ರಾಯ್ಬರೇಲಿ (ಉತ್ತರ ಪ್ರದೇಶ): ಭಾರತದಲ್ಲಿ ಸನಾತನ ಧರ್ಮದ ಧ್ವಜ ಬಾನತ್ತರಕ್ಕೆ ಹಾರಾಡುವವರೆಗೂ ದೇಶಕ್ಕೆ ಯಾವುದೇ ಶಕ್ತಿ ಕೂಡ ಸಣ್ಣ ಹಾನಿಯನ್ನೂ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.
ಉತ್ತರ ಪ್ರದೇಶದ ರಾಯ್ಬರೇಲಿಯ ಉಂಚಾಹಾರ್ನಲ್ಲಿ ಆಯೋಜಿಸಲಾಗಿದ್ದ ‘ಶ್ರೀ ಶಿವ ಮಹಾಪುರಾಣ ಕಥಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯು ದೇಶದ ಏಕತೆ ಹಾಗೂ ಸಮಗ್ರತೆಯ ನಿಜವಾದ ಶಕ್ತಿ ಎಂದು ಬಣ್ಣಿಸಿದರು.
ಸುದ್ದಿ ಮುಖ್ಯಾಂಶಗಳು
ಧರ್ಮ ಎಂದರೆ ಕೇವಲ ಪೂಜಾ ಪದ್ಧತಿಯಲ್ಲ:
ಸಿಎಂ ಯೋಗಿ ಮಾತನಾಡಿ, “ನಾವು ಧರ್ಮವನ್ನು ಕೇವಲ ಪ್ರಾರ್ಥನೆ ಅಥವಾ ಪೂಜಾ ಪದ್ಧತಿಗೆ ಸೀಮಿತಗೊಳಿಸಿಲ್ಲ. ಅದನ್ನು ಸಮಾಜದ ಜೀವಶಕ್ತಿ ಎಂದು ಸ್ವೀಕರಿಸಿದ್ದೇವೆ. ರಾಷ್ಟ್ರೀಯ ಕರ್ತವ್ಯ ಮತ್ತು ಸಮಾಜವನ್ನು ಒಂದಾಗಿ ಜೋಡಿಸುವ ಪ್ರೇರಣಾ ಶಕ್ತಿಯೇ ಸನಾತನ ಧರ್ಮ” ಎಂದರು.
ಮಧ್ಯಕಾಲೀನ ಇತಿಹಾಸ ಮತ್ತು ಸಾಂಸ್ಕೃತಿಕ ನಿರೋಧಕ ಶಕ್ತಿ:
ವಿದೇಶಿ ಆಕ್ರಮಣಕಾರರು ಭಾರತದ ಪವಿತ್ರ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ನಡೆಸಿದಾಗಲೂ, ವ್ಯಾಸ ಪೀಠಗಳು ಮತ್ತು ಆಧ್ಯಾತ್ಮಿಕ ಪ್ರವಚನಗಳು ದೇಶದ ಸಾಮಾಜಿಕ ಐಕ್ಯತೆಯನ್ನು ಕಾಪಾಡಿದವು. ರಾಜಕೀಯವಾಗಿ ದೇಶ ದುರ್ಬಲವಾಗಿದ್ದ ಮಧ್ಯಕಾಲೀನ ಅವಧಿಯಲ್ಲೂ ಧಾರ್ಮಿಕ ಕೇಂದ್ರಗಳು ಭಾರತದ ಸಂಸ್ಕೃತಿಯನ್ನು ಜೀವಂತವಾಗಿಟ್ಟವು ಎಂದು ಸ್ಮರಿಸಿದರು.
ಅಕ್ಬರನ ಆಹ್ವಾನ ತಿರಸ್ಕರಿಸಿದ್ದ ಸಂತ ತುಲಸೀದಾಸ್ ಉದಾಹರಣೆ:
ರಾಮಚರಿತಮಾನಸ ರಚಿಸಿದ ಗೋಸ್ವಾಮಿ ತುಲಸೀದಾಸ್ ಅವರ ಪ್ರಸಂಗವನ್ನು ಉಲ್ಲೇಖಿಸಿದ ಅವರು, ಮೊಘಲ್ ಚಕ್ರವರ್ತಿ ಅಕ್ಬರನು ತನ್ನ ಆಸ್ಥಾನದ ‘ನವರತ್ನ’ಗಳಲ್ಲಿ ಸೇರಲು ತುಲಸೀದಾಸರಿಗೆ ಆಹ್ವಾನ ಕಳುಹಿಸಿದ್ದನು. ಆದರೆ, ಅದನ್ನು ವಿನಮ್ರವಾಗಿ ತಿರಸ್ಕರಿಸಿದ ತುಲಸೀದಾಸರು, “ನನಗೆ ಕೇವಲ ಒಬ್ಬನೇ ರಾಜ, ಅದು ಭಗವಾನ್ ಶ್ರೀರಾಮ. ವಿದೇಶಿ ಆಕ್ರಮಣಕಾರ ಅಕ್ಬರನನ್ನು ನಾನು ರಾಜನೆಂದು ಸ್ವೀಕರಿಸುವುದಿಲ್ಲ” ಎಂದು ಸವಾಲೆಸೆದಿದ್ದರು ಎಂದು ತಿಳಿಸಿದರು.
ಸನಾತನ ಪರಂಪರೆಗೆ ಆಪತ್ತು ಬರಲು ಸಾಧ್ಯವಿಲ್ಲ:
ದೇಶದಲ್ಲಿ ಧಾರ್ಮಿಕ ಕಥೆಗಳು, ಆಧ್ಯಾತ್ಮಿಕ ಚಿಂತನೆಗಳು ನಿರಂತರವಾಗಿ ನಡೆಯುತ್ತಿರುವವರೆಗೆ ಸನಾತನ ಧರ್ಮದ ಧ್ವಜ ಎಂದಿಗೂ ತಗ್ಗುವುದಿಲ್ಲ. ಈ ಪರಂಪರೆ ಮುಂದುವರಿದಷ್ಟು ಕಾಲ ಭಾರತ ಸುರಕ್ಷಿತವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.





Leave a comment