಿ ಚಪ್ಪಾಳೆ ಹಾಕಿದರು!
ಕೊರವಂಜಿ ಪದ ಹಾಡಿ ಅಂದೆ,,,,,ಬೇಗ ಬೇಗ,,,,ನಿಮ್ಮ ಸ್ಟ್ಯಾಂಡ್ ಬಂತು,,, ಅಂದೆ! ಎಲ್ಲರ ಕಿವಿ ಸೊಂಪಾಗಿ ಹೃದಯ ತಣಿವಂತೆ ಹಾಡಿದರು ,,,,ಆ ಅಪ್ಪಟ ಜಾನಪದ ಗರತಿ ! ಇನ್ನೆರಡು ಸ್ಟಾಪ್ ದಾಟಿದ ತಕ್ಷಣ ಆ ಗರತಿ ಇಳಿಯುವುದಿತ್ತು ! ಮತ್ತೆ ಬೇಗನೇ ಮೊಬೈಲ್ ನಿಂದ ಫೋಟೋ ವಿಡಿಯೋ ಮಾಡಿದೆ!
ಅಮ್ಮಾ ! ನೀವು ಬಸ್ಸಿನ ಜನರನ್ನು ನಿಮ್ಮ ಪ್ರತಿಭೆಯಿಂದ ತಣಿಸಿದ್ದೀರಾ… ಅದಕ್ಕಾಗಿ ನಿಮಗೆ ಈ ಪುಟ್ಟ ಗೌರವ. ಬೇಡ ಅಂತ ಅನ್ನಬಾರದು,, ಇದನ್ನು ನಿಮ್ಮ ಪ್ರತಿಭೆ ಗುರುತಿಸಿ ಮಾಡ್ತಿದೀನಿ…ಅಂದು, ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಸನ್ಮಾನಿಸಿ ಹೊದಿಸಿದ್ದ ಬೆಲೆಕಟ್ಟಲಾಗದ ಶಾಲನ್ನು ಆ ಜಾನಪದ ಪ್ರತಿಭಾನ್ವಿತ ನಾರಿಗೆ ಹೊದಿಸಿದೆ ! “ಮೇಡಂ… ನೀವು ನನ್ನ ಹಾಡು ಕೇಳಿ ಸನ್ಮಾನ ಮಾಡಿಬಿಟ್ರಿ ! ಬಾಳ ಖುಷಿಯಾತು ರೀ…!”ಅಂದು ಕಣ್ತುಂಬ ಆನಂದ ಭಾಷ್ಪ ತುಂಬಿಕೊಂಡು ನನಗೂ ಬಸ್ಸಿನ ಎಲ್ಲರಿಗೂ ಕೈ ಮುಗಿಯುತ್ತಾ…ತನ್ನ ನಿಲ್ದಾಣದಲ್ಲಿ ಆ ಮಾನವತಾ ಸಿಂಚನದ ಬಾಂಧವ್ಯದ ಜಾನಪದ ಜೀವ ಇಳಿಯಿತು ! ಬಸ್ಸಿನ ಜನರೆಲ್ಲರೂ ನನ್ನ ಕಡೆ ನೋಡುತ್ತಾ.. ನಿಂತಿದ್ದರು!
ಅದರಲ್ ಒಬ್ಬರು ,,,,ಮೇಡಂ ಅವರು ನಿಮಗೆ ಮಾಡಿದ್ದಕ್ಕಿಂತ ನೀವು ಆ ಅಜ್ಜಿಗೆ ತೋರಿದ ಗೌರವ ಹೃದಯವಂತಿಕೆ ಬಹಳ ದೊಡ್ಡದಾಯಿತು ! ಎಂದರು. ಇವತ್ತು ಸಿಟಿ ಬಸ್ ನ ಪ್ರಯಾಣ ಬಹಳ ಸಂತೋಷ ನೀಡಿತು ನಿಮ್ಮಿಂದ ಎಂದರು ! ಮತ್ತೊಬ್ಬರು. ಇನ್ನು ಕೆಲವರು,,,ಅಜ್ಜಿಯ ಹತ್ತು ರೂಪಾಯಿ ರಿಣ ತೀರಿಸಿಬಿಟ್ರಿ ಮೇಡಂ! ಅದೂ ಆಕೆಯ ಪ್ರತಿಭೆಯನ್ನು ಗಮನಿಸಿ ಹಾಡಿಸಿ,,,, ಗುಡ್,,, ಅಂದರು ! ನಿಮ್ಮಿಬ್ಬರ ಭೇಟಿ, ಮಾನವತೆ ನಡೆ, ಮೆಚ್ಚುವಂತಹದ್ದು ಮೇಡಂ ಅಂದರು ! ಹೀಗೆ ಅದೂವರೆಗಿನ ಜೀವಂತ ಮಾನವತಾ ಘಟನೆಯನ್ನು ಕಂಡು ,ಬಸ್ಸಿನ ಜನರು ಸಹಜ ಆಡಿದ, ಅನಿಸಿಕೆ ಪ್ರಶಂಸೆಗಳನ್ನು ಆಲಿಸುತ್ತಾ ಎಲ್ಲರಿಗೂ ನಮಿಸಿ ನನ್ನ ನಿಲ್ದಾಣದಲ್ಲಿ ಇಳಿದೆ…!
ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಗುರುಗಳಾದ. ಡಾ. ಎಂ ಜಿ ಈಶ್ವರಪ್ಪ ಸರ್ ಅವರು ನುಡಿದ ಮಾತುಗಳ ಪರಿಕಲ್ಪನೆ… ಸಾಮಾಜಿಕ, ಸಾಂಸ್ಕೃತಿಕ ಬದುಕುಗಳು, ಸಹಕಾರ, ಸಂಘಟನೆ, ಸಹಾನುಭೂತಿ ,ಪರಸ್ಪರ ಗೌರವ, ಜೀವನ ನೆಮ್ಮದಿಯ ಹಾಡುಗಳ ಪರಿ.. ಎಲ್ಲ ನೆನಪಾಗಿ ಮನಸ್ಸು ತೃಪ್ತಿಯಿಂದ ಸಿಹಿಮೌನದಲ್ಲಿ ಲೀನವಾಗಿ
ವಿ.ಮನೋಹರ್ ಅವರ ಚಲನಚಿತ್ರಗೀತೆಯನ್ನು ಸ್ಮರಿಸುತ್ತಾ…